ಜೈಪುರ: ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಆಗಿದ್ದ ಸಚಿನ್ ಪೈಲಟ್ ಆ ಪಕ್ಷಕ್ಕೆ ಕೈ ಕೊಟ್ಟಿದ್ದಾರೆ. ಇತ್ತ ಬಿಜೆಪಿ ಹಿಡಿಯಲು ನಿರಾಕರಿಸುತ್ತಿದ್ದಾರೆ. ಅಂದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ರಚಿಸಿ ರಾಜಸ್ಥಾನದಲ್ಲಿ ಅದನ್ನು ಯಶಸ್ವಿಯಾಗಿ ಸಂಘಟಿಸಿ, ಅಧಿಕಾರಕ್ಕೆ ಏರುತ್ತಾರಾ? ಸದಾ ರಾಜ್ಯದ ಮತದಾರರು ಪೈಲಟ್ ಅವರ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರಾ ಎಂಬ ಪ್ರಶ್ನೆಗಳು ಈಗ ಎಲ್ಲರನ್ನೂ ಕಾಡುತ್ತಿದೆ.
ಸ್ವಾತಂತ್ರ್ಯ ನಂತರದಲ್ಲಿ ರಾಜಸ್ಥಾನದ ರಾಜಕೀಯವನ್ನು ಅವಲೋಕಿಸಿದಾಗ ಅಲ್ಲಿನ ಮತದಾರರು ರಾಷ್ಟ್ರೀಯ ಪಕ್ಷಗಳಲ್ಲೇ ಹೆಚ್ಚು ನಂಬಿಕೆ ಇರಿಸಿರುವುದು ಗೊತ್ತಾಗುತ್ತದೆ. ಒಮ್ಮೆ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದರೆ, ಮತ್ತೊಮ್ಮೆ ಕಾಂಗ್ರೆಸ್, ಮಗದೊಮ್ಮೆ ಬಿಜೆಪಿ ಪಕ್ಷವನ್ನೇ ಬೆಂಬಲಿಸುತ್ತಾ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕಾಂಗ್ರೆಸ್ ಮತ್ತು ಬಿಜೆಪಿಗಳಲ್ಲಿ ಪ್ರಭಾವಿ ನಾಯಕರೆನಿಸಿದ್ದ ಘನಶ್ಯಾಮ್ ತಿವಾರಿ, ಕಿರೋರಿಲಾಲ್ ಮೀನಾ, ದೇವಿ ಸಿಂಗ್ ಭಾಟಿ, ಲೋಕೇಂದ್ರ ಸಿಂಗ್ ಕಲ್ವಿ ಮತ್ತು ಹನುಮಾನ್ ಬೇನಿವಾಲ್ ಕೂಡ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳನ್ನು ರಚಿಸಿ ಹಿನ್ನಡೆ ಅನುಭವಿಸಿದವರೇ.
2018ರ ವಿಧಾನಸಭೆ ಚುನಾವಣೆಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಬಿಜೆಪಿಯಲ್ಲಿ ಭಾರಿ ಜನಪ್ರಿಯತೆ ಗಳಿಸಿಕೊಂಡಿದ್ದ ಘನಶ್ಯಾಮ್ ತಿವಾರಿ ಅವರು ಅಂದಿನ ಸಿಎಂ ವಸುಂಧರರಾಜೇ ವಿರುದ್ಧ ಸಿಡಿದೆದ್ದು ಭಾರತ್ ವಾಹಿನಿ ಪಾರ್ಟಿ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದರು. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಪ್ರಿಯ ಮುಖಂಡ ಎನಿಸಿಕೊಂಡಿದ್ದರೂ ತಮ್ಮ ಪಕ್ಷಕ್ಕೆ ಒಂದೇ ಒಂದು ಸ್ಥಾನ ಗಳಿಸಿಕೊಳ್ಳಲು ಅವರು ವಿಫಲರಾದರು. ಜನರಿಂದ ತಿರಸ್ಕೃತಗೊಂಡ ಅವರು ಇದೀಗ ಕಾಂಗ್ರೆಸ್ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಅರ್ಜುನ್ -ಮಲೈಕಾ ಮದುವೆಗೆ ಸೋನಮ್ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ?
ಇದಕ್ಕೂ ಮೊದಲು ಕಿರೋರಿ ಲಾಲ್ ಮೀನಾ ಕೂಡ 2013ರಲ್ಲಿ ಬಿಜೆಪಿಯಿಂದ ಸಿಡಿದು ಹೊರಬಂದು ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿಯನ್ನು ರಾಜಸ್ಥಾನದಲ್ಲಿ ಸಂಘಟಿಸಲು ಯತ್ನಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾದ ಮೂರನೇ ರಾಜಕೀಯ ಪಕ್ಷ ಇದಾಗಲಿದೆ ಎಂದೇ ಬಿಂಬಿಸಿದ್ದರು. ಆದರೆ, ತಮ್ಮ ಪ್ರಯತ್ನ ವಿಫಲವಾದ ಬಳಿಕ 2018ರಲ್ಲಿ ಬಿಜೆಪಿಗೆ ಮರಳಿದ್ದರು. ಸದ್ಯ ಅವರು ಬಿಜೆಪಿಯ ಸಂಸತ್ ಸದಸ್ಯರಾಗಿದ್ದಾರೆ.
ಹೀಗೆ ಹಿರಿಯ ಮುಖಂಡರೆಲ್ಲರೂ ವಿಫಲರಾಗುತ್ತಿದ್ದರೂ ಪಾಠ ಕಲಿಯದ ಜಾಟ್ ಸಮುದಾಯದ ಕಿರಿಯ ಮುಖಂಡ ಹನುಮಾನ್ ಬೇನಿವಾಲ್ 2018ರಲ್ಲಿ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿ ಸ್ಥಾಪಿಸಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಮುದಾಯದ ಯುವಪೀಳಿಗೆಯವರಲ್ಲಿ ಅತ್ಯಂತ ಜನಪ್ರಿಯ ಮುಖಂಡ ಎನಿಸಿಕೊಂಡಿದ್ದರೂ ತಮ್ಮ ಪಕ್ಷಕ್ಕೆ ಮೂರು ಸ್ಥಾನ ಗಳಿಸಿಕೊಳ್ಳುವಷ್ಟರಲ್ಲಿ ಏದುಸಿರು ಬಿಟ್ಟಿದ್ದರು. ಕೊನೆಗೆ ಅವರು ಬಿಜೆಪಿಯೊಂದಿಗೆ ಕೈಜೋಡಿಸಿ 2019ರಲ್ಲಿ ತಮ್ಮ ಪಕ್ಷದಿಂದ ಒಬ್ಬ ಸಂಸತ್ ಸದಸ್ಯ ಚುನಾಯಿತನಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಪರಿಸ್ಥಿತಿ ಹೀಗಿರುವಾಗ ರಾಜಸ್ಥಾನದಲ್ಲಿ ಮೂರನೇ ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಸಂಘಟಿಸಿ ಅದನ್ನು ಅಧಿಕಾರಕ್ಕೆ ತರುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಪೈಲಟ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡಿದೆ.
ಕರೊನಾ ಸೋಂಕು ತಗುಲಿದ್ದ ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಚೇತರಿಕೆ