ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಮುಂದಾಗಿರುವ ಬಿಹಾರ ಪೊಲೀಸರು ಗುರುವಾರ ಮುಂಬೈ ತಲುಪಿದ್ದಾರೆ. ಪ್ರಕರಣದಲ್ಲಿ ಹೊಸ ವಿಷಯಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಕುರಿತು ಇದುವರೆಗೂ ನಡೆಸಿರುವ ತನಿಖೆಯ ಕುರಿತು ಮುಂಬೈ ಪೊಲೀಸರಿಂದ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಗುರುವಾರ ಅಥವಾ ಶುಕ್ರವಾರದಂದು ಬಿಹಾರ ಪೊಲೀಸರು ರಿಯಾ ಮನೆ ಬಾಗಿಲು ಬಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಟನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ಜು.25ರಂದು ದೂರು ದಾಖಲಿಸಿದ್ದು, ತಮ್ಮ ಪುತ್ರನ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬ ವರ್ಗದವರು ಸೇರಿ ಒಟ್ಟು ಆರು ಮಂದಿ ನೀಡಿದ ಪ್ರಚೋದನೆ ಕಾರಣ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಬಿಹಾರ ಪೊಲೀಸರು, ನಾಲ್ವರು ಅಧಿಕಾರಿಗಳ ತಂಡವನ್ನು ಮುಂಬೈಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರ ಪೊಲೀಸ್ ಪಡೆಯ ಹಿರಿಯ ಅಧಿಕಾರಿಯೊಬ್ಬರು, ಪ್ರಕರಣದ ಬಗ್ಗೆ ಹೊಸ ವಿಚಾರಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರ ತಂಡ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂಬೈಗೆ ತೆರಳಿದೆ. ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೆ ಮುಂಬೈ ಪೊಲೀಸರು ನಡೆಸಿರುವ ತನಿಖೆಯ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ವಾರಂಟ್ನೊಂದಿಗೆ ಅಲ್ಲಿಗೆ ಹೋಗಿಲ್ಲ ಎಂದು ಹೇಳಿದ್ದಾರೆ.
ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ರಿಯಾ ಚಕ್ರವರ್ತಿ ಒಂದು ವರ್ಷದಲ್ಲಿ 15 ಕೋಟಿ ರೂ. ನಗದನ್ನು ಲಪಟಾಯಿಸಿದ್ದರು. ಸುಶಾಂತ್ಗೆ ಪರಿಚಯವೂ ಇರದಿದ್ದ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ಆ ಮೊತ್ತವನ್ನು ವರ್ಗಾವಣೆ ಮಾಡಿದ್ದರು. ಅಲ್ಲದೆ, ಸುಶಾಂತ್ಗೆ ಒಮ್ಮೆ ಯಾವುದೋ ಒಂದು ಔಷಧವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀಡಿ, ಅವರಿಗೆ ಡೆಂಘಿ ಆಗಿರುವುದಾಗಿ ನಾಟಕ ಆಡಿದ್ದರು ಎಂದು ಕೆ.ಕೆ. ಸಿಂಗ್ ತಮ್ಮ ದೂರಿನಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ಅನ್ಲಾಕ್ ಮಾಡುತ್ತಿರುವ ಸಮಯದಲ್ಲೂ ಆಗಸ್ಟ್ 31ರವರೆಗೆ ಲಾಕ್ಡೌನ್ ವಿಸ್ತರಣೆ!
ಜೂ.14ರಂದು ಸುಶಾಂತ್ ತಮ್ಮ ಮುಂಬೈ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ದಿನಗಳ ಮೊದಲು ನನ್ನ ಪುತ್ರಿ ಆತನನ್ನು ಭೇಟಿಯಾಗಿದ್ದಳು. ಆ ಸಂದರ್ಭದಲ್ಲಿ ಸುಶಾಂತ್ ತುಂಬಾ ಅಸ್ಪಷ್ಟವಾಗಿ ಮಾತನಾಡಿದ್ದ. ಇದರಿಂದ ಹೆದರಿದ್ದ ನನ್ನ ಪುತ್ರಿ ಒಳ್ಳೆಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ರಿಯಾಗೆ ಹೇಳಿದಾಗ, ಮನೆಯಲ್ಲೇ ಆತನಿಗೆ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಆಕೆ ಹೇಳಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷದ ಡಿಸೆಂಬರ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೊಬೈಲ್ಫೋನ್ ನಂಬರ್ ಅನ್ನು ಹಠಾತ್ತಾಗಿ ಬದಲಿಸಿ, ಕುಟುಂಬದವರೊಂದಿಗೆ ಅವರಿಗೆ ಯಾವುದೇ ಸಂಪರ್ಕ ಇರದಂತೆ ನೋಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
2019ರಲ್ಲಿ ಸುಶಾಂತ್ ಅವರು ವೃತ್ತಿಜೀವನದಲ್ಲಿ ಔನತ್ಯಕ್ಕೆ ಏರುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ರಿಯಾ ಚಕ್ರವರ್ತಿ ಸಂಪರ್ಕ ಏರ್ಪಡಿಸಿಕೊಂಡಿದ್ದರು. ಸುಶಾಂತ್ ಅವರ ಸಂಪತ್ತಿನ ಮೇಲೆ ಒಂದು ಕಣ್ಣಿಟ್ಟಿದ್ದ ಅವರು, ಆತನನ್ನು ಬಳಸಿಕೊಂಡು ಬಾಲಿವುಡ್ನಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದರು.
ಒಂದು ಹಂತದಲ್ಲಿ ಸುಶಾಂತ್ ಅವರನ್ನು ಪಟನಾಕ್ಕೆ ವಾಪಸು ಕರೆತರಲು ಪ್ರಯತ್ನಿಸಿದ್ದೆ. ಆದರೆ, ರಿಯಾ ಮತ್ತು ಅವರ ಕುಟುಂಬ ವರ್ಗದವರು ಇದಕ್ಕೆ ಅವಕಾಶ ಕೊಡಲಿಲ್ಲ. ರಿಯಾ ಮತ್ತು ಇತರರು ತಮ್ಮನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ಯತ್ನಿಸುತ್ತಿರುವುದಾಗಿ ಸುಶಾಂತ್ ನನ್ನ ಬಳಿ ಒಮ್ಮೆ ಹೇಳಿಕೊಂಡಿದ್ದ ಎಂದು ತಿಳಿಸಿದ್ದರು.
ಸುಳ್ಳು ಹೇಳಿ ಬಾಯ್ಫ್ರೆಂಡ್ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!