ಬೆಂಗಳೂರು: ಇಲ್ಲೊಬ್ಬ ಭೂಪ, ವಿಧವೆ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ. ನನಗಿನ್ನೂ ಮದ್ವೆ ಆಗಿಲ್ಲ, ನಿನಗೆ ಬಾಳು ಕೊಡ್ತೀನಿ. ನಿನ್ನ ಮಗಳಿಗೆ ಅಪ್ಪನಾಗಿ ಇರುವೆ ಎಂದು ನಂಬಿಸಿ ಆಕೆಯ ಮನೆ ಸೇರಿಕೊಂಡವ ಕೆಲವೇ ದಿನಗಳಲ್ಲಿ ತನ್ನ ವರಸೆ ಬದಲಿಸಿದ್ದಾನೆ. ಎಲ್ಲವನ್ನೂ ಕಳೆದುಕೊಂಡ ಮಹಿಳೆ ಕಣ್ಣೀರು ಹಾಕುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿರುವ ಮಹಿಳೆ ಪ್ರದೀಪ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಮಹಿಳೆಗೆ ಈಗಾಗಲೇ ಮದುವೆ ಆಗಿದ್ದು, ಹೆಣ್ಣು ಮಗು ಇದೆ. ಪತಿ ತೀರಿಕೊಂಡಿದ್ದು, ಮಗಳ ಜತೆ ಬಸವೇಶ್ವರ ನಗರದಲ್ಲಿ ವಾಸವಿದ್ದಾರೆ. ಕೆಲ ತಿಂಗಳ ಹಿಂದೆ ಪ್ರದೀಪ್ ಎಂಬಾತನ ಪರಿಚಯ ಮಹಿಳೆಗೆ ಆಗಿತ್ತು. ಇವರ ಹಿನ್ನೆಲೆ ತಿಳಿದುಕೊಂಡ ಪ್ರದೀಪ್, ಮಹಿಳೆಯ ವಿಶ್ವಾಸಗಿಟ್ಟಿಸಿಕೊಂಡು, ಸಲುಗೆ ಬೆಳೆಸಿಕೊಂಡಿದ್ದ.
ನನಗೆ ಮದುವೆ ಆಗಿಲ್ಲ. ನಿನ್ನನ್ನೇ ಪ್ರೀತಿಸುವೆ. ನೀನು ವಿಧುವೆ ಆಗಿಯೇ ಉಳಿಯಬಾರದು, ನಾನು ಬಾಳು ಕೊಡುವೆ ಎಂದು ಮಹಿಳೆಗೆ ನಂಬಿಸಿದ್ದ. ಹೊಸ ಬಾಳು ಸಿಗುವ ಆಸೆಯಲ್ಲಿ ಮಹಿಳೆಯೂ ಒಪ್ಪಿದ್ದರು. ಮಹಿಳೆಯ ಮನೆಯಲ್ಲೇ ಪ್ರದೀಪ್ ಉಳಿದುಕೊಂಡಿದ್ದ. ಪ್ರಿಯತಮನನ್ನು ನಂಬಿ ಮನೆಗೆ ಸೇರಿಸಿಕೊಂಡಿದ್ದ ಮಹಿಳೆಗೆ ಬಾರೀ ಸಂಕಷ್ಟ ಎದುರಾಗಿದೆ.
ಉಂಡು ತಿಂದು ಅಲ್ಲೇ ಇದ್ದ ಪ್ರದೀಪ್, ಇದೀಗ ಪ್ರಿಯತಮೆಯ ಮನೆಯಲ್ಲಿದ್ದ 15 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ಪರಾರಿಯಾಗಿದ್ದಾನೆ. ನೊಂದ ಮಹಿಳೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಪ್ರದೀಪ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.