ಯಾದಗಿರಿ: ಕಂದಾಯ ಸಚಿವ ಕೃಷ್ಣ ಬೈರೇಗೌಡರ ಯಾದಗಿರಿ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ವಿಧವೆ ಮಹಿಳೆಯೊಬ್ಬರು ತನ್ನ ಸಮಸ್ಯೆಯನ್ನು ಹೇಳಿಕೊಳ್ಳಲು ಎರಡು ಗಂಟೆಗೂ ಅಧಿಕ ಸಮಯ ಕಾದು ಕೊನೆಗೆ ಸಚಿವರನ್ನು ಭೇಟಿಯಾಗಲಾರದೇ ನಿರಾಸೆಗೊಂಡಿದ್ದಾರೆ.
ಯಾದಗಿರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವರು ಮೂರು ಗಂಟೆಗಳಿಗೂ ಅಧಿಕ ಸಮಯ ಕಂದಾಯ ಇಲಾಖೆ ಪ್ರಗತಿಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆ ಮುಕ್ತಾಯಗೊಂಡ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ಹೊರಡುತ್ತಿದ್ದಂತೆ ಎರಡು ಗಂಟೆಯಿಂದ ಸಚಿವರಿಗಾಗಿ ಕಾಯ್ತಿದ್ದ ವಿಧವೆ, ಮನವಿ ಪತ್ರ ಹಿಡಿದು ಸಚಿವರ ಮುಂದೆ ತನ್ನ ಅಳಲನ್ನು ತೋಡಿಕೊಳ್ಳಲು ಮುಂದಾದರು. ಆದರೆ, ಮಹಿಳೆಯ ಸಮಸ್ಯೆ ಆಲಿಸಿ ಸ್ಪಂದಿಸಬೇಕಾದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಇದ್ಯಾವುದನ್ನು ಲೆಕ್ಕಿಸದೇ ಹಾಗೇ ತೆರಳಿದರು.
ಇದರಿಂದ ದಿಕ್ಕು ತೋಚದಂತಾದ ವಿಧವೆ ವೀಣಾ ಪಾಟೀಲ್, ನಾನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ ಕೆ. ಗ್ರಾಮದವಳಾಗಿದ್ದು, ನನ್ನ ಗಂಡ ಸತ್ತು ಎರಡು ವರ್ಷ ಆಗಿದೆ. ನನಗೆ ಮಕ್ಕಳಿಲ್ಲ. ನನ್ನ ಗಂಡನ ಇಬ್ಬರು ಅಣ್ತಮ್ಮಂದಿರು ನನಗೆ ಆಸ್ತಿಯನ್ನು ಬಿಟ್ಟು ಕೊಡ್ತಿಲ್ಲ. ನನ್ನ ಹೆಸರಿನ ಮೇಲೆ ಜಮೀನು ಹಾಗೂ ಮನೆ ಇದ್ರೂ ನನಗೆ ಬಿಟ್ಟು ಕೊಡ್ತಿಲ್ಲ. ಈ ಕುರಿತು ಕೆಂಭಾವಿ ಪೊಲೀಸರ ಗಮನಕ್ಕೆ ತಂದ್ರೂ ಸಹ ನನಗೆ ನ್ಯಾಯ ಕೊಡಿಸಿಲ್ಲ. ನಾನು ನನ್ನ ಗಂಡ ತೀರಿದ ಬಳಿಕ ತವರು ಮನೆ ಸೇಡಂದಲ್ಲಿ ವಾಸಿಸುತ್ತಿದ್ದೇನೆ. ಇದೀಗ ಎರಡು ತಿಂಗಳ ಹಿಂದೆ ನನ್ನ ತಂದೆ ಸಾವನ್ನಪ್ಪಿದ್ದು ನನಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ.
ಕಂದಾಯ ಸಚಿವರು ಬರುತ್ತಾರೆ ಎಂಬ ಮಾಹಿತಿ ಇತ್ತು. ಹೀಗಾಗಿ ಅವರ ಬಳಿ ಸಮಸ್ಯೆ ಹೇಳಿದರೆ ನನಗೆ ನ್ಯಾಯ ಒದಗಿಸ್ತಾರೆ ಅಂತಾ ತಿಳಿದು ಯಾದಗಿರಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮಧ್ಯಾಹ್ನದಿಂದ ಕಾದು ಕುಳಿತಿದ್ದೆ. ಆದ್ರೆ ಸಚಿವರು ನನ್ನ ಸಮಸ್ಯೆ ಆಲಿಸದೇ ಹಾಗೇ ತೆರಳಿದ್ರು ಅಂತಾ ವಿಧವೆ ಅಸಮಾಧಾನ ವ್ಯಕ್ತಪಡಿಸಿದರು. ನಾನೀಗ ಜೀವನ ಹೇಗೆ ಸಾಗಿಸಲಿ ಅಂತಾ ವಿಧವೆ ವೀಣಾ ಪಾಟೀಲ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡರು.
ನಾಲ್ವರು ಅಮೆರಿಕನ್ನರಿಂದ ಚೀನಾಗೆ ಡೈನೋಸರ್ ಮೂಳೆ ಅಕ್ರಮ ಮಾರಾಟ: ಬೆಲೆ ಕೇಳಿದ್ರೆ ಬೆರಗಾಗೋದು ಖಚಿತ!
ಹುಲಿ ಉಗುರು ಕೇಸ್ನಲ್ಲಿ ಕೆಲವರ ಬಂಧನ: ಸಚಿವೆಯ ಪುತ್ರ, ಅಳಿಯನ ಮೇಲೆ ಕ್ರಮ ಯಾಕಿಲ್ಲ ಎಂದು ನೆಟ್ಟಿಗರ ಆಕ್ರೋಶ