ನವದೆಹಲಿ: ತಿರುಗಿಬಿದ್ದ ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಐಎಸ್ಐ ಸಾಕಷ್ಟು ಪ್ರಯತ್ನವನ್ನೂ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್ ಪರ ಒಲವುಳ್ಳ ಗುಂಪಿನ ಸದಸ್ಯ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಸೈಯದ್ ಸಲಾಲುದ್ದೀನ್ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸುವ ಮೂಲಕ ಐಎಸ್ಐ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ದಾಳಿ ಮೇ ತಿಂಗಳಲ್ಲಿ ನಡೆದಿತ್ತು.
ಸೈಯದ್ ಸಲಾಲುದ್ದೀನ್ ಜಾಗತಿಕವಾಗಿ ಮೋಸ್ಟ್ ವಾಂಟೆಡ್ ಉಗ್ರ. ಕಾಶ್ಮೀರ ಭಾಗದಲ್ಲಿನ ಉಗ್ರ ಚಟುವಟಿಕೆಗೆ ಈತನ ಕುಮ್ಮಕ್ಕು ಇದ್ದೇ ಇದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತಿನ ಆರ್ಟಿಕಲ್ 370 ಅನ್ನು ಭಾರತ ಸರ್ಕಾರ ಕಳೆದ ವರ್ಷ ರದ್ದುಗೊಳಿಸಿದ ವೇಳೆ, ಸಲಾಲುದ್ದೀನ್ ನಿಷ್ಕ್ರಿಯನಾಗಿದ್ದ ಅಥವಾ ಆತನಿಂದ ಏನೂ ಮಾಡಲು ಸಾಧ್ಯವಾಗದೇ ಹೋಯಿತು. ಪರಿಸ್ಥಿತಿ ಸಂಪೂರ್ಣವಾಗಿ ಭಾರತದ ಹಿಡಿತದಲ್ಲಿತ್ತು. ಇದು ಐಎಸ್ಐಗೆ ಅಸಾಧ್ಯವಾದ ಕಿರಿಕಿರಿಯನ್ನು ಉಂಟುಮಾಡಿತ್ತು.
ಇದನ್ನೂ ಓದಿ: ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್
ಸಲಾಲುದ್ದೀನ್ನ ಈ ನಿಷ್ಕ್ರಿಯತೆ ಮತ್ತು ಭಿನ್ನಮತ ಐಎಸ್ಐಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿತ್ತು. ಹೀಗಾಗಿಯೇ ಮೇ ತಿಂಗಳಲ್ಲಿ ಆತನನ್ನು ಎಚ್ಚರಿಸುವ ಸಲುವಾಗಿ ಇಸ್ಲಾಮಾಬಾದಿನಲ್ಲಿರುವ ಆತನ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ಸಂಘಟಿಸಿತ್ತು. ಆದಾಗ್ಯೂ, ಪೊಲೀಸರು ಈ ದಾಳಿಯನ್ನು ಅಡುಗೆ ಸಿಲಿಂಡರ್ ಸ್ಫೋಟ ಎಂದು ದಾಖಲಿಸಿಕೊಂಡು ಕೇಸ್ ಕ್ಲೋಸ್ ಮಾಡಿದ್ದಾರೆ. ಐಎಸ್ಐ ನಂಬಿಕೆ ಕಳೆದುಕೊಂಡಿದೆ ಎಂದು ಸೈಯದ್ ಸಲಾಲುದ್ದೀನ್ಗೆ ಕೊಟ್ಟ ನೇರ ಎಚ್ಚರಿಕೆ ಇದಾಗಿತ್ತು.
ಈ ಬೆಳವಣಿಗೆ ಮರೆಯಾಗುತ್ತಲೇ ಕಾಶ್ಮೀರದಲ್ಲೊಂದು ಬೆಳವಣಿಗೆ ಗಮನಸೆಳೆಯಿತು. ಹುರಿಯತ್ ಕಾನ್ಫರೆನ್ಸ್ನ ಹಿರಿಯ ನಾಯಕ ಗೀಲಾನಿ, ರಾಜೀನಾಮೆ ಪ್ರಹಸನ ಅದು. ತಾನು ವೇದಿಕೆಯ ಮುಂಚೂಣಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆತ ಘೋಷಿಸಿದ್ದರು. ಆತನ ಈ ನಡೆಯ ಹಿನ್ನೆಲೆಯಲ್ಲಿ ಬಹುದೊಡ್ಡ ಸಮರವೇ ನಡೆದಿದೆ ಎಂಬುದು ಒಳಸುಳಿ.
ಐಎಸ್ಐ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು!