ನವದೆಹಲಿ: ಕಳೆದೆರೆಡು ದಿನದಿಂದ ರಾಷ್ಟ್ರ ರಾಜಕಾರಣದಲ್ಲಿ ರಾಜಧರ್ಮದ ವಿಚಾರ ಹರಿದಾಡುತ್ತಿದೆ. ಬಿಜೆಪಿ ಸರ್ಕಾರ ರಾಜಧರ್ಮ ಪಾಲಿಸುತ್ತಿಲ್ಲ ಎಂದು ಕಾಂಗ್ರೆಸ್ ದೂಷಿಸಿದ್ದರೆ, ನಿಮ್ಮಿಂದ ರಾಜಧರ್ಮ ಭೋದಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಕಾಂಗ್ರೆಸ್ನ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದೆ. ಇದೀಗ ರಾಜಧರ್ಮದ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತನಾಡಿದ್ದಾರೆ.
ರಾಜಧರ್ಮದ ಕುರಿತಾಗಿ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, “ಕಾನೂನು ಸಚಿವರು ರಾಜಧರ್ಮವನ್ನು ನಮಗೆ ಭೋದಿಸಬೇಡಿ ಎಂದು ಹೇಳಿದ್ದಾರೆ. ನಾವು ಹೇಗೆ ಭೋದಿಸಲು ಸಾಧ್ಯ ಸಚಿವರೇ? ಗುಜರಾತ್ನಲ್ಲಿ ವಾಜಪೇಯಿ ಅವರ ಮಾತನ್ನೇ ಕೇಳದೇ ಇದ್ದವರು ನೀವು ನಮ್ಮ ಮಾತನ್ನು ಏಕೆ ಕೇಳುತ್ತೀರಿ?” ಎಂದು ವ್ಯಂಗ್ಯವಾಡಿದ್ದಾರೆ.
ರಾಜಧರ್ಮವನ್ನು ಆಲಿಸುವುದು, ಕಲಿಯುವುದು ಮತ್ತು ಪರಿಪಾಲಿಸುವುದು ನಿಮ್ಮ ಸರ್ಕಾರದ ಬಲವಾದ ಅಂಶವೇ ಅಲ್ಲ! ಎಂದು ಅವರು ಟೀಕಿಸಿದ್ದಾರೆ.
ದೆಹಲಿ ಹಿಂಸಾಚಾರದ ಕುರಿತಾಗಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗವು, ಬಿಜೆಪಿ ರಾಜಧರ್ಮವನ್ನು ಪಾಲಿಸುತ್ತಿಲ್ಲ. ರಾಜಧರ್ಮದ ಪರಿಪಾಲನೆ ರಾಷ್ಟ್ರಪತಿಗಳು ಅವರ ಅಧಿಕಾರವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿತ್ತು. ನಿನ್ನೆ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ಗೆ ಉತ್ತರಿಸಿದ ಬಿಜೆಪಿಯ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್, ವೋಟ್ ಬ್ಯಾಂಕ್ಗಾಗಿ ಹಿಂಸಾಚಾರ ನಡೆಸಿದ, ಕಾನೂನು ಉಲ್ಲಂಘನೆ ಮಾಡಿದ ಪಕ್ಷದಿಂದ ನಮಗೆ ರಾಜಧರ್ಮವನ್ನು ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್)
Law Minister to Congress :
“ Please don’t preach us Rajdharma “
How can we Mr. Minister ?
When you did not listen to Vajpayeeji in Gujarat why would you listen to us !
Listening , learning and obeying Rajdharma not one of your Government’s strong points !
— Kapil Sibal (@KapilSibal) February 29, 2020