ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಸುಮಾರು 1700 ಮಂದಿ ಕರೊನಾ ಸೋಂಕಿತರು ಇದ್ದು, ಇಲ್ಲಿಯವರೆಗೆ 18 ಜನ ಮೃತಪಟ್ಟಿದ್ದಾರೆ. ಆದರೂ ಅಲ್ಲಿಯ ಪ್ರಧಾನಿ ಇಮ್ರಾನ್ ಖಾನ್ ಲಾಕ್ಡೌನ್ ಮಾಡುವ ನಿರ್ಣಯವನ್ನು ಕೈಗೊಂಡಿಲ್ಲ. ಅಷ್ಟೇ ಅಲ್ಲ, ಭಾರತವನ್ನು ಲಾಕ್ಡೌನ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಿದ್ದಾರೆ. ವುಹಾನ್ನಲ್ಲಿ ಕರೊನಾ ವೈರಸ್ ನವೆಂಬರ್ನಲ್ಲಿಯೇ ಪತ್ತೆಯಾದರೂ ಅದನ್ನು ಮುಚ್ಚಿಟ್ಟು ಇಡೀ ಜಗತ್ತಿಗೇ ಹರಡುವಂತೆ ಮಾಡಿದ ಚೀನಾವನ್ನು ಹೊಗಳಿದ್ದಾರೆ.
ಸೋಮವಾರ ತಮ್ಮ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ ಲಾಕ್ಡೌನ್ ಘೋಷಣೆ ಮಾಡಿದ್ದಾರೆ. ಬಳಿಕ ದೇಶದ ಜನರ ಕ್ಷಮೆ ಕೇಳಿದರೂ ಪ್ರಯೋಜನವಿಲ್ಲ. ಯಾಕೆಂದರೆ ಲಾಕ್ಡೌನ್ನಿಂದಾಗಿ ಅನೇಕರು ಕಷ್ಟಪಡುವಂತಾಗಿದೆ ಎಂದಿದ್ದಾರೆ. ಅಲ್ಲದೆ, ಲಾಕ್ಡೌನ್ ಮಾಡಿದಾಕ್ಷಣ ವೈರಸ್ ಪ್ರಸರಣ ನಿಲ್ಲುತ್ತದೆ ಎಂದು ನನಗೆ ನಂಬಿಕೆಯಿಲ್ಲ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಆದರೆ, ವುಹಾನ್ನಲ್ಲಿ ಲಾಕ್ಡೌನ್ ಮಾಡಿ ಕರೊನಾ ವೈರಸ್ ನಿಯಂತ್ರಣ ಮಾಡಿದ ಚೀನಾದ ಕ್ರಮವನ್ನು ಶ್ಲಾಘಿಸಿದ್ದಾರೆ.
ಕರೊನಾ ವೈರಸ್ ವಿರುದ್ಧ ಹೋರಾಡಲು ಪಾಕಿಸ್ತಾನ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬ ಬಗ್ಗೆ ಮಾತನಾಡಿದ ಇಮ್ರಾನ್, ಪಾಕಿಸ್ತಾನ ಅಮೆರಿಕದಷ್ಟು ಸಿರಿವಂತ ದೇಶವಲ್ಲ. ನಮ್ಮ ಮೊದಲ ಶಕ್ತಿಯೆಂದರೆ ನಾವು ಇಮಾನ್ (ದೈವಿಶಕ್ತಿ)ನಲ್ಲಿ ಇಟ್ಟ ನಂಬಿಕೆ. ಎರಡನೇ ಬಹುದೊಡ್ಡ ಶಕ್ತಿಯೆಂದರೆ ಯುವಜನತೆ. ಕರೊನಾ ವೈರಸ್ ವಿರುದ್ಧ ಹೋರಾಡಲು ನಾವು ಇದೇ ಎರಡು ಬಲಪ್ರಯೋಗ ಮಾಡುತ್ತೇವೆ ಎಂದು ಹೇಳಿದ್ದಾರೆ. ಇಲ್ಲಿರುವ ಯುವಜನರು ಕರೊನಾ ವಿರುದ್ಧ ಹೋರಾಡಲು ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಕರೊನಾ ವೈರಸ್ ಬಗ್ಗೆ ನಿಖರ ಡಾಟಾ ನೀಡಲು ಇನ್ನೂ ಒಂದು ವಾರ ಸಮಯ ಬೇಕು ಎಂದು ಹೇಳಿದ ಪ್ರಧಾನಿ ಇಮ್ರಾನ್, ವೃದ್ಧರು ಮತ್ತು ಈಗಾಗಲೇ ಬೇರೆ ಕಾಯಿಲೆಗಳನ್ನು ಹೊಂದಿರುವವರಿಗೆ ಬಹುಬೇಗನೇ ಕರೊನಾ ವೈರಸ್ ಸೋಂಕು ತಗುಲುತ್ತಿದೆ. ಅವರದಲ್ಲಿ ಶೇ.4-5ಜನರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಕಾಣುತ್ತಿದೆ. ಉಳಿದವರಿಗೆ ಅಷ್ಟೊಂದು ಗಂಭೀರ ಪ್ರಮಾಣದಲ್ಲಿ ಅಟ್ಯಾಕ್ ಆಗುತ್ತಿಲ್ಲ ಎಂದಿದ್ದಾರೆ.
ಕರೊನಾ ವಿರುದ್ಧ ಹೋರಾಟಕ್ಕೆ ಪಾಕ್ನಲ್ಲಿ ಪರಿಹಾರ ನಿಧಿ ತೆರೆಯಲಾಗಿದೆ. ಅಕೌಂಟ್ ಡಿಟೇಲ್ಗಳೆಲ್ಲ ಮೊಬೈಲ್ನಲ್ಲೇ ಸಿಗುತ್ತವೆ. ಅದು ಇನ್ನೆರಡು ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಇರುವವರು ತಮಗೆ ರೇಷನ್ ಅಗತ್ಯ ಇದ್ದರೆ ಒಂದೆಡೆ ನೋಂದಾಯಿಸಬೇಕು. ಹಾಗೇ ಯಾರಾದರೂ ನೆರವು ನೀಡಲು ಇಚ್ಛಿಸಿದರೆ ಅಂಥವರು ಇನ್ನೊಂದು ಕಡೆ ರಿಜಿಸ್ಟರ್ ಮಾಡಬೇಕು ಎಂದು ಹೇಳಿರುವ ಇಮ್ರಾನ್ ಖಾನ್, ಇದಕ್ಕಾಗಿ ಸರ್ಕಾರಿ ವೆಬ್ಸೈಟ್, ಹೆಲ್ಪ್ಲೈನ್ಗಳನ್ನು ತೆರೆಯಲಾಗಿದೆಯಾ ಎಂಬ ಬಗ್ಗೆ ನಿಖರ ಮಾಹಿತಿ ತಿಳಿಸಿಲ್ಲ.(ಏಜೆನ್ಸೀಸ್)