ಮಂಡ್ಯ: ಜಪಾನ್ನ ಇಥಮಿ ನಗರದಲ್ಲಿ ಮೇ.29ರಿಂದ ಜೂ.6ರವರೆಗೆ ನಡೆಯಲಿರುವ ‘ವಿದ್ಯಾರ್ಥಿ ವಿನಿಮಯ’ ಕಾರ್ಯಕ್ರಮಕ್ಕೆ ನಗರದ ಹೊರವಲಯದ ಸಿದ್ದಯ್ಯನಕೊಪ್ಪಲಿನ ಪ್ರತಿಷ್ಠಿತ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ತಾಲೂಕಿನ ಎ.ಹುಲ್ಲುಕೆರೆ ಗ್ರಾಮದ ಎಚ್.ಟಿ.ಪ್ರಭು ಹಾಗೂ ಬಿ.ಕೆ.ರಜನಿ ದಂಪತಿಯ ಮಗ ಅಜಿತ್ ಪಿ.ಗೌಡ ಹಾಗೂ ಚಾಮಲಾಪುರದ ಜಿ.ಎಸ್.ಹರಿಪ್ರಸಾದ್ ಹಾಗೂ ಎಚ್.ಎನ್.ಮಾಲಾ ದಂಪತಿಯ ಮಗಳು ಹಿತಶ್ರೀ ಪ್ರಸಾದ್ ಅವರು ‘ತಂತ್ರಜ್ಞಾನದ ಅನುಕೂಲ ಮತ್ತು ಅನಾನುಕೂಲಗಳ’ ಬಗ್ಗೆ ನಡೆದ ಮೂರು ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಶಾಲೆ ಇದಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಮಂಜು, ಈ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆಯಿಂದ ಮೊದಲ ಸುತ್ತಿನಲ್ಲಿ 78 ವಿದ್ಯಾರ್ಥಿಗಳು ಸ್ಪರ್ಧಿಸಿ ಪರೀಕ್ಷೆ ಬರೆದಿದ್ದರು. 2ನೇ ಸುತ್ತಿಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರಾಯೋಗಿಕ ಪ್ರದರ್ಶನ ನೀಡಿದರು. ಮೂರನೇ ಸುತ್ತಿಗೆ 6 ವಿದ್ಯಾರ್ಥಿಗಳು ಆಯ್ಕೆಯಾಗಿ ಓರಲ್ನಲ್ಲಿ ಅಂತಿಮವಾಗಿ ಅಜಿತ್ ಪಿ.ಗೌಡ, ಹಿತಶ್ರೀ ಪ್ರಸಾದ್ ಆಯ್ಕೆಯಾದರು. ಭಾರತದಿಂದ ಒಟ್ಟು 25 ವಿದ್ಯಾರ್ಥಿಗಳು ಜಪಾನ್ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು, ಛತ್ತೀಸ್ಗಢದಿಂದ 23 ಹಾಗೂ ನಮ್ಮ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ ಎಂದರು.
2023ರಲ್ಲಿ ಜಪಾನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಮ್ಮ ಶಾಲೆಯ ಧನ್ಯ ಜಿ.ಗೌಡ ಹಾಗೂ ಶಾನ್ ಸ್ಟೀವನ್ ಡಾಲ್ಮೇಡ ಅವರು ಆಯ್ಕೆಯಾಗಿದ್ದರು. ಅಲ್ಲಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. 2ನೇ ಬಾರಿಗೆ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಹ್ಯೋಗೊ ಇಂಟರ್ನ್ಯಾಷನಲ್ ಅಸೋಸಿಯೇಷನ್ ಸಂಸ್ಥೆಯ ಇವರ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಲಿದೆ. ಕಾರ್ಯಕ್ರಮದ ಅವಧಿಯಲ್ಲಿ ಅಲ್ಲಿನ ಶೈಕ್ಷಣಿಕ ವ್ಯವಸ್ಥೆ, ಪ್ರವಾಸಿತಾಣಗಳ ಪರಿಚಯ, ಸಂಸ್ಕೃತಿಯನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಳ್ಳಲಿದ್ದು, ನಮ್ಮ ವ್ಯವಸ್ಥೆಯ ಬಗ್ಗೆ ಅಲ್ಲಿ ತಿಳಿಸಲಿದ್ದಾರೆ. ಜತೆಗೆ ಎರಡು ದಿನ ಅಲ್ಲಿನ ವಿದ್ಯಾರ್ಥಿಗಳ ಮನೆಯಲ್ಲಿ ವಾಸ್ತವ್ಯವಿರಲಿದ್ದಾರೆ ಎಂದರು.
ನಮ್ಮ ಸಂಸ್ಥೆ 2021-22ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, ಮೊದಲ ವರ್ಷದಲ್ಲೇ ಉತ್ತಮ ಚಟುವಟಿಕೆ ಆಧಾರಿತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಚಟುವಟಿಕೆ ಆಧಾರಿತ ಶಿಕ್ಷಣ ನೀಡುತ್ತಿದ್ದು, ಕರಾಟೆ, ಯೋಗ, ಕ್ರೀಡೆಯಲ್ಲೂ ಸಹ ನಮ್ಮ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಕರಾಟೆ, ಯೋಗ, ಅಥ್ಲೆಟಿಕ್ಸ್ನಲ್ಲಿ ನಮ್ಮ ಶಾಲೆಯ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 540 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ಸುನೀತಾ ರಾಜನ್ ಮಾತನಾಡಿ, ನಮ್ಮ ಸಂಸ್ಥೆಯ ಮಕ್ಕಳು ಜಪಾನ್ಗೆ ತೆರಳಿ ಅಲ್ಲಿ ಕನ್ನಡವನ್ನು ಪಸರಿಸುವುದರ ಜತೆಗೆ ನಮ್ಮ ಸಂಸ್ಕೃತಿಯನ್ನೂ ಪರಿಚಯಿಸಿದ್ದಾರೆ. ಈ ಬಾರಿಯೂ ಇಬ್ಬರು ವಿದ್ಯಾರ್ಥಿಗಳು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಬಹಳ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.
ಸಾಕಷ್ಟು ನಿರೀಕ್ಷೆ ಹೊಂದಿದ್ದೇನೆ. ಇಂತಹ ಉತ್ತಮ ಅವಕಾಶ ಸಿಕ್ಕಿದೆ. ಸಾಧ್ಯವಾದಷ್ಟು ಬಳಕೆ ಮಾಡಿಕೊಳ್ಳುತ್ತೇನೆ. ನಮ್ಮ ಸಂಸ್ಕೃತಿಯ ಬಗ್ಗೆ ಅಲ್ಲಿ ತಿಳಿಸಿ, ಅಲ್ಲಿನ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ. ಇಂತಹ ಅವಕಾಶ ಸಿಗಲು ಸಂಸ್ಥೆ ಕಾರಣ. ಆಡಳಿತ ಮಂಡಳಿಗೆ ಧನ್ಯವಾದ ಹೇಳುತ್ತೇನೆ.
ಅಜಿತ್ ಪಿ.ಗೌಡಪರೀಕ್ಷೆಗೆಂದು ಪರಿಶ್ರಮ ವಹಿಸಿದ್ದೆ. ಪ್ರತಿಲವಾಗಿ ಒಳ್ಳೆಯ ಅವಕಾಶ ಒದಗಿ ಬಂದಿದೆ. ಜಪಾನ್ನ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಉತ್ಸುಕತೆ ಇದೆ. ಇದು ಸಂಸ್ಥೆಯ ಸಹಕಾರದಿಂದ ಸಾಧ್ಯವಾಗುತ್ತಿದೆ.
ಹಿತಶ್ರೀ ಪ್ರಸಾದ್