| ಮರಿದೇವ ಹೂಗಾರ ಹುಬ್ಬಳ್ಳಿ
ಕರೊನಾ ಹಾವಳಿ ಉತ್ತುಂಗಕ್ಕೇರಿದಾಗ ಲಾಕ್ಡೌನ್ ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಬೇಕೆಂಬ ಉದ್ದೇಶದಿಂದ, ಕೈಗಾರಿಕೆಗಳಿಗೆ ಆಕ್ಸಿಜನ್ ಕಡಿತಗೊಳಿಸಲಾಯಿತು. ಪರಿಣಾಮ ಕೈಗಾರಿಕೆಗಳು ಉಸಿರುಗಟ್ಟಿದ್ದವು. ಆದರೀಗ ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆಯಾಗುತ್ತಿದ್ದು ಧಾರವಾಡ ಜಿಲ್ಲೆಯ 31 ಸಾವಿರ ಕೈಗಾರಿಕೆಗಳು ಮತ್ತೆ ಉಸಿರಾಡಲಾರಂಭಿಸಿವೆ.
ಜಿಲ್ಲೆಯ ಕೈಗಾರಿಕೆಗಳಿಗೆ ತಿಂಗಳಿಗೆ 20 ಕಿಲೋಲೀಟರ್ ಸಾಮರ್ಥ್ಯದ 12 ಟ್ಯಾಂಕರ್ನಷ್ಟು ಆಕ್ಸಿಜನ್ ಅಗತ್ಯವಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಕೋವಿಡ್ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಹೊಣೆ ಸರ್ಕಾರ ಹೆಗಲೇರಿತ್ತು. ಹಾಗಾಗಿ ಕೆಲ ಕೈಗಾರಿಕೆಗಳ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿ, ನಿತ್ಯ 19.5 ಟನ್ ಆಕ್ಸಿಜನ್ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಯಿತು.
ಕೊಲ್ಹಾಪುರ ಹಾಗೂ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಕಚ್ಚಾ ಪದಾರ್ಥ (ಆಕ್ಸಿಜನ್) ಜಿಲ್ಲೆಗೆ ಪೂರೈಕೆಯಾಗುತ್ತಿತ್ತು. ಇದನ್ನು ಪಡೆಯುವ ಸದರ್ನ್ ಗ್ಯಾಸ್, ಕರ್ನಾಟಕ ಇಂಡಸ್ಟ್ರೀಯಲ್ ಗ್ಯಾಸ್ ಹಾಗೂ ಫ್ರಾಕ್ಸೇರ್ ಕಂಪನಿಗಳು ಕಚ್ಚಾ ಪದಾರ್ಥವನ್ನು ಶುದ್ಧೀಕರಿಸಿ ಕೈಗಾರಿಕೆಗಳಿಗೆ ಆಕ್ಸಿಜನ್ ಸರಬರಾಜು ಮಾಡುತ್ತಿದ್ದವು.
ಲಾಕ್ಡೌನ್ ವೇಳೆ 31 ಸಾವಿರ ಕೈಗಾರಿಕೆಗಳು ಕಾರ್ಯಚಟುವಟಿಕೆ ನಿಲ್ಲಿಸಿದವು. ಇದಕ್ಕೆ ಕಾರಣ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಕಾರ್ವಿುಕರು, ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿ ತಮ್ಮ ತವರಿಗೆ ಮರಳಿದ್ದು. ಇದೀಗ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ಕೊಡುವ ಅಗತ್ಯ ಮತ್ತು ಒತ್ತಡ ಸರ್ಕಾರದ ಮೇಲಿದ್ದು, ಪೂರಕ ಸೌಕರ್ಯ ಕಲ್ಪಿಸಲಾಗುತ್ತಿದೆ. ಏತನ್ಮಧ್ಯೆ ವಿವಿಧ ರಾಜ್ಯಗಳಿಂದ ಕಾರ್ವಿುಕರು ಮರಳುತ್ತಿದ್ದಾರೆ. ಜತೆಗೆ ಕೋವಿಡ್ ಆಸ್ಪತ್ರೆಗಳಿಗೆ ಪೂರೈಕೆ ಆಗುತ್ತಿದ್ದ ಆಕ್ಸಿಜನ್ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ಮೊದಲಿನಂತೆ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತೆ ಗರಿಗೆದರಿವೆ.
ಆಸ್ಪತ್ರೆಗಳಿಗೀಗ 8.15 ಟನ್ ಆಕ್ಸಿಜನ್ ಸಾಕು
ಕೋವಿಡ್ ಪೂರ್ವದಲ್ಲಿ ಆಸ್ಪತ್ರೆಗಳಿಗೆ ನಿತ್ಯ 5.4 ಟನ್ ಆಕ್ಸಿಜನ್ ಅಗತ್ಯವಿತ್ತು. ಕೋವಿಡ್ ವೇಳೆ ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ನಿತ್ಯ 19.5 ಟನ್ ಆಕ್ಸಿಜನ್ ಪೂರೈಕೆ ಮಾಡಲೇಬೇಕಿತ್ತು. ಅಷ್ಟೊಂದು ಒತ್ತಡ ಜಿಲ್ಲಾಡಳಿತದ ಹೆಗಲೇರಿತ್ತು. ಈಗ ನಿತ್ಯ 8.15 ಟನ್ ಆಕ್ಸಿಜನ್ ಅಗತ್ಯವಿದೆ ಎನ್ನುತ್ತಾರೆ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಮಲ್ಲಿಕಾರ್ಜುನ ಕೆ.ಎಸ್.
ಸೋಂಕಿತರ ಸಂಖ್ಯೆ ಇಳಿಮುಖ
ಕೋವಿಡ್ ಸೋಂಕಿತರ ಸಂಖ್ಯೆ ಕೆಲ ತಿಂಗಳವರೆಗೆ ಗಣನೀಯವಾಗಿ ಏರಿಕೆ ಕಂಡಿತ್ತು. ಶೇ. 60ರಷ್ಟು ಆಕ್ಸಿಜನ್ ಸೌಲಭ್ಯವುಳ್ಳ ಬೆಡ್ ಹಾಗೂ ಶೇ. 30ರಷ್ಟು ಐಸಿಯುನಲ್ಲಿ ಕರೊನಾ ಸೋಂಕಿತರು ದಾಖಲಾಗುವುದು ಸಾಮಾನ್ಯವಾಗಿತ್ತು. ಈಗ ಆ ಪ್ರಮಾಣದ ಸಂಖ್ಯೆ ಕಂಡುಬರುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ.
ಕರೊನಾ ಮತ್ತು ಲಾಕ್ಡೌನ್ ವೇಳೆ ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ಚಟುವಟಿಕೆ ನಡೆಸಲಾಗಲಿಲ್ಲ. ಕಾರ್ವಿುಕರು ಮತ್ತು ಆಕ್ಸಿಜನ್ ಪೂರೈಕೆ ಸಮಸ್ಯೆ ಇತ್ತು. ಈಗ ಜಿಲ್ಲೆಯ ಎಲ್ಲ ಕೈಗಾರಿಕೆಗಳು ಸಹಜ ಸ್ಥಿತಿಗೆ ಬಂದಿವೆ.
| ಆರ್.ಎಚ್. ಶಿವಪುತ್ರಪ್ಪ ಜಿಲ್ಲಾ ಕೈಗಾರಿಕೆಗಳ ಕೇಂದ್ರದ ಸಹಾಯಕ ನಿರ್ದೇಶಕ
ನೀವು ಈ ಆ್ಯಪ್ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್…