ಕಲ್ಲಂಗಡಿ ಬೇಸಿಗೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಬಿಸಿಲಿನ ಬೇಗೆಗೆ ಜನರ ದಾಹ ತಣಿಸುವ ಪ್ರಮುಖ ಹಣ್ಣು. ಈ ಹಣ್ಣನ್ನು ತಿನ್ನುವವರಿಗಿಂತ ಜ್ಯೂಸ್ ಮಾಡಿಕೊಂಡು ಕುಡಿಯುವವರೇ ಹೆಚ್ಚು. ಆದರೆ ಈ ಹಣ್ಣಿನ ಬಗ್ಗೆ ಯಾರಿಗೂ ತಿಳಿಯದ ಉಪಯುಕ್ತ ಮಾಹಿತಿಯೊಂದನ್ನು ನಿಮಗೆ ತಿಳಿಸುತ್ತೇನೆ…ಈ ಸುದ್ದಿ ಸಂಪೂರ್ಣ ಓದಿ!
ಹಣ್ಣು ಮಾತ್ರವೇ ತಿಂದು ಸಿಪ್ಪೆಯನ್ನು ಬಿಸಾಡುವವರು ಈ ಸುದ್ದಿಯನ್ನು ಓದಿದ ನಂತರ ಯಾವುದೇ ಕಾರಣಕ್ಕೂ ಸಿಪ್ಪೆಯನ್ನು ಕಸಕ್ಕೆ ಹಾಕುವುದಿಲ್ಲ. ಹಾಗಿದ್ರೆ ಆ ಉಪಯುಕ್ತ ಮಾಹಿತಿ ಏನೆಂದು ಯೋಚಿಸ್ತಿದ್ದೀರಾ…ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಕಲ್ಲಂಗಡಿ ಹಣ್ಣು ತಿಂದ ನಂತರ ಅದರ ದಪ್ಪ ಭಾಗದ ಸಿಪ್ಪೆಯಿಂದ ರುಚಿಯಾದ ಪಲ್ಯ ತಯಾರಿಸಬಹುದು. ಹೌದು. ಹಣ್ಣು ಕತ್ತರಿಸಿದ ನಂತರ ಅದರ ಮೇಲ್ಮೈನ ದಪ್ಪ ಭಾಗದ ಸಿಪ್ಪೆಯಿಂದ ಮಾಡಿದ ಪಲ್ಯ ಮೊಸರನ್ನದ ಜತೆ, ರಸಂ ಹಾಗೂ ಬೇಳೆಸಾರಿನ ಜತೆಗೆ ತಿನ್ನಲು ಬಲು ರುಚಿ.
ಮಾಡುವ ವಿಧಾನ:
ಮೊದಲಿಗೆ ಕಲ್ಲಂಗಡಿ ಸಿಪ್ಪೆಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಒಂದು ಬಾಣಲೆಗೆ ಒಗ್ಗರಣೆ ಪದಾರ್ಥಗಳಾದ ಸಾಸಿವೆ, ಜೀರಿಗೆ, ಕರಿಬೇವು, ಸಣ್ಣದ್ದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ (ಅಗತ್ಯವಿದ್ದರೆ ಮಾತ್ರ) ಹಾಕಬೇಕು. ಈ ಮಿಶ್ರಣಕ್ಕೆ ಕತ್ತಿರಿಸಿಟ್ಟುಕೊಂಡಿದ್ದ ಕಲ್ಲಂಗಡಿ ಸಿಪ್ಪೆ ತುಂಡುಗಳನ್ನು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು, ಅರಿಶಿನ, ಸಾಂಬಾರ್ ಪುಡಿ ಹಾಕಿ 5-10 ನಿಮಿಷ ಬೇಯಲು ಬಿಡಬೇಕು. ಕೊನೆಗೆ ಬೇಕಿದ್ದರೆ ಕೊತ್ತಂಬರಿ ಸೊಪ್ಪನ್ನು ಅಲಂಕಾರಕ್ಕೆ ಬಳಸಬಹುದು. ಇಷ್ಟೇ ರುಚಿಯಾದ ಕಲ್ಲಂಗಡಿ ಪಲ್ಯ ಸವಿಯಲು ಸಿದ್ಧ.
ಬೇಸಿಗೆಯಲ್ಲಿ ಪ್ರತಿನಿತ್ಯ ರಾಗಿ ಅಂಬಲಿ ಸೇವನೆ ಮಾಡುತ್ತೀರಾ? ಹಾಗಿದ್ರೆ ಈ ಮಾಹಿತಿ ನಿಮಗೆ ತಿಳಿದಿರಲೇ ಬೇಕು..