ಬೆಳಗಾವಿ: ಏಪ್ರಿಲ್ 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಎಸ್ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಗಲಾ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ಗಳು ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನೀಡಿದ್ದ ನಿರ್ದೇಶನ ಜಾರಿಗೊಳಿಸಲು ಯಕ್ಸಂಬಾದಲ್ಲಿ ಗಸ್ತು ತಿರುಗುವಾಗ ಸಿಆರ್ಪಿಎಫ್ ಯೋಧ ತನ್ನ ಗೆಳೆಯರೊಂದಿಗೆ ಮಾತನಾಡುತ್ತ ನಿಂತಿದ್ದ.
ಆಗ ಮಾಸ್ಕ್ ಧರಿಸುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಯೋಧ ಸೂಚನೆ ಪಾಲಿಸದೆ ‘ನೀವು ಯಾರು ನನ್ನನ್ನು ಕೇಳಲು. ನಾನು ಸಿಆರ್ಪಿಎಫ್ ಯೋಧನಿದ್ದೇನೆ’ ಎಂದು ಪ್ರತ್ಯುತ್ತರ ನೀಡಿದ್ದ. ಆಗ ಪೊಲೀಸರು, ಕಾನೂನು ಎಲ್ಲರಿಗೂ ಒಂದೆ, 144 ಸೆಕ್ಷನ್ ಜಾರಿಯಲ್ಲಿದೆ ಎಂದು ತಿಳಿಹೇಳಿದ್ದರು. ಅಷ್ಟಕ್ಕೆ ಯೋಧ ಸಂಯಮ ಕಳೆದುಕೊಂಡು ಪೊಲೀಸ್ ಕಾನ್ಸಟೇಬಲ್ ಹೊಟ್ಟೆಗೆ ಒದ್ದು, ಕಾಲರ್ ಹಿಡಿದು ಎಳೆದಾಡಿದ್ದಾನೆ.
ಆಗ ಹಿರಿಯ ಪೇದೆ ರಕ್ಷಣೆಗೆ ಬಂದು, ಬಳಿಕ ಆತನನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಾಥಮಿಕ ವಿಚಾರಣೆ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯೋಧ ಏಕಕಾಲಕ್ಕೆ 2-3 ಕಾನ್ಸ್ಟೇಬಲ್ಗಳನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದ್ದರಿಂದ ಅನಿವಾರ್ಯವಾಗಿ ಆತನನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿ ಹಾಕಬೇಕಾಯಿತು. ಸಮವಸ್ತ್ರದ ಮೇಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿರುವುದು ತಪ್ಪು.
ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಹಾಗೂ ಸಮವಸ್ತ್ರದಲ್ಲಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಕ್ಕೆ ಸೆಕ್ಷನ್ 355, 323, 504 ಅಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ನೈಜ ವಿಡಿಯೋದಲ್ಲಿ ಇಬ್ಬರು ಪೊಲೀಸರ ಮೇಲೆ ಬಲ ಪ್ರಯೋಗ ಮಾಡುವ ದೃಶ್ಯವಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅರ್ಧ ವಿಡಿಯೋ ಮಾತ್ರ ವೈರಲ್ ಆಗುತ್ತಿದೆ ಎಂದು ಎಸ್ಪಿ ತಿಳಿಸಿದರು.