ಬೆಂಗಳೂರು: ಎಚ್ಎಸ್ಆರ್ ಲೇಔಟ್ನ ಖಾಸಗಿ ಕಂಪನಿಯೊಂದರಿಂದ ವಿವಿಧೆಡೆ ಅಂಟಿಸಲಾಗಿದ್ದ ಭಿತ್ತಿಪತ್ರದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ನಗರದ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಯಾವುದೇ ಹೊರಾಂಗಣ ಜಾಹೀರಾತು, ಭಿತ್ತಿಪತ್ರ ಅಂಟಿಸುವುದನ್ನು ಪಾಲಿಕೆ ನಿಷೇಧಿಸಿದೆ. ಕೋರಮಂಗಲದಲ್ಲಿ ಗೋಡೆ ಮೇಲೆ ಅಂಟಿಸಲಾಗಿದ್ದ ಭಿತ್ತಿಪತ್ರ ಕಂಡು ಸಾರ್ವಜನಿಕರು ದೂರು ನೀಡಿದ್ದರು. ಇದನ್ನಾಧರಿಸಿ ಪಾಲಿಕೆ ಮಾರ್ಷಲ್ಗಳು ಎಚ್ಎಸ್ಆರ್ ಲೇಔಟ್ನಲ್ಲಿನ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಕಂಪನಿಗೆ ದಂಡ ವಿಧಿಸಿದ್ದಾರೆ.
ಟ್ವಿಟರ್ನಲ್ಲಿ ದೂರು: ಪಾಲಿಕೆಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ದಂಡ ವಿಧಿಸಿದ್ದರ ಬಗ್ಗೆ ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನೂರಾರು ಜನರು ತಮ್ಮ ಬೀದಿಗಳು, ರಸ್ತೆಗಳಲ್ಲಿ ಮರ, ವಿದ್ಯುತ್ ಕಂಬ ಹಾಗೂ ಕಾಂಪೌಂಡ್ಗಳಿಗೆ ಅಂಟಿಸಿರುವ ಜಾಹೀರಾತು ಭಿತ್ತಿಪತ್ರಗಳ ೆಟೋ ತೆಗೆದು ಕಳಿಸಿ ದೂರು ನೀಡುತ್ತಿದ್ದಾರೆ. ಪಾಲಿಕೆ ಸಹಾಯ 2.0 ತಂತ್ರಾಂಶದ ಮೂಲಕ ದೂರು ದಾಖಲಿಸುವಂತೆ ಜನರಿಗೆ ತಿಳಿಸಲಾಗಿದೆ.