ಹುಬ್ಬಳ್ಳಿ: ಸಾರಿಗೆ, ಪತ್ರಿಕೋದ್ಯಮ ಸೇರಿ ಅನೇಕ ಯಶಸ್ವಿ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉದ್ಯಮಶೀಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ ಸಿನಿಮಾ ಕ್ಷೇತ್ರಕ್ಕೂ ಎಂಟ್ರಿ ಕೊಡಲು ಸಜ್ಜಾಗಿದೆ.
ವಿಆರ್ಎಲ್ (ಲಿ.) ದೇಶದ ಅತ್ಯಂತ ದೊಡ್ದ ಟ್ರಾನ್ಸ್ಪೋರ್ಟೆಷನ್ ಸಂಸ್ಥೆಯಾಗಿದೆ. ವಿಆರ್ಎಲ್ ಮೀಡಿಯಾ ಗ್ರೂಪ್ನ ‘ವಿಜಯವಾಣಿ’ ಕರ್ನಾಟಕದ ನಂ.1 ಪತ್ರಿಕೆ. ‘ದಿಗ್ವಿಜಯ ನ್ಯೂಸ್’ ರಾಜ್ಯದ ಪ್ರಮುಖ ಸುದ್ದಿವಾಹಿನಿ. ಹಲವು ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ವಿಆರ್ಎಲ್ ಸಮೂಹ ಸಂಸ್ಥೆ ಇದೀಗ ಸಿನಿಮಾ ರಂಗದಲ್ಲೂ ತನ್ನ ಛಾಪು ಮೂಡಿಸಲು ಅಣಿಯಾಗುತ್ತಿದೆ. ಈ ಬಗ್ಗೆ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರೇ ಮಾಹಿತಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸೋಮವಾರ ಹುಬ್ಬಳ್ಳಿಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಹಮ್ಮಿಕೊಂಡಿದ್ದ ವಾಕಥಾನ್ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ವಿಆರ್ಎಲ್ ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು, ನಮ್ಮ ತಂದೆ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಏಳೆಂಟು ತಿಂಗಳಲ್ಲಿ ಸಿನಿಮಾ ತಯಾರಾಗಲಿದೆ. ವಿಆರ್ಎಲ್ ಸಂಸ್ಥೆಯೇ ಸಿನಿಮಾ ನಿರ್ಮಾಣ ಮಾಡುವ ಚಿಂತನೆ ಇದೆ ಎಂದು ಘೋಷಿಸಿದರು.
ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಮಹಿಳೆಯರ ಸಮಾನತೆಗಾಗಿ ನಡಿಗೆ: ವಿಆರ್ಎಲ್ ಮೀಡಿಯಾ ಆಯೋಜನೆ