More

    ವಿಶ್ವಗುರು ಅಂಕಣ | ಹಚ್ಚುವುದಾದರೆ ದೀಪ ಹಚ್ಚು, ಆರಿಸುವುದಾದರೆ ನೋವನ್ನಾರಿಸು

    ವಿಶ್ವಗುರು ಅಂಕಣ | ಹಚ್ಚುವುದಾದರೆ ದೀಪ ಹಚ್ಚು, ಆರಿಸುವುದಾದರೆ ನೋವನ್ನಾರಿಸುಚೀನಾದ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಉಯ್ಘರ್ ಮುಸಲ್ಮಾನರ ಮೇಲೆ ರಂಜಾನ್ ತಿಂಗಳಲ್ಲಿ ವಿಶೇಷ ಕಣ್ಗಾವಲಿರಿಸಲಾಗಿದೆ. ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಚೀನಾ ಸರ್ಕಾರ ಆದೇಶಿಸಿದೆ. ಸುಮಾರು ಒಂದೂಕಾಲು ಕೋಟಿಯಿರುವ ಇವರು ರಂಜಾನ್​ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ.

    ಇದು ರಂಜಾನ್ ತಿಂಗಳು. ಮುಸಲ್ಮಾನರ ಅತ್ಯಂತ ಪವಿತ್ರವಾದ ಹಬ್ಬ. ಕುರಾನ್ ಅವತೀರ್ಣಗೊಂಡಿದ್ದು ಇದೇ ತಿಂಗಳಲ್ಲಿ ಎಂದು ಮುಸಲ್ಮಾನರು ನಂಬುತ್ತಾರೆ. ಅವತೀರ್ಣಗೊಳ್ಳೋದು ಅಂದರೆ ಇದು ಯಾರೊ ಬರೆದಿಟ್ಟದ್ದಲ್ಲ. ಬದಲಿಗೆ, ಭಗವಂತನೇ ಪ್ರವಾದಿಯವರಿಗೆ ಈ ವಾಕ್ಯಗಳು ಗೋಚರಿಸುವಂತೆ ಮಾಡಿದ್ದು. ಈ ಕಾರಣಕ್ಕಾಗಿ ಕುರಾನ್ ಮೇಲೆ ವಿಶೇಷವಾದ ಶ್ರದ್ಧೆ ಮತ್ತು ಗೌರವ. ಈ ತಿಂಗಳಲ್ಲೇ ಇದು ಅವತೀರ್ಣಗೊಂಡಿದ್ದರಿಂದ ಮುಸಲ್ಮಾನರ ಪಾಲಿಗೆ ಇದು ಪವಿತ್ರ ಮಾಸ ಕೂಡ. ಈ ತಿಂಗಳಲ್ಲಿ ಅವರು ಉಪವಾಸ ಮಾಡುತ್ತಾ ದಾನ-ಧರ್ಮಗಳಲ್ಲಿ ತೊಡಗಿಕೊಂಡು, ಕುರಾನಿನ ಪಠನ ಮಾಡಿ, ಅದರ ಸಾರವನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡಿ ಆನಂತರ ಅದನ್ನು ಇಫ್ತಾರ್​ನ ಮೂಲಕ ಮುರಿಯುತ್ತಾರೆ.

    ವಾಸ್ತವವಾಗಿ ಅರಾಬಿಕ್ ಮೂಲದಿಂದ ಬಂದಿರುವ ಈ ಪದದ ಅರ್ಥವೇನು ಗೊತ್ತೇ? ಚೆನ್ನಾಗಿ ಬೇಯುವುದು, ಉರಿದು ಹೋಗುವುದು, ಹೊಳೆಯುವುದು ಅಂತೆಲ್ಲ. ಸ್ವಲ್ಪ ನಮ್ಮ ಭಾಷೆಗೆ ತರ್ಜುಮೆ ಮಾಡಿದರೆ ತಪಸ್ಸು ಎಂದಷ್ಟೇ. ಇಷ್ಟನ್ನೂ ಏಕೆ ಹೇಳಬೇಕಾಯ್ತೆಂದರೆ ಈ ರಂಜಾನ್ ಮಾಸವನ್ನು ನೆಪವನ್ನಾಗಿರಿಸಿಕೊಂಡು ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಸಲ್ಮಾನರ ವಿರುದ್ಧ ನಯವಾದ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ರಂಜಾನ್ ಅತ್ಯಂತ ಪವಿತ್ರವಾಗಿರುವುದರಿಂದ ಈ ತಿಂಗಳಲ್ಲಿ ಮುಸಲ್ಮಾನರು ಯಾವ ದುಷ್ಕೃತ್ಯದಲ್ಲೂ ತೊಡಗಿರುವುದಿಲ್ಲ ಎಂದಿದ್ದಾರೆ. ವಾಸ್ತವವಾಗಿ ಅದು ಪಶ್ಚಿಮ ಬಂಗಾಳದ ರಾಮನವಮಿಯ ಮೆರವಣಿಗೆಯ ಮೇಲೆ ಮುಸಲ್ಮಾನರು ನಡೆಸಿದ ಕಲ್ಲೆಸೆತದ ಆಕ್ರಮಣದಿಂದ ಅವರನ್ನು ಉಳಿಸುವ ಹೇಳಿಕೆಯಾಗಿತ್ತು. ದುರದೃಷ್ಟವೆಂದರೆ ಆಕೆ ಮುಸಲ್ಮಾನರನ್ನು ಶಾಶ್ವತವಾಗಿ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದ್ದಾರೆ. ಅಲ್ಲದೇ ಮತ್ತೇನು? ರಂಜಾನಿನ ಒಂದು ತಿಂಗಳು ದುಷ್ಕೃತ್ಯದಲ್ಲಿ ತೊಡಗುವುದಿಲ್ಲವೆಂದರೆ ಉಳಿದ ಹನ್ನೊಂದು ತಿಂಗಳು ಅದೇ ಕೆಲಸವೆಂದಾಯ್ತಲ್ಲ ಮತ್ತು ರಂಜಾನ್ ತಿಂಗಳಲ್ಲೂ ಅವರೇ ಈ ಕೃತ್ಯವನ್ನು ಮಾಡಿದ್ದೆಂದು ಸಾಬೀತುಪಡಿಸಿಬಿಟ್ಟರೆ ದುಷ್ಕೃತ್ಯವೆಸಗುವುದೇ ಅವರ ಕೆಲಸವೆಂದು ದೀದಿಯ ಮಾತುಗಳು ಎಂದಾಯ್ತಲ್ಲ.

    ದೀದಿ ಈ ಹೇಳಿಕೆ ನೀಡುವ ವೇಳೆಗೆ ಸರಿಯಾಗಿ ದುಬೈನ ಮುಸಲ್ಮಾನ ಮಿತ್ರರೊಬ್ಬರು ಮೊಬೈಲ್ ಸಂದೇಶವೊಂದನ್ನು ಕಳಿಸಿದ್ದರು. ದ.ರಾ. ಬೇಂದ್ರೆ ವಾಕ್ಯವೆಂದು ಅವರು ಹೇಳುವ ಆ ಸಂದೇಶ ‘ಹಚ್ಚೋದಾದರೆ ದೀಪವನ್ನೇ ಹಚ್ಚು, ಬೆಂಕಿಯನ್ನಲ್ಲ; ಆರಿಸೋದಾದ್ರೆ ನೋವನ್ನು ಆರಿಸು, ನಗುವನ್ನಲ್ಲ’ ಎಂದಿತ್ತು. ಮೊದಲಿನಿಂದಲೂ ಕೆಣಕುವ ಸಂದೇಶವನ್ನೇ ಕಳಿಸುವ ರೂಢಿಯ ಆತ ಇದನ್ನು ಸಹೃದಯತೆಯಿಂದ ಕಳಿಸಿರಲಾರ ಎಂಬುದು ಗೊತ್ತಿದ್ದುದರಿಂದಲೇ ನಾನು ನಯವಾಗಿಯೇ, ‘ವಾಹ್! ಜಗವೆಲ್ಲ ಇದನ್ನು ಅರಿತಿದ್ದರೆ ಭಾರತ ಇಂದು ಅಖಂಡವಾಗಿರುತ್ತಿತ್ತು’ ಎಂದು ಉತ್ತರಿಸಿದೆ. ಅತ್ತಲಿಂದ ಈ ಕುರಿತ ಚರ್ಚೆ ಮುಂದುವರಿಯಲಿಲ್ಲ. ಮುಸಲ್ಮಾನರು ಹಿಂದೂಗಳ ಸಹವಾಸದಲ್ಲಿ ಎಷ್ಟು ಹಾಯಾಗಿ ನೆಮ್ಮದಿಯಿಂದಿದ್ದಾರೋ, ಜಗತ್ತಿನಲ್ಲೆಲ್ಲೂ ಹಾಗಿಲ್ಲ. ಆದರೂ ನೋವಿನ ಸಂಗತಿ ಎಂದರೆ ಭಾರತದ ಮುಸಲ್ಮಾನರು ದಿನಗಳೆದಂತೆ ಹೆಚ್ಚು-ಹೆಚ್ಚು ಮತಭ್ರಮಿತರಾಗುತ್ತಿದ್ದಾರೆ. ಹಿಂದುಗಳನ್ನು ಅವಹೇಳನ ಮಾಡಲು, ಅವರ ಮಂದಿರಗಳನ್ನು ಧ್ವಂಸಮಾಡಲು, ಮೂರ್ತಿಗಳನ್ನು ಭಂಜಿಸಲು ಅವರಿಗೆ ಇಂತಹ ಮಾಸವೇ ಆಗಬೇಕೆಂದೇನಿಲ್ಲ.

    ರಂಜಾನ್ ಜೋರಾಗಿ ನಡೆಯುತ್ತಿರುವಾಗಲೇ ರಾಜಸ್ಥಾನದಿಂದ ಒಂದು ಸುದ್ದಿ ಬಂತು. ಸಾಂಚಿ ಬುಡಕಟ್ಟು ಜಾತಿಗೆ ಸೇರಿದ ರಾಜುರಾಂ ಎಂಬ ಕೂಲಿ ಕಾರ್ವಿುಕನ ಹೆಂಡತಿ ಝುಮ್ಮಾದೇವಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಬಾಗಿಲು ತೆರೆದು ನುಗ್ಗಿದ ಶಕೂರ್​ಖಾನ್ ಆಕೆಯನ್ನು ಬಲಾತ್ಕರಿಸಲು ಯತ್ನಿಸಿದ. ಆಕೆ ಅರಚಾಡುತ್ತಿರುವಾಗಲೇ ಆಕೆಯನ್ನು ವಿವಸ್ತ್ರಗೊಳಿಸಿ ಮುಗಿಬಿದ್ದ. ತೀವ್ರವಾಗಿ ಪ್ರತಿಭಟಿಸಿದಳೆಂಬ ಕಾರಣಕ್ಕೆ ಆಕೆಯ ಮೇಲೆ ಥಿನ್ನರ್ ಸುರಿದು ಬೆಂಕಿ ಹಚ್ಚೇಬಿಟ್ಟ. ಆಕೆಯನ್ನು ಉಳಿಸಲೆಂದು ಬಂದ ಅಕ್ಕಪಕ್ಕದವರನ್ನು ತಳ್ಳಿ ಓಡಿಸಿದ, ಸಿಕ್ಕು ಬೀಳುತ್ತೇನೆಂದು ಗೊತ್ತಾಗುವಾಗ ತಾನೇ ಕಾಣೆಯಾದ. ಮಟಮಟ ಮಧ್ಯಾಹ್ನ ನಡೆದ ಈ ಘಟನೆಯ ಸುದ್ದಿ ತಿಳಿದು ಗಾಬರಿಗೊಂಡ ರಾಜುರಾಂ ತನ್ನ ಹಳ್ಳಿಗೆ ಓಡಿಬಂದು ನೋಡಿದರೆ ಅರ್ಧದಷ್ಟು ಭಾಗ ಬೆಂದು ಹೋಗಿರುವ ಝುಮ್ಮಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಳು. ಸ್ಥಳೀಯ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿರುವಾಗ ಪೊಲೀಸ್ ಠಾಣೆಗೆ ಹೋಗಿ ದೂರುನೀಡಲು ಯತ್ನಿಸಿದರೆ ಪೊಲೀಸರು ಎಫ್​ಐಆರ್ ದಾಖಲಿಸಲು ನಿರಾಕರಿಸಿಬಿಟ್ಟರು.

    ಕೊನೆಗೆ ಹಿಂದೂ ಕಾರ್ಯಕರ್ತರು ಮಧ್ಯಪ್ರವೇಶಿಸಿ ಸ್ಥಳೀಯ ಬಿಜೆಪಿ ಘಟಕ ವ್ಯಾಪಕ ಪ್ರತಿಭಟನೆ ನಡೆಸಿದ ನಂತರ ಆತನ ವಿರುದ್ಧ ಪ್ರಕರಣ ದಾಖಲಿಸಲಾಯ್ತು. ಕಾಂಗ್ರೆಸ್ಸಿಗೆ ಸರಣಿ ಸೋಲುಗಳ ನಂತರವೂ ಬುದ್ಧಿ ಬಂದಿಲ್ಲವೆನ್ನುವುದು ಇದಕ್ಕೇ. ನಿರಂತರವಾಗಿ ಹಿಂದೂಗಳನ್ನು ಅಪಮಾನಗೊಳಿಸುತ್ತಲೇ ಬಂದ ಕಾಂಗ್ರೆಸ್ಸು ಇಂದು ವಿರೋಧಪಕ್ಷದ ಗೌರವವನ್ನೂ ಕಳೆದುಕೊಂಡು ಟ್ರೋಲ್​ಗಳಿಗಿಂತ ಕಡೆಯಾಗಿ ಬೀದಿಗೆ ಬಂದು ಕೂರುತ್ತಿದೆ. ಇಷ್ಟಾದಾಗ್ಯೂ ಹಿಂದೂವಿರೋಧಿ ನಡೆಯನ್ನು ಸರಿಪಡಿಸಿಕೊಳ್ಳದಿರುವುದು ಅಚ್ಚರಿ ಎನಿಸುತ್ತಿದೆ. ಹಾಗಂತ ಇದು ಕಾಂಗ್ರೆಸ್ಸಿನ ಕಥೆಯಷ್ಟೇ ಅಲ್ಲ. ರಂಜಾನ್​ಗಿಂತ ಕೆಲವು ದಿನಗಳ ಮುಂಚೆ ಬಿಹಾರದಲ್ಲಿ ಅರ್ಚನಾ ಕುಶ್ವಾಹ ಎಂಬ ಹುಡುಗಿಯನ್ನು ದಾನಿಶ್ ಆಲಂ ಇದೇ ರೀತಿ ಬಲಾತ್ಕರಿಸಿ ಬೆಂಕಿ ಹಚ್ಚಿದ್ದ. ಅಲ್ಲೆಲ್ಲಾ ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಹಿಂದೂವಿರೋಧಿಯಾಗಿ ಕೆಲಸ ಮಾಡುತ್ತಿರುವುದು ದೃಗ್ಗೋಚರ.

    ರಾಜಸ್ಥಾನದ್ದೇ ಆಳ್ವಾರ್​ನಲ್ಲಿ ರಂಜಾನಿನ ನಟ್ಟ ನಡುವೆಯೇ ಸಬೀರ್ ನಾಸಿರ್ ಮತ್ತು ನಜೀರ್ ಎಂಬಿಬ್ಬರು 16 ವರ್ಷದ ಹುಡುಗಿಯನ್ನು ಎಳೆದೊಯ್ದು ಬಲಾತ್ಕರಿಸಿದರು. ಹುಡುಗಿಯ ತಾಯಿ ದೂರನ್ನೂ ಕೊಟ್ಟಿದ್ದರು. ಆದರೇನು? ಪೊಲೀಸರು ಯಾವ ಕ್ರಮವನ್ನೂ ಕೈಗೊಳ್ಳದೇ ಆ ಹೆಣ್ಣುಮಗಳನ್ನೇ ಅಪಹಾಸ್ಯಗೊಳಿಸುವಂತಹ ಸ್ಥಿತಿ ನಿರ್ವಣಗೊಂಡಾಗ ಮಾನ ಕಳಕೊಂಡು ನ್ಯಾಯಕ್ಕೂ ಪರಿತಪಿಸಬೇಕಾದ ಸ್ಥಿತಿಗೆ ನಲುಗಿದ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.

    ಇವು ವರದಿಯಾದ ಪ್ರಕರಣಗಳಷ್ಟೇ. ಮಸೀದಿಗಳಲ್ಲಿ ಕಲ್ಲನ್ನು ಶೇಖರಿಸಿಟ್ಟು ಕೊಂಡು ಹಿಂದೂಗಳ ಮೆರವಣಿಗೆಯ ಮೇಲೆ ಗುರಿಯಿಟ್ಟು ಎಸೆಯುವವರಿಗೇನು ಅವರಲ್ಲಿ ಕೊರತೆಯಿಲ್ಲ! ತಪಸ್ಸಿಗಾಗಿ ರಂಜಾನ್ ಎಂಬ ಮಾತಿಗೂ, ಇವರು ನಡೆದುಕೊಳ್ಳುವ ರೀತಿಗೂ ಅಜಗಜಾಂತರವಲ್ಲವೇನು? ಇಷ್ಟಕ್ಕೂ ಇವರು ಹೀಗೆ ಬೇಕಾಬಿಟ್ಟಿಯಾಗಿ ವರ್ತಿಸಲು ಕಾರಣ ಯಾರು ಗೊತ್ತೇ? ಸಹಜವಾಗಿಯೇ ಆಳುವ ಮಂದಿ. ಉತ್ತರ ಪ್ರದೇಶ, ಗುಜರಾತಿನಲ್ಲಿ ಬಾಲಬಿಚ್ಚದ ಈ ಜನ ರಾಜಸ್ಥಾನದಲ್ಲಿ ಮೆರೆದಾಡುತ್ತಾರಲ್ಲ, ಹೇಗೆ? ಸಿದ್ದರಾಮಯ್ಯನವರ ಕಾಲದಲ್ಲಿ ಹಿಂದೂ ತರುಣರ ಸರಣಿ ಹತ್ಯೆಯಾಗಿದ್ದು ನೆನಪಿದೆಯಲ್ಲ? ಅವರು ಅಧಿಕಾರಕ್ಕೆ ಬಂದೊಡನೆ, ಈಗ ದೇಶದ್ರೋಹಿ ಕಾರ್ಯಗಳಿಗಾಗಿ ನಿಷೇಧಗೊಂಡಿರುವ ಪಿಎಫ್​ಐನ ನೂರಾರು ಕೇಸುಗಳನ್ನು ಹಿಂಪಡೆದರಲ್ಲ, ಒಮ್ಮೆಯಾದರೂ ಅವರು ಇವೆಲ್ಲಕ್ಕೂ ಎದುರಿಗೆ ಬಂದು ಉತ್ತರಿಸಿದ್ದಾರೇನು? ಹನುಮ ಜಯಂತಿಯಂದು ಮಾಂಸಾಹಾರ ಮುಟ್ಟುವುದಿಲ್ಲ ವೆಂದು ಹೇಳಿದ ತಮ್ಮದೇ ಕಾರ್ಯಕರ್ತನಿಗೆ ಹನುಮ ಹುಟ್ಟಿದ ದಿನಾಂಕ ಗೊತ್ತೇನೊ ಎಂದು ಮೂದಲಿಸುವ ನಾಯಕರೇ ಕಲ್ಲೆಸೆಯುವ ಮಂದಿಗೆ ಪ್ರೇರಣೆ.

    ಇನ್ನು ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತ ವರ್ಗವಿದೆ. ಅವರು ಪುಂಡಾಟಿಕೆ ನಡೆಸುವ, ಅಲ್ಪಸಂಖ್ಯಾತರಾಗಿರುವ ಮಂದಿಯನ್ನು ವಿರೋಧಿಸುವ ಧೈರ್ಯ ತೋರದಿರುವುದೇ ಕಲ್ಲೆಸೆಯುವವರಿಗೆ ಶಕ್ತಿ ತುಂಬುತ್ತದೆ. ಹಾಗಂತ ಯಾರೂ ವಿರೋಧಿಸುವವರಿರುವುದಿಲ್ಲವೆಂದೇನೂ ಇಲ್ಲ. ಶಾಂತವಾಗಿರುವ ಬಹುಸಂಖ್ಯಾತ ಮಂದಿಯಲ್ಲಿಯೇ ವಿಕಾಸದ ದೃಷ್ಟಿಯಿಂದ ಯೋಚಿಸುವ ಕೆಲ ಮಂದಿ ಇದ್ದಾರೆ. ಅವರಿಗೆ ತಮ್ಮ ಸಮುದಾಯ ಈ ಮೂಢನಂಬಿಕೆಗಳಿಂದ ಆಚೆ ಬಂದು ಎಲ್ಲರಂತೆ ಮುಖ್ಯಭೂಮಿಕೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕೆಂಬ ಬಯಕೆಯಿದೆ. ಆದರೆ ಅವರ ಮಾತುಗಳಿಗೆ ಶಕ್ತಿ ತುಂಬಬಲ್ಲಂತಹ ನಾಯಕತ್ವವಿಲ್ಲದೇ ಅವರು ಸೊರಗಿ ಹೋಗುತ್ತಾರೆ. ಈ ವಿಕಾಸ ಪರವಾದ ಮಂದಿ ಮೋದಿ, ಯೋಗಿಯನ್ನು ಇಷ್ಟಪಡುವುದು, ಎಲ್ಲರನ್ನೂ ಮುಖ್ಯವಾಹಿನಿಗೆ ತರುವ ಅವರ ಉದ್ದೇಶದ ಕಾರಣಕ್ಕಾಗಿಯೇ.

    ಸೌದಿ ಅರೇಬಿಯಾದ ಈಗಿನ ಯುವರಾಜ ಇದೇ ರೀತಿ ವಿಕಾಸದ ಕಲ್ಪನೆಯಿಟ್ಟುಕೊಂಡವ. ಹೀಗಾಗಿಯೇ ಆತ ಈ ಬಾರಿ ರಂಜಾನ್ ಆರಂಭವಾಗುವುದಕ್ಕೂ ಮುನ್ನ ಹತ್ತು ನಿಯಮಗಳನ್ನು ಅಲ್ಲಿನ ಮುಸಲ್ಮಾನರ ಮೇಲೆ ಹೇರಿದ್ದಾನೆ. ಮೌಲ್ವಿಗಳು ಮಸೀದಿಯಲ್ಲಿ ಇರಲೇಬೇಕೆಂದು, ಅವರೇ ಪ್ರಾರ್ಥನೆ ನಿರ್ವಹಿಸಬೇಕೆಂದು ಕಡ್ಡಾಯ ಮಾಡಿದ್ದಾನೆ. ಪ್ರಾರ್ಥನೆಗೆ ಧ್ವನಿವರ್ಧಕ ಬಳಸುವಂತಿಲ್ಲವೆಂದೂ, ಹೀಗೆ ನಡೆಯುವ ಪ್ರಾರ್ಥನೆ ರೆಕಾರ್ಡ್ ಮಾಡಿ ಹಂಚುವಂತಿಲ್ಲ ವೆಂದೂ ಎಚ್ಚರಿಸಿದ್ದಾನೆ. ಇನ್ನೂ ಅಚ್ಚರಿ ಎಂದರೆ ಪ್ರಾರ್ಥನೆಯನ್ನು ಚುಟುಕಾಗಿ ಮಾಡಿ ಮುಗಿಸಬೇಕೆಂದು ಹೇಳಿರುವುದಲ್ಲದೇ ಸಂಜೆಯ ಪ್ರಾರ್ಥನೆಯನ್ನು ಯಾರಿಗೂ ತೊಂದರೆಯಾಗದಂತೆ ಬೇಗ ಮುಗಿಸಬೇಕೆಂಬ ನಿಯಮವನ್ನೂ ಮಾಡಿದ್ದಾನೆ.

    ಅನೇಕ ಭಾರತೀಯ ಮುಸಲ್ಮಾನರಿಗೆ ಜೀರ್ಣವಾಗದ ಈ ಸಂಗತಿಗಳ ಜೊತೆಗೆ ಮಸೀದಿಯ ಹೊರಗೆಲ್ಲೂ ಇಫ್ತಾರ್ ಮಾಡಬಾರದು ಎಂಬ ಕಟುವಾದ ನಿಯಮವನ್ನು ಜೋಡಿಸಿ, ಇಫ್ತಾರ್ ಮುಗಿದೊಡನೆ ಆ ಸ್ಥಳವನ್ನು ಸ್ವಚ್ಛಗೊಳಿಸಬೇಕೆಂದೂ ಆದೇಶಿಸಿದ್ದಾನೆ. ನಡು ರಸ್ತೆಯಲ್ಲೇ ಟಾರ್ಪಾಲನ್ನು ಹಾಸಿಕೊಂಡು, ಅಲ್ಲಿಯೇ ತಾವು ತಂದ ಅಡುಗೆಯನ್ನು ತಿಂದು, ಇಡಿಯ ರಸ್ತೆಯನ್ನು ಹೊಲಸುಗೊಳಿಸುವ ಇಫ್ತಾರ್ ಮುರಿಯುವ, ಇಲ್ಲಿನವರಿಗೆ ಸೌದಿ ರಾಜನ ಕರೆ ಕೇಳುತ್ತದೇನೋ ನೋಡಬೇಕಷ್ಟೇ. ನೆನಪಿಡಿ, ಇಸ್ಲಾಂನ ಮೂಲ ಇದೇ ಸೌದಿ. ಭಾರತದ ಮುಸಲ್ಮಾನರೇನಿದ್ದರೂ ಅಲ್ಲಿನ ಆದೇಶವನ್ನು ಅನುಸರಿಸಬೇಕಷ್ಟೇ. ಅವರು ಅದನ್ನು ಧಿಕ್ಕರಿಸಿದರೆ ಇವರದ್ದು ಇಸ್ಲಾಂ ಎನಿಸಿಕೊಳ್ಳದೇ ಬೇರೆಯೇ ರಿಲಿಜನ್ ಆಗುತ್ತದೆ.

    ಸೌದಿಯ ಕಥೆ ಹಾಗಾದರೆ ಇತ್ತ ಚೀನಾದಲ್ಲಿ ಉಯ್ಘರ್ ಮುಸಲ್ಮಾನರು ರಂಜಾನ್ ಸಂದರ್ಭದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಅಲ್ಲಿನ ಶಿಂಜಿಯಾಂಗ್ ಪ್ರಾಂತ್ಯದ 1811 ಹಳ್ಳಿಗಳಲ್ಲಿ ಹಬ್ಬಿಕೊಂಡಿರುವ ಇವರ ಮೇಲೆ ರಂಜಾನ್ ತಿಂಗಳಲ್ಲಿ ದಿನದ 24 ತಾಸೂ ವಿಶೇಷ ಕಣ್ಗಾವಲಿರಿಸಲಾಗಿದೆ. ಕಾರಣವೇನು ಗೊತ್ತೇ? ಇವರ್ಯಾರೂ ಉಪವಾಸ ಮಾಡುವಂತಿಲ್ಲವೆಂದು ಚೀನಾ ಸರ್ಕಾರ ಆದೇಶಿಸಿದೆ.

    ಪಾಲಕರು ಉಪವಾಸ ಮಾಡಿದರೆ ಸುಳಿವು ನೀಡುವಂತೆ ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ. ಸುಮಾರು ಒಂದೂಕಾಲು ಕೋಟಿಯಿರುವ ಈ ಮುಸಲ್ಮಾನರು ರಂಜಾನ್​ನ ಅವಧಿಯಲ್ಲಿ ವಿಚಿತ್ರವಾದ ಸಂಕಟಕ್ಕೆ ಸಿಲುಕಿದ್ದಾರೆ ಎಂದು ಉಯ್ಘುರ್​ಗಳ ಜಾಗತಿಕ ಸಂಘಟನೆ ಗಲಾಟೆ ಎಬ್ಬಿಸಿದೆ. ಭಾರತದ ಮುಸಲ್ಮಾನರ ಬೆಂಬಲಕ್ಕೆ ತಾನಿದ್ದೇನೆಂದು ಹೇಳಿಕೊಳ್ಳುವ ಭಿಕಾರಿ ಪಾಕಿಸ್ತಾನ ಈ ಮುಸಲ್ಮಾನರ ಬಗ್ಗೆ ಮಾತ್ರ ದನಿಯೇ ಎತ್ತುವುದಿಲ್ಲ. ಅಚ್ಚರಿಯಲ್ಲವೇನು? ಭಿಕಾರಿ ಪಾಕಿಸ್ತಾನವೆಂದದ್ದಕ್ಕೆ ಕೆಲವರಿಗೆ ಬೇಸರವಾಗಬಹುದೇನೋ! ರಂಜಾನ್ ತಿಂಗಳಲ್ಲಿ ಗೋಧಿಹಿಟ್ಟು ಹಂಚಲೆಂದು ಸರ್ಕಾರ ವ್ಯವಸ್ಥೆ ಮಾಡಿಕೊಂಡಿದ್ದಾಗ ಅದನ್ನು ಪಡೆಯಲು ಧಾವಿಸಿದ ಮಂದಿಯಲ್ಲಿ ಅನೇಕರು ನೂಕುನುಗ್ಗಲಿಗೆ ಒಳಗಾಗಿಯೇ ಪ್ರಾಣಬಿಟ್ಟರಂತೆ. ಅಲ್ಲಿನ ಸರ್ಕಾರ ಭಾರತ ಹಾಕಿದ ದಿಗ್ಬಂಧನಕ್ಕೆ ಹೇಗೆ ಪತರಗುಟ್ಟಿದೆ ಎಂದರೆ ನಮ್ಮ ಪ್ರಭಾವದಿಂದಾಗಿಯೇ, ಅಲ್ಲಿನ ಸಬ್​ವೆುರಿನ್​ಗೆ ಬೇಕಾದ ಬ್ಯಾಟರಿಗಳನ್ನು ಕೊಡಲು ಗ್ರೀಸ್ ನಿರಾಕರಿಸಿದೆ. ಗಾಯಕ್ಕೆ ಉಪ್ಪು ಹಾಕುವಂತೆ ಭಾರತ ಪಾಕಿಸ್ತಾನಕ್ಕೆ ಹರಿಯುವ ನೀರಿನ ಕುರಿತಂತಹ 1960ರ ಒಪ್ಪಂದವನ್ನು ಪುನರ್ ನವೀಕರಿಸಲು ಕಳಿಸಿದ ಪತ್ರಕ್ಕೆ ವಿಶ್ವಬ್ಯಾಂಕಿನಿಂದಲೂ ಸಹಾಯ ಸಿಗದೇ ಹೋದಾಗ ಪಾಕಿಸ್ತಾನ ಬಾಯ್ಮುಚ್ಚಿಕೊಂಡು ಸಂಧಾನಕ್ಕೆ ಬರಲೊಪ್ಪಿದೆ. ಇದೂ ರಂಜಾನ್ ತಿಂಗಳಲ್ಲೇ ನಡೆದದ್ದು.

    ಕೆಲವೇ ಕೆಲವರು ರಾಜಕೀಯ ಮಂದಿಯ ಆಮಿಷಕ್ಕೆ ಒಳಗಾಗಿ ಹಿಂದೂ-ಮುಸಲ್ಮಾನ್ ಬಾಂಧವ್ಯವನ್ನು ಕೆಡಿಸಲೆತ್ನಿಸಿದಾಗ ಮುಸಲ್ಮಾನರಲ್ಲೇ ಶಾಂತವಾಗಿರುವ ಬಹುಸಂಖ್ಯಾತರು ಸದ್ದು ಮಾಡಬೇಕಾದ ಅಗತ್ಯವಿದೆ. ರಂಜಾನ್ ತಿಂಗಳಿನ ತಪಸ್ಸಿನ ವೇಳೆ ಅವರು ಈ ಸಂಕಲ್ಪ ಮಾಡದೇ ಹೋದರೆ ಭವಿಷ್ಯದ ದಿನಗಳಲ್ಲಿ ಇಸ್ಲಾಂ ಜಾಗತಿಕ ಅಧಃಪತನ ಕಾಣುವುದು ನಿಶ್ಚಿತ. ಬೇಂದ್ರೆಯವರೇ ಹೇಳಿದ್ದಾರಲ್ಲ, ‘ಹಚ್ಚೋದಾದ್ರೆ ದೀಪವನ್ನು ಹಚ್ಚು, ಬೆಂಕಿಯನ್ನಲ್ಲ’ ಅಂತ. ಬೆಂಕಿ ಹಚ್ಚುವ ಮಂದಿ ದೀರ್ಘಕಾಲ ಉಳಿಯುವುದು ಸಾಧ್ಯವಿಲ್ಲ. ಏಕೆಂದರೆ ನೆರೆಮನೆಯನ್ನು ಸುಡಲೆಂದು ಹಚ್ಚುವ ಬೆಂಕಿ ಆನಂತರ ತನ್ನನ್ನೇ ಸುಡುತ್ತದೆ. ಅಲ್ಲವೇನು?

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts