ಅಂಬರೀಶ್ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1.34 ಎಕರೆ ಜಾಗ ಮತ್ತು 5 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಸೋಮವಾರ ಮಂಜೂರು ಮಾಡಿದೆ. ಅಂಬರೀಶ್ ಸ್ಮಾರಕಕ್ಕೆ ಸರ್ಕಾರ ಜಾಗ ಮತ್ತು ದುಡ್ಡು ಕೊಟ್ಟಿರುವ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೇಸರ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಕರೊನಾ ಭೀತಿಯಲ್ಲಿ ಆಮೀರ್ ಖಾನ್ ಕುಟುಂಬ!
ಪ್ರಮುಖವಾಗಿ ಇಡೀ ದೇಶವು ಕರೊನಾದಿಂದ ತತ್ತರಿಸಿದ್ದು, ಈ ಸಂದರ್ಭದಲ್ಲಿ ಅಂಬರೀಶ್ ಸ್ಮಾರಕಕ್ಕೆ ಹಣ ಬಿಡುಗಡೆ ಮಾಡುವ ಅವಶ್ಯಕತೆ ಇತ್ತಾ ಎಂದು ಹಲವರು ಪ್ರಶ್ನಿಸಿದ್ದಾರೆ. ಜನ ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವಾಗ ಸ್ಮಾರಕದ ಅವಶ್ಯಕತೆ ಏನಿತ್ತು ಮತ್ತು ಆ ಹಣವನ್ನು ಅಂಬರೀಶ್ ಅವರ ಹೆಸರಿನಲ್ಲೇ, ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳಬಹುದಿತ್ತು ಎಂಬ ಅಭಿಪ್ರಾಯ ಸಹ ಹಲವರಿಂದ ವ್ಯಕ್ತವಾಗುತ್ತಿದೆ. ಇನ್ನು ಸ್ಮಾರಕ ಕಟ್ಟುವುದಕ್ಕೆ ಸರ್ಕಾರದ ಹಣವೇ ಏಕೆ ಬೇಕು, ಜಾಗ ಮತ್ತು ಹಣ ಎರಡನ್ನೂ ಸರ್ಕಾರವೇ ಕೊಡಬೇಕು ಎನ್ನುವುದು ಹಲವರ ಪ್ರಶ್ನೆಯಾಗಿದೆ.
ಇದೊಂದು ಕಡೆಯಾದರೆ, ವಿಷ್ಣುವರ್ಧನ್ ಅವರ ಸ್ಮಾರಕದ ನಿರ್ಮಾಣದ ಬಗ್ಗೆ ಸರ್ಕಾರ ನಿರ್ಲಕ್ಷಿಸಿದ್ದು, ಈ ಬಗ್ಗೆ ವಿಷ್ಣುವರ್ಧನ್ ಅವರ ಹಲವು ಅಭಿಮಾನಿಗಳು ಧ್ವನಿ ಎತ್ತಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಹಲವರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಕುಚಿಕೂ ಗೆಳೆಯರೆಂದೇ ಜನಪ್ರಿಯರಾದವರು. ವಿಷ್ಣುವರ್ಧನ್ ಅವರು ನಿಧನರಾಗಿ ಒಂದು ದಶಕ ಆಗಿದೆ. ಆದರೂ ಅವರ ಸ್ಮಾರಕದ ಕೆಲಸ ಶುರುವಾಗಿ ಕಳೆದ ವರ್ಷವಷ್ಟೇ. ಸುಮಾರು ಒಂದು ದಶಕ ಆದರೂ ವಿಷ್ಣುವರ್ಧನ್ ಅವರ ಸ್ಮಾರಕ ನಿಮಾರ್ಣ ಆಗದೇ ಇದ್ದಿದ್ದು, ವಿಪರ್ಯಾಸವೇ ಸರಿ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಕೆಲವರು ಸರ್ಕಾರದ ಈ ಕ್ರಮಕ್ಕೆ, ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮನಗೆದ್ದಿದ್ದ ಸುಶಾಂತ್ ಸಿಂಗ್!
ಹೀಗೆ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಸ್ಮಾರಕಗಳ ಕುರಿತಾಗಿ ಹೋಲಿಕೆಗಳು ಶುರುವಾಗುತ್ತಿದ್ದಂತೆಯೇ, ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಈ ರೀತಿಯ ಹೋಲಿಕೆ, ಟೀಕೆಗಳಿಂದ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಸ್ನೇಹ ಮತ್ತು ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ ಎಂದು ಮನವಿ ಮಾಡಿದ್ದಾರೆ. ಆದರೂ ಅಭಿಮಾನಿಗಳ ಆಕ್ರೋಶ ಮುಂದುವರೆದಿದೆ.