ಹೈದರಾಬಾದ್: ವಿಜಯವಾಡ- ಸಿಕಂದರಾಬಾದ್ ರೈಲಿನಲ್ಲಿ ಬಾಂಬ್ ಇದೆ ಎಂದು ಪೋನ್ ಕರೆ ಬಂದ ಹಿನ್ನೆಲೆಯಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿತ್ತು.
ಕರೆ ಬಂದ ತಕ್ಷಣವೇ ಆರ್ಪಿಎಫ್, ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯ ದಳ ಇಡೀ ರೈಲಿನ ತಪಾಸಣೆ ಮಾಡಿತು. ಆದರೆ ಅನುಮಾನಾಸ್ಪದ ವಸ್ತುಗಳು ದೊರೆತಿಲ್ಲ ಎಂದು ಆರ್ಪಿಎಫ್ನ ಅಧೀಕ್ಷಕಿ ಅನುರಾಧ ತಿಳಿಸಿದ್ದಾರೆ.
ಇಂದು ಬೆಳಗ್ಗೆ ವಿಜಯವಾಡ- ಸಿಕಂದರಾಬಾದ್ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಬಂದಿತು. ನಮ್ಮ ಸಿಬ್ಬಂದಿ ರೈಲನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು. ಆದರೆ ಬಾಂಬ್ ಪತ್ತೆಯಾಗಿಲ್ಲ. ಅದು ಕೇವಲ ಹುಸಿ ಕರೆ. ಆತಂಕ ಸೃಷ್ಟಿಸಲು ಕರೆ ಮಾಡಲಾಗಿದೆ ಎಂದು ಅನುರಾಧ ತಿಳಿಸಿದರು.
ಈ ಬಗ್ಗೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಕರೆ ಬಂದ ಮೂಲದ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್)