ಬೆಂಗಳೂರು: ಸಾಮಾನ್ಯವಾಗಿ ನಿರ್ದೇಶಕರು ನಾಯಕನನ್ನು ಗಮನದಲ್ಲಿಟ್ಟುಕೊಂಡು ಕಥೆ ಮಾಡುತ್ತಾರೆ. ಆದರೆ, ನಿರ್ದೇಶಕ ರಾಜೀವ್ ಚಂದ್ರಕಾಂತ್, ಖಳನಾಯಕನನ್ನು ಗಮನದಲ್ಲಿಟ್ಟುಕೊಂಡು ಒಂದು ಕಥೆ ಮಾಡಿದ್ದಾರೆ, ಅದಕ್ಕೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಎಂದು ಹೆಸರಿಟ್ಟು ಸದ್ದಿಲ್ಲದೆ ಚಿತ್ರ ಮಾಡಿ ಮುಗಿಸಿದ್ದಾರೆ.
ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅಪ್ಪು ಫ್ಯಾನ್ಸ್ ಗರಂ: ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸುವೆ…
ಇತ್ತೀಚೆಗೆ, ಈ ಚಿತ್ರಕ್ಕೆ ಎರಡು ಹಾಡುಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಒಂದು ಹಾಡನ್ನು ವಿಜಯಪ್ರಕಾಶ್ ಹಾಡಿದರೆ, ಇನ್ನೊಂದು ಹಾಡನ್ನು ಹಿರಿಯ ನಟಿ-ಗಾಯಕಿ ಬಿ. ಜಯಶ್ರೀ ಹಾಡಿದ್ದಾರೆ. ’ಯಾವ ಸೀಮೆ ಅಂದದರಸಿ ಕಂಡರೆಲ್ಲೊ ಇವಳೆ, ಎದೆ ಕದವ ತೆರೆದು ಎದುರೆ ಬಂದು ನಿಂತಳೇನು ಅವಳೆ …’ ಎಂಬ ಹಾಡನ್ನು ವಿಜಯಪ್ರಕಾಶ್ ಹಾಡಿದ್ದಾರೆ. ’ಸಂಜೇಲಿ ಹೊಯ್ದಾವೋ ಮಂಜಿನ ಚಿತ್ತಾರ, ಗಾಟಿಯ ಏರಿಳಿದು ಹೋಯ್ತಾವೋ ನೇಸಾರ …’ ಎಂಬ ಇನ್ನೊಂದು ಹಾಡನ್ನು ಪದ್ಮಶ್ರೀ ಬಿ.ಜಯಶ್ರೀ ಹಾಡಿದ್ದಾರೆ. ಕೆ.ಎಂ. ಇಂದ್ರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡುಗಳನ್ನು ಹಂಸಲೇಖಾ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿಕೊಳ್ಳಲಾಗಿದೆ.
ಈ ಹಿಂದೆ ನಾಗಾಭರಣ ಅವರಲ್ಲಿ ಕೆಲಸ ಕಲಿತುಕೊಂಡು, ನಂತರ 75ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ ಡಿಸೈನ್ ಮಾಡಿದ ಅನುಭವ ಇರುವ ರಾಜೀವ್ ಚಂದ್ರಕಾಂತ್, ‘ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ’ಸಲಗ’ ಚಿತ್ರದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್ ಕುಮಾರ್ ಖಳನಾಯಕನಾಗಿ ಕಾಣಿಸಿಕೊಳ್ಳುವ ಜತೆಗೆ ಡಿಜೆ ಪ್ರಕಾಶ್ ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಟ ಚಂದನ್ ಮೇಲೆ ತೆಲುಗು ಧಾರಾವಾಹಿ ಚಿತ್ರೀಕರಣ ಸ್ಥಳದಲ್ಲಿ ಹಲ್ಲೆ! ವಿಡಿಯೋ ವೈರಲ್
ರಾಮಾಪುರ ಎಂಬ ಊರಿನಲ್ಲಿ, 1990ರ ದಶಕದಲ್ಲಿ ನಡೆಯುವ ಕಾಲ್ಪನಿಕ ಕಥೆ ಇದಾಗಿದೆ. ಎಂಟು ಗಡ್ಡಧಾರಿಗಳ ಸುತ್ತ ಸಾಗುವ ಈ ಚಿತ್ರದಲ್ಲಿ ಪ್ರವೀಣ್, ನಮ್ರತಾ, ಗಣೇಶ್ ರಾವ್, ಅವಿನಾಶ್, ರಮೇಶ್ ಭಟ್, ಬೆನಕ ನಂಜಪ್ಪ, ಪ್ರಶಾಂತ್ ಸಿದ್ದಿ, ನಂಜುಂಡ ಮುಂತಾದವರು ನಟಿಸಿದ್ದಾರೆ. ಕೆ.ಜಿ.ಎಫ್, ಕೋಲಾರ ಮುಂತಾದ ಕಡೆ 45 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆದಿದೆ.
ವಿಆರ್ಎಲ್ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹುಟ್ಟುಹಬ್ಬ: ವಿಜಯಾನಂದ ಚಿತ್ರತಂಡದಿಂದ ಟೀಸರ್ ಗಿಫ್ಟ್