More

    23 ರಿಂದ ಶರಣರ ನಾಡಿನಲ್ಲಿ ಶಿಕ್ಷಣ ಮೇಳ

    ವಿಜಯಪುರ: ಹೊಸತನದ ಹರಿಕಾರ, ಕನ್ನಡಿಗರ ಧ್ವನಿ ‘ವಿಜಯವಾಣಿ-ದಿಗ್ವಿಜಯ ನ್ಯೂಸ್’ ಇದೇ ಪ್ರಥಮ ಬಾರಿಗೆ ವಿಜಯಪುರದಲ್ಲಿ ನಗರದ ಪ್ರತಿಷ್ಠಿತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಸಹಯೋಗದಲ್ಲಿ ಜ. 23, 24 ಹಾಗೂ 25 ರಂದು ನಗರದ ಲಿಂಗದಗುಡಿ ರಸ್ತೆಯಲ್ಲಿರುವ ಸಂಗನಬಸವ ಸಮುದಾಯ ಭವನದಲ್ಲಿ ಶಿಕ್ಷಣ ಮೇಳ (ಎಜ್ಯುಕೇಷನ್ ಎಕ್ಸ್‌ಪೋ) ಹಮ್ಮಿಕೊಂಡಿದೆ.

    ಈ ಮೇಳದಲ್ಲಿ ಸಿದ್ಧೇಶ್ವರ ಸಂಸ್ಥೆಯ ಸಂಗನ ಬಸವ ಅಂತಾರಾಷ್ಟ್ರೀಯ ವಸತಿ ಶಾಲೆ ಸಹವರ್ತಿ ಪ್ರಾಯೋಜಕತ್ವ ವಹಿಸಿದ್ದು, ಶ್ರೀಮತಿ ರಾಜೇಶ್ವರಿ ಕರ್ಪೂರಮಠ ಪಿಯು ಮತ್ತು ಆಯುರ್ವೇದಿಕ್ ಮಹಾವಿದ್ಯಾಲಯ, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯ, ಬಾಗಲಕೋಟೆ ಜಿಲ್ಲೆ ಬೀಳಗಿಯ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ, ಧಾರವಾಡದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಹಾಗೂ ಚಿಕ್ಕೋಡಿಯ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಯೋಜಕತ್ವದಲ್ಲಿ ಶಿಕ್ಷಣ ಮೇಳ ನಡೆಯಲಿದೆ.

    ಅಲ್ಲದೇ, ಶಿಕ್ಷಣ ಮೇಳದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ತಮ್ಮ ಸಂಸ್ಥೆಯಲ್ಲಿರುವ ಶಿಕ್ಷಣದ ಗುಣಮಟ್ಟ, ಮೂಲ ಸೌಕರ್ಯ, ಶೈಕ್ಷಣಿಕ ಸಾಧನೆ, ಅನುಭವಿ ಶಿಕ್ಷಕ ವೃಂದದ ಸಮಗ್ರ ಮಾಹಿತಿಯನ್ನು ಮೇಳದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಒದಗಿಸಲಿವೆ.

    ನಿತ್ಯ ಜ್ಞಾನ ದಾಸೋಹ
    ಶಿಕ್ಷಣ ಮೇಳದಲ್ಲಿ ನಿತ್ಯವೂ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಜ್ಞಾನ ದಾಸೋಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಾಡಿನ ಖ್ಯಾತ ಶಿಕ್ಷಣ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ, ವ್ಯಕ್ತಿತ್ವ ವಿಕಸನ, ಪರೀಕ್ಷಾ ತಯಾರಿ, ಹೆಚ್ಚಿನ ಅಂಕ ಗಳಿಸುವ ಮಾರ್ಗೋಪಾಯ, ವೈದ್ಯಕೀಯ, ತಾಂತ್ರಿಕ ವೃತ್ತಿಪರ ಶಿಕ್ಷಣದ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಮಾಹಿತಿಯನ್ನು ಒದಗಿಸಲಿದ್ದಾರೆ.

    ಜ. 23 ರಂದು ಬೆಳಗ್ಗೆ 11-00 ಗಂಟೆಗೆ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಜಯಪುರ-ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಶಿಕ್ಷಣಾಸಕ್ತರನ್ನುದ್ದೇಶಿಸಿ ವ್ಯಕ್ತಿತ್ವ ವಿಕಸನದ ಉಪನ್ಯಾಸ ನೀಡಲಿದ್ದಾರೆ.

    ಮಧ್ಯಾಹ್ನ 2ರಿಂದ 3.30ರವರೆಗೆ ಶಿವಮೊಗ್ಗದ ನ್ಯಾಷನಲ್ ಕಾಲೇಜಿನ ಶಿಕ್ಷಣ ತಜ್ಞರಾದ ನಾಗರಾಜ ಕೋಣನೂರ ಅವರು ಪರೀಕ್ಷಾ ಭಯದಿಂದ ಹೊರಬರುವುದು ಹೇಗೆ? ಹಾಗೂ ಅಭ್ಯಾಸ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮಧ್ಯಾಹ್ನ 3.30ರಿಂದ ಸಂಜೆ 4.30 ರವರೆಗೆ ವಿಜಯಪುರದ ಎಕ್ಸಲೆಂಟ್ ವಿಜ್ಞಾನ ಪಿಯುಸಿ ಕಾಲೇಜಿನ ಶಿಕ್ಷಣ ತಜ್ಞರಾದ ಶ್ರೀಕಾಂತ ಅವರು ‘ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?’ ಎಂಬ ವಿಷಯದ ಬಗ್ಗೆ ಸವಿಸ್ತಾರ ಮಾಹಿತಿ ಒದಗಿಸಲಿದ್ದಾರೆ.

    ಜ. 24 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12.30ರವರೆಗೆ ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅರವಿಂದ ಪಾಟೀಲ ಅವರು ‘ವೈದ್ಯಕೀಯ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳು’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12.30 ರಿಂದ 2ರವರೆಗೆ ಧಾರವಾಡದ ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ ಡಾ. ಗೋಪಾಲಕೃಷ್ಣ ಕಮಲಾಪುರ ಅವರಿಂದ ‘ತಾಂತ್ರಿಕ ವಿಜ್ಞಾನದಲ್ಲಿರುವ ವಿವಿಧ ಅವಕಾಶಗಳು’ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 3ಕ್ಕೆ ಕೃಷಿ ವಿವಿ ಸಹಾಯಕ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ. ಬೆಳ್ಳಿ ಅವರಿಂದ ‘ಕೃಷಿ ಕ್ಷೇತ್ರದಲ್ಲಿರುವ ಅವಕಾಶಗಳು’ ಬಗ್ಗೆ ಸಮಗ್ರ ಮಾಹಿತಿ ನೀಡಲಿದ್ದಾರೆ.

    ಜ. 25 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 12.30ರವರೆಗೆ ಕುಮುದ್ ಬೇನ್ ದರಬಾರ್ ವಾಣಿಜ್ಯ, ವಿಜ್ಞಾನ ಹಾಗೂ ನಿರ್ವಹಣೆ ಅಧ್ಯಯನ ಮಹಾವಿದ್ಯಾಲಯದ ಉಪಸ್ಯಾಸಕರಾದ ಅರುಣಕುಮಾರ ವೈ.ಎಸ್ ಅವರು ಎಂಬಿಎ, ಬಿಬಿಎ, ಟ್ಯಾಲಿ, ಎಸ್‌ಎಪಿ, ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಮಾರ್ಗದರ್ಶನ ನೀಡುವರು. ಮಧ್ಯಾಹ್ನ 12.30 ರಿಂದ ಸಂಜೆ 2 ರವರೆಗೆ ಧಾರವಾಡದ ಬುಲ್‌ಬುಲೇಸ್ ಬ್ಯಾಂಕಿಂಗ್ ಕಾಲೇಜಿನ ನಿರ್ದೇಶಕ ಡಾ. ಗುರುರಾಜ ಬುಲ್‌ಬುಲೆ ಅವರು ಬ್ಯಾಂಕಿಂಗ್, ಆರ್‌ಬಿಐ, ರೈಲ್ವೆ, ಎಸ್‌ಎಸ್‌ಸಿ ಪರೀಕ್ಷೆಗಳನ್ನು ಎದುರಿಸಲು ತಯಾರಿ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಸಂಜೆ 3 ರಿಂದ 4.30 ರವರೆಗೆ ಧಾರವಾಡದ ಕ್ಲಾಸಿಕ್ ಸ್ಟಡಿ ಸೆಂಟರ್‌ನ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್‌ಐ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತಯಾರಿ ಬಗ್ಗೆ ಉಪನ್ಯಾಸ ನೀಡುವರು. ಸಂಜೆ 4.30ರಿಂದ 5.30ರವರೆಗೆ ಕರ್ನಾಟಕ ಅಕ್ಕ ಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಓಂಕಾರ ಕಾಕಡೆ ‘ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ.

    ಮೂರು ದಿನದ ಈ ಶಿಕ್ಷಣ ಮೇಳದಲ್ಲಿ ಶಿಕ್ಷಣ ಕ್ಷೇತ್ರದ ಸಕಲ ಮಾಹಿತಿ ಲಭ್ಯವಾಗುತ್ತಿದ್ದು ಇಂಥ ಅತ್ಯುತ್ತಮ ಅವಕಾಶವನ್ನು ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ‘ವಿಜಯವಾಣಿ – ದಿಗ್ವಿಜಯ ವಾಹಿನಿ’ ಮನವಿ ಮಾಡಿದೆ.

    ಸಂಜೆ ಮನರಂಜನೆ ಕಾರ್ಯಕ್ರಮ
    ಮೇಳದಲ್ಲಿ ಜ. 23ರಂದು ಸಂಜೆ 6-00 ಗಂಟೆಗೆ ಖ್ಯಾತ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ ಅವರಿಂದ ಹಾಸ್ಯಸಂಜೆ ಹಾಗೂ ಜ. 24ರಂದು ಸಂಜೆ 6-00 ಗಂಟೆಗೆ ಖ್ಯಾತ ಗಾಯಕ ವೀರೇಶ ವಾಲಿ ಹಾಗೂ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.

    ಮೇಳದಲ್ಲಿ ಭಾಗವಹಿಸುತ್ತಿರುವ ಇತರೆ ಶಿಕ್ಷಣ ಸಂಸ್ಥೆಗಳು
    ವಿಜಯಪುರದ ಸಂತ ಜೋಸೆಫ್ ಪ.ಪೂ. ಕಾಲೇಜ್, ಕಮಲಾದೇವಿ ಪಾಟೀಲ ಶಿಕ್ಷಣ ಸಂಸ್ಥೆ, ಎನ್.ಬಿ. ಪಾಟೀಲ ಪಿಯು ವಿಜ್ಞಾನ ಕಾಲೇಜ್, ಸರಸ್ವತಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ, ರೇಸಿಂಗ್ ಬ್ರೇನ್ ಆಕ್ಸಿಸ್ ಸಂಸ್ಥೆ, ಡಾ. ನಾಗೂರ ಮೆಮೋರಿಯಲ್ ಟ್ರಸ್ಟ್, ಡಾ. ಎಲ್.ಎಚ್. ಬಿದರಿ ಅವರ ಅಶ್ವಿನಿ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜ್, ಅನುಗ್ರಹ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್, ರವೀಂದ್ರನಾಥ ಠಾಗೂರ ಪಿಯು ವಿಜ್ಞಾನ ಕಾಲೇಜ್, ಡಾ. ಮುನೀರ ಬಾಂಗಿಯವರ ನರ್ಸಿಂಗ್ ಕಾಲೇಜ್, ನಾಗರಾಳೆ ಪ್ರಬ್ಲಿಕ್ ಶಾಲೆ, ಪ್ರಾರ್ಥನಾ ಪಬ್ಲಿಕ್ ಶಾಲೆ ಮತ್ತು ಪ.ಪೂ ಕಾಲೇಜ್, ಇಜೇರಿ ಐಎಎಸ್, ಕೆಎಎಸ್ ಸ್ಟಡಿ ಸರ್ಕಲ್, ಎಆರ್‌ಜೆ ಇಂಟರ್‌ನ್ಯಾಷನಲ್ ಶಾಲೆ, ಕರ್ನಾಟಕ ಎಜ್ಯುಕೇಷನ್ ಟ್ರಸ್‌ನ ಜ್ಞಾನ ಜ್ಯೋತಿ ವಸತಿ ಶಾಲೆ, ಬಾಗಲಕೋಟೆ ಅನಗವಾಡಿಯ ಬಿ.ಎನ್. ಖೋತ್ ಅಂತಾರಾಷ್ಟ್ರೀಯ ವಸತಿ ಶಾಲೆ, ವಾಗ್ದೇವಿ ಎಜ್ಯುಕೇಷನ್ ಅಕಾಡೆಮಿ, ಬೀಳಗಿಯ ಎಕ್ಸ್‌ಪರ್ಟ್ ಇಂಟರ್‌ನ್ಯಾಷನಲ್ ಶಾಲೆ, ತಾಳಿಕೋಟೆಯ ಘನಮಠೇಶ್ವರ ಶಿಕ್ಷಣ ಸಂಸ್ಥೆ, ಮುದ್ದೇಬಿಹಾಳದ ಅಭ್ಯುದಯ ಪದವಿಪೂರ್ವ ಕಾಲೇಜ್, ನಾಗರಬೆಟ್ಟದ ಆಕ್ಸ್‌ಫರ್ಟ್ (ಮಠ) ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜ್, ಪಾಟೀಲ್ಸ್ ಆಕ್ಸ್‌ಫರ್ಡ್ ಪಿಯು ಕಾಲೇಜ್, ಸಿಂದಗಿಯ ಪೀಪಲ್ಸ್ ಎಜ್ಯುಕೇಷನ್ ಸೊಸೈಟಿ, ಝಳಕಿಯ ಬಸವ ಇಂಜಿನಿಯರಿಂಗ್ ಕಾಲೇಜ್, ಇಂಡಿಯ ಆರ್.ಎಂ. ಶಹಾ ಸಿಬಿಎಸ್‌ಸಿ ಶಾಲೆ ಮತ್ತು ಕಾಲೇಜ್, ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಪಿಯು ಕಾಲೇಜ್, ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ವಿಶ್ವವಿದ್ಯಾಲಯ, ಮಂಗಳೂರಿನ ವಿಕಾಸ ಪ್ರೀ ಯೂನಿವರ್ಸಿಟಿ ಕಾಲೇಜ್, ಶಾರದಾ ವಿದ್ಯಾಲಯ, ಬೆಂಗಳೂರಿನ ಯೂನಿವರ್ಸಲ್ ಶಿಕ್ಷಣ ಸಮೂಹ ಸಂಸ್ಥೆ, ಹೊಸಬೆಳಕು ಗ್ರೂಪ್ ಆಫ್ ಇನ್ಸ್‌ಟಿಟ್ಯೂಷನ್ ಪಾಲ್ಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts