ವಿಜಯಪುರ: ನಗರದ ವಿದ್ಯಾವರ್ಧಕ ಸಂಘದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯು ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಅಂಗವಾಗಿ ಸ್ವಚ್ಛ ಭಾರತ ಅಭಿಯಾನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಅ.2ರಂದು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಪಡೆದು, ಸಕ್ಕರೆ ವಿತರಿಸುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಳೆದ ವರ್ಷ 6.5 ಕ್ವಿಂಟಾಲ್ ಸಕ್ಕರೆಯನ್ನು ವಿತರಿಸಿ, ಅಷ್ಟೇ ಪ್ರಮಾಣದ ಪ್ಲಾಸ್ಟಿಕ್ನ್ನು ಸಂಗ್ರಹಿಸಿ ಮಹಾನಗರ ಪಾಲಿಕೆಗೆ ನೀಡಲಾಗಿತ್ತು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವುದನ್ನು ಅರಿತಿರುವ ಸಂಸ್ಥೆ ಈ ಬಾರಿಯೂ ಪ್ಲಾಸ್ಟಿಕ್ ಪಡೆದು ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಿದ್ಧವಾಗಿದೆ. ಸಂಘದ ಅಧ್ಯಕ್ಷ ರಾಜೇಶ ದರಬಾರ ಅವರ ನೇತೃತ್ವದಲ್ಲಿ ದರಬಾರ ಸಮೂಹ ಶಿಕ್ಷಣ ಸಂಸ್ಥೆಗಳ ದರಬಾರ ಹೈಸ್ಕೂಲ್ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಪ್ಲಾಸ್ಟಿಕ್ ಸಂಗ್ರಹಿಸಿ ತಂದು ಕೊಡಬಹುದಾಗಿದ್ದು, ಬರುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು. ಒಂದು ಆಧಾರ್ ಕಾರ್ಡ್ಗೆ ಗರಿಷ್ಠ 10 ಕೆಜಿ ಸಕ್ಕರೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.