ಚೆನ್ನೈ: ಕಾಲಿವುಡ್ ನಟ ವಿಜಯ್ ರಾಜಕೀಯ ಪ್ರವೇಶದ ವದಂತಿಯ ನಡುವೆಯೇ ಅಭಿಮಾನಿಗಳ ಸಂಘದ ಮುಂಚೂಣಿ ಸದಸ್ಯರ ಜತೆ ತಮ್ಮ ನಿವಾಸದಲ್ಲಿ ವಿಜಯ್ ರಹಸ್ಯವಾಗಿ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನಿನ್ನೆ ನಡೆದ ಸಭೆ
ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳ ಪ್ರಮುಖ ವಿಜಯ್ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನಿನ್ನೆ (ಜು.11) ಮಧ್ಯಾಹ್ನ 2 ಗಂಟೆಗೆ ಮನೆಯನ್ನು ತಲುಪಿದ ವಿಜಯ್, ಅಭಿಮಾನಿಗಳ ಜತೆ ಸಭೆ ನಡೆಸಿದ್ದು, ರಾಜ್ಯದ ಜನರ ಬಳಿ ವರ್ಚಸ್ಸು ಗಳಿಸಲು ಕೆಲವು ಕಾರ್ಯಗಳನ್ನು ಆಯಾ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸಲು ಅಭಿಮಾನಿಗಳಿಗೆ ವಿಜಯ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಂಚಾಯಿತಿ ಚುನಾವಣೆಯಲ್ಲಿ ಗೆಲುವು
ವಿಜಯ್ ಅಭಿಮಾನಿ ಸಂಘ ದಳಪತಿ ವಿಜಯ್ ಮಕ್ಕಳ್ ಇಯಕ್ಕಂನಿಂದ ಕಳೆದ ಬಾರಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಯಾವುದೇ ಪ್ರಚಾರವಿಲ್ಲದೆ, 115 ಸ್ಥಾನಗಳನ್ನು ಗೆದ್ದಿತು. ಇದೇ ಹುಮ್ಮಸ್ಸಿನಲ್ಲಿರುವ ವಿಜಯ್, ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ರಾಜಕೀಯ ಎಂಟ್ರಿ ತಳ್ಳಿಹಾಕುವಂತಿಲ್ಲ
ವಿಜಯ್ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದ್ದಾರೆ ಎಂಬ ವದಂತಿಯೂ ಇದೆ. ವೆಂಕಟ್ಪ್ರಭು ನಿರ್ದೇಶನದ ಸಿನಿಮಾ ಬಳಿಕ ವಿಜಯ್, ಬ್ರೇಕ್ 3 ವರ್ಷಗಳ ಕಾಲ ಸಿನಿಮಾಗಳಿಂದ ಬ್ರೇಕ್ ಪಡೆದುಕೊಳ್ಳಲಿದ್ದಾರೆ. ಮುಂದಿನ ವರ್ಷ ಅಂದರೆ, 2024ರ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ವೆಂಕಟ್ ಪ್ರಭು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆ ಬಳಿಕ ವಿಜಯ್ ಅವರು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಭೆ ನಡೆದಿರುವುದನ್ನು ನೋಡಿದರೆ ವಿಜಯ್, ರಾಜಕೀಯ ಎಂಟ್ರಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಹಣ ಪಡೆದ ಮತ ಹಾಕಬೇಡಿ
ವಿಜಯ್ ರಾಜಕೀಯ ಸೇರುವ ವಿಚಾರ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಅದಕ್ಕೆ ಕಾರಣ ವಿಜಯ್, ಇತ್ತೀಚೆಗೆ ನಡೆಸಿದ ಒಂದು ಕಾರ್ಯಕ್ರಮ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿಜಯ್ ಅಭಿನಂದಿಸಿದರು ಮತ್ತು ಇದೇ ಕಾರ್ಯಕ್ರಮದಲ್ಲಿ ವಿಜಯ್, ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು. ಹಣ ಪಡೆದು ಮತ ಚಲಾಯಿಸಬೇಡಿ ಎಂದಿದ್ದರು.
ಈ ಕಾರ್ಯಕ್ರಮದ ಬಳಿಕ ಅನೇಕ ರಾಜಕೀಯ ನಾಯಕರು ವಿಜಯ್ ಅವರು ರಾಜಕೀಯ ಎಂಟ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ವಿಜಯ್ ರಾಜಕೀಯ ಎಂಟ್ರಿಯನ್ನು ಬೆಂಬಲಿಸಿದ್ದರು. ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕ ತಿರುಮಾವಲವನ್ ಅವರು ಸಾರ್ವಜನಿಕವಾಗಿ ವಿಜಯ್ ರಾಜಕೀಯ ಪ್ರವೇಶವನ್ನು ವಿರೋಧಿಸಿದ್ದರು.
ಆದರೆ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆಯಾಗಲಿ ಅಥವಾ ವಿಜಯ್ ಆಗಲಿ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಒಂದು ವೇಳೆ ವಿಜಯ್ ರಾಜಕೀಯ ಪ್ರವೇಶಿಸಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತಾರಾ ಎಂಬ ಕುತೂಹಲ ಹಾಗೇ ಇದೆ. ಮುಂದೆ ಏನೆಲ್ಲ ಬೆಳವಣಿಗೆ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. (ಏಜೆನ್ಸೀಸ್)
ಸಿನಿಮಾಗೆ ಬ್ರೇಕ್ ಕೊಟ್ಟು 2026ರಲ್ಲಿ ಚರಿತ್ರೆ ಸೃಷ್ಟಿಸುತ್ತಾರಾ ನಟ ವಿಜಯ್? ತಮಿಳುನಾಡಲ್ಲಿ ಹೀಗೊಂದು ಚರ್ಚೆ
ನಟ ವಿಜಯ್ ರಾಜಕೀಯ ಪ್ರವೇಶ ವಿಚಾರ: ತಮಿಳುನಾಡು ಸಿಎಂ ಪುತ್ರ ಉದಯನಿಧಿ ಪ್ರತಿಕ್ರಿಯೆ ವೈರಲ್
ನಟ ವಿಜಯ್ ರಾಜಕೀಯ ಪ್ರವೇಶ ವಿಚಾರ: ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಹೇಳಿಕೆ