ಚಿಕ್ಕಮಗಳೂರು: ದೂರು ನೀಡಿದರೂ ಪ್ರಕರಣ ದಾಖಲಿಸದ ಪೊಲೀಸರ ನಡೆಯಿಂದ ಅಸಮಾಧಾನಗೊಂಡ ಮಹಿಳೆಯೊಬ್ಬರು ತಡರಾತ್ರಿ 1 ಗಂಟೆಯವರೆಗೂ 4 ವರ್ಷದ ಮಗುವಿನ ಜತೆ ಠಾಣೆಯಲ್ಲೇ ಕುಳಿತು ನ್ಯಾಯಕ್ಕಾಗಿ ಪಟ್ಟು ಹಿಡಿದ ಘಟನೆ ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ದೂರು ದಾಖಲಿಸದೆ ನಿರ್ಲಕ್ಷ್ಯ
ಪಕ್ಕದ ಮನೆ ಯುವಕರು ಅಸಭ್ಯ ವರ್ತಿಸುತ್ತಿದ್ದಾರೆ ಮತ್ತು ಗಂಡನಿಗೆ ಜೀವ ಬೆದರಿಕೆ ಇದೆ ಅಂತ ಮಹಿಳೆ ಎರಡು ದಿನದ ಹಿಂದೆಯೇ ದೂರು ನೀಡಿದ್ದರು. ಅಲ್ಲದೆ, ಇದಕ್ಕೆ ಸಂಬಂಧಿಸಿ ವಿಡಿಯೋವನ್ನು ಸಹ ಸಾಕ್ಷಿಯನ್ನಾಗಿ ಮಹಿಳೆ ಕೊಟ್ಟಿದ್ದರು. ಸೂಕ್ತ ದಾಖಲೆಗಳು ಲಭ್ಯವಾದರೂ ಸಹ ಕುದುರೆಮುಖ ಪೊಲೀಸರು ದೂರು ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದ ಬೇಸತ್ತ ಮಹಿಳೆ ಇನ್ಸ್ಪೆಕ್ಟರ್ ಕಚೇರಿಯಲ್ಲೇ ಮಧ್ಯರಾತ್ರಿವರೆಗೂ ಕುಳಿತು ನ್ಯಾಯಕ್ಕಾಗಿ ಒತ್ತಾಯಿಸಿದರು. ಇದನ್ನೂ ಓದಿ: ಶತಮಾನದಷ್ಟು ಹಳೆಯದಾದ ದೇಗುಲ ಸೇರಿದಂತೆ 4 ದೇವಾಲಯಗಳ ಮೇಲೆ ದಾಳಿ: ಕಿಡಿಗೇಡಿಗಳಿಂದ 12 ಮೂರ್ತಿಗಳು ವಿರೂಪ
ಆಕ್ರೋಶಕ್ಕೆ ಎಚ್ಚೆತ್ತ ಪೊಲೀಸರು
ತನ್ನ 4 ವರ್ಷದ ಮಗುವಿಗೆ ಪೊಲೀಸ್ ಠಾಣೆಯಲ್ಲೇ ಊಟ ಮಾಡಿಸಿ, ಮಲಗಿಸಿ, ತಡರಾತ್ರಿವರೆಗೂ ಅಲ್ಲಿಯೇ ಉಳಿದಿದ್ದರು. ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗದೆ ನಾನು ಮನೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಮಹಿಳೆಯ ಆಕ್ರೋಶದಿಂದ ಎಚ್ಚೆತ್ತ ಪೊಲೀಸರು ಮಧ್ಯರಾತ್ರಿ ಯುವಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಸಂತ್ರಸ್ತೆ ಮಹಿಳೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯ ಸಂಸೆ ಗ್ರಾಮದ ನಿವಾಸಿ. ಅಸಭ್ಯ ವರ್ತನೆ ತೋರಿದ ನವೀನ್, ಶ್ರೇಯಾಂಶ್ ವಿರುದ್ಧ ದೂರು ದಾಖಲಾಗಿದೆ.ಇದನ್ನೂ ಓದಿ: ಜೂ. 7ರಂದು ಹಸೆಮಣೆ ಏರಬೇಕಿದ್ದ ಯುವಕ ದುರಂತ ಸಾವು: ಮಧ್ಯರಾತ್ರಿ ನಡೆಯಿತು ಘೋರ ಕೃತ್ಯ!
ಸಂತ್ರಸ್ತ ಮಹಿಳೆಯ ದೂರಿನ ಸಾರಾಂಶ ಈ ಕೆಳಕಂಡಂತಿದೆ
ನನ್ನ ಮನೆಯ ಪಕ್ಕದಲ್ಲಿ ಶ್ರೇಯಾಂಶ ಕುಮಾರ್ ಎಂಬುವರು ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. ಸಂಸೆಯ ಟೀ ಎಸ್ಟೇಟಿನ ನವೀನ ಎಂಬುವರು ಪ್ರತಿ ದಿನ ಶ್ರೇಯಾಂಶ ಅವರ ಮನೆಗೆ ಬಂದು ಹೋಗುತ್ತಿದ್ದರು. ನವೀನ ಅವರು ಮೇ 30ರಂದು ಶ್ರೇಯಾಂಶ ಅವರ ಮನೆಗೆ ರಾತ್ರಿ 8.30ರ ಸುಮಾರಿಗೆ ತನ್ನ ಮಗಳಾದ ರೇಷ್ಮಾ ಹಾಗೂ ಹೆಂಡತಿಯನ್ನು ಕರೆದುಕೊಂಡು ಬಂದಿದ್ದರು. ಈ ಸಂದರ್ಭದಲ್ಲಿ ನಾನು ಮತ್ತು ನನ್ನ ಗಂಡ ಮನೆಯಲ್ಲಿಯೇ ಇದ್ದೆವು. ಶ್ರೇಯಾಂಶ ಮತ್ತು ನವೀನ ನನ್ನ ಗಂಡನನ್ನು ಅಶ್ಲೀಲ ಶಬ್ಧದಿಂದ ಬಯ್ಯಲು ಆರಂಭಿಸಿದರು. ಇದನ್ನ ಕೇಳಿ ನಾನು ಕಿಟಕಿ ಬಾಗಿಲು ಹಾಕಲು ಪ್ರಯತ್ನಿಸಿದಾಗ ನನಗೆ ಅಶ್ಲೀಲ ಪದಗಳಿಂದ ನಿಂದಿಸಿದರು. ಅಲ್ಲದೆ, ತನ್ನ ಪ್ಯಾಂಟ್ ಅನ್ನು ಬಚ್ಚಿ ಅಶ್ಲೀಲವಾದ ಸನ್ನೆ ಮಾಡಿದರು. ಇದನ್ನು ಕೇಳಿ ನನ್ನ ಗಂಡ ಹೊರಗಡೆ ಬಂದಾಗ ಪಕ್ಕದಲ್ಲೇ ಇದ್ದ ಕಬ್ಬಿಣದ ರಾಡಿನಿಂದ ಶ್ರೇಯಾಂಶ ಮತ್ತು ನವೀನ ಹಲ್ಲೆ ನಡೆಸಲು ಮುಂದಾದರು. ನಾನು ಹೊರಬಂದು ಗಂಡನ ರಕ್ಷಣೆಗೆ ಹೋದಾಗ ನನ್ನನ್ನು ದೂರ ತಳ್ಳಿದರು. ಬಳಿಕ ಅವರಿಂದ ತಪ್ಪಿಸಿಕೊಂಡು ಮನೆಯೊಳಗೆ ಓಡಿ ಬಾಗಿಲು ಹಾಕಿಕೊಂಡು ರಕ್ಷಿಸಿಕೊಂಡೆವು. ನಾನು ಮತ್ತು ನನ್ನ ಗಂಡ ಮನೆ ಒಳಗೆ ಕೂತು 112 ನಂಬರ್ನ ಸಹಾಯವಾಣಿಗೆ ಕರೆ ಮಾಡಿ ರಕ್ಷಣೆ ಕೋರಿದೆವು. ನವೀನ – ಮತ್ತು ಶ್ರೀಯಾಂಕ ಅವರಿಬ್ಬರು ಮನೆಯ ಎದುರು ನಿಂತು ಅಶ್ಲೀಲವಾಗಿ ಬೈಯುತ್ತಿದ್ದರು. ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗಂಡನಿಗೆ ಕೊಲೆ ಬೆದರಿಕೆ ಹಾಕಿದರು. ನಾವು ಜೀವಭಯದಿಂದ ಬದುಕಬೇಕಾಗಿದೆ. ಆದ್ದರಿಂದ ದಯವಿಟ್ಟು ತಾವುಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು
ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಬಸ್ ಪ್ರಯಾಣ: ಪುರುಷರಿಗೆ ಶುರುವಾಯ್ತು ಹೊಸ ಟೆನ್ಶನ್
ವಿದೇಶ ಪ್ರವಾಸದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ ರಾಹುಲ್ ಗಾಂಧಿ! ಯಾವುದು ಆ ವಿಚಾರ?