More

    ತಂಬಾಕು ಉತ್ಪಾದನೆಗೆ ವರುಣನ ಮುನಿಸು

    ರವಿ ಬೆಟ್ಟಸೋಗೆ ಅರಕಲಗೂಡು
    ತಾಲೂಕಿನಲ್ಲಿ ತಂಬಾಕು ಉತ್ಪಾದನೆಗೆ ಹೆಚ್ಚು ಆಸಕ್ತಿ ಹೊಂದಿರುವ ರೈತರಿಗೆ ವರುಣನ ಮುನಿಸು ಹೊಡೆತ ನೀಡಿದ್ದು ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದೆ.

    ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು ಬೆಳೆಯಲು ರೈತರು ಈಗಾಗಲೇ ಸಸಿ ಮಡಿ ಬೆಳೆಸಿಕೊಂಡಿದ್ದಾರೆ. ದುರಾದೃಷ್ಟವಶಾತ್ ಏಪ್ರಿಲ್ ತಿಂಗಳು ಕಳೆಯುತ್ತಾ ಬಂದರೂ ವರುಣ ಕೃಪೆ ತೋರಿಲ್ಲ. ಬದಲಾಗಿ ಬೇಸಿಗೆ ಬಿರು ಬಿಸಿಲಿನ ತಾಪಕ್ಕೆ ನೀರಿನ ಅಭಾವ ತಲೆದೋರಿ ಬೆಳೆಸಿದ್ದ ಸಸಿ ಮಡಿಗಳು ನಲುಗುತ್ತಿದ್ದು, ರೈತರನ್ನು ಕಂಗೆಡಿಸಿದೆ.

    ಬಿಸಿಲಿನ ತಾಪಮಾನದಿಂದ ಸಸಿ ಮಡಿಗಳನ್ನು ರಕ್ಷಿಸಿಕೊಳ್ಳಲು ರೈತರು ಟ್ರೇ ಸಸಿ ಬಿತ್ತನೆ ಮೊರೆ ಹೋಗಿದ್ದಾರೆ. ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಿದರೆ ಮಳೆ ಬಿದ್ದ ತಕ್ಷಣ ನಾಟಿ ಮಾಡಿದರೆ ಗಿಡಗಳು ತೇವಾಂಶದ ಕೊರತೆ ನೀಗಿ ಬೇಗನೆ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೆಚ್ಚಿನ ರೈತರು ಸಸಿ ಮಡಿಗಳನ್ನು ಟ್ರೇನಲ್ಲಿ ಬೆಳೆಸಲು ಮುಂದಾಗಿದ್ದಾರೆ.

    ಕಳೆದ ಬಾರಿ ಮಾರುಕಟ್ಟೆಯಲ್ಲಿ ತಂಬಾಕಿಗೆ ಉತ್ತಮ ಬೆಲೆ ದೊರೆತ ಖುಷಿಯಲ್ಲಿ ರೈತರು ಈ ಸಲ ಹೊಗೆಸೊಪ್ಪು ಬೆಳೆಯಲು ಹೆಚ್ಚಿನ ಒಲವು ತೋರಿದ್ದಾರೆ. ಎರಡು ತಿಂಗಳ ಹಿಂದೆಯೇ ಸಸಿ ಮಡಿ ಬಿತ್ತನೆ ನಡೆಸಿ ಇದೀಗ ಮಳೆಗಾಗಿ ಮುಗಿಲಿನತ್ತ ದೃಷ್ಟಿ ನೆಟ್ಟಿದ್ದಾರೆ. ಒಂದೆಡೆ ಸಸಿ ಮಡಿಗಳು ಬೆಳೆದು ನಿಂತಿವೆ. ಮತ್ತೊಂದೆಡೆ ಮಳೆಯನ್ನೇ ನೆಚ್ಚಿಕೊಂಡಿರುವ ರೈತರು ಇನ್ನೂ ಜಮೀನು ಉಳುಮೆ ಕೂಡ ಮಾಡಿಲ್ಲ. ಕೆಲವು ಕಡೆ ಸಾಧಾರಣ ಮಳೆಯಾಗಿದ್ದು ಭೂಮಿ ಉಳುಮೆಗೆ ಹದವಾಗಿಲ್ಲ. ಕೊಟ್ಟಿಗೆ ಗೊಬ್ಬರ ಸಾಗಿಸಿ ಜಮೀನು ಹದಗೊಳಿಸಲು ತುರ್ತಾಗಿ ಜೋರು ಮಳೆ ಬೀಳಬೇಕಾಗಿದೆ. ತದನಂತರ ನಾಟಿ ಕಾರ್ಯ ಕೈಗೊಳ್ಳಬೇಕಾಗಿದೆ. ಹೀಗಾಗಿ ಮಳೆಯ ಮುನಿಸು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

    ಸಕಾಲದಲ್ಲಿ ನಾಟಿ ಕಾರ್ಯಕ್ಕೆ ಹಿನ್ನಡೆಯಾದರೆ ಸಸಿ ಮಡಿಗಳಿಗೆ ಕುತ್ತು ಬರಲಿದೆ. ಕೆಲವು ಕಡೆ ಸಸಿ ಮಡಿಗಳಲ್ಲಿ ಸೊರಗು ಕಾಣಿಸಿಕೊಳ್ಳಲಾರಂಭಿಸಿದೆ. ಅಲ್ಲದೆ ಕರಿಕಡ್ಡಿ ರೋಗ ಬಾಧಿಸುತ್ತಿದೆ. ಇದರಿಂದಾಗಿ ಬೆಳೆಸಿದ್ದ ಸಸಿಮಡಿಗಳನ್ನು ಕಿತ್ತು ನಾಟಿ ಮಾಡಿದರೆ ಜಮೀನಿನಲ್ಲಿ ಗಿಡಗಳು ಸತ್ತು ಹೋಗಲಿವೆ. ಹೀಗಾಗಿ ಬೆಳೆಸಿದ್ದ ಸಸಿಮಡಿಗಳು ನಷ್ಟಕ್ಕೊಳಗಾಗುವ ಆತಂಕ ರೈತರಲ್ಲಿದೆ.

    ತಂಬಾಕು ಗಿಡಗಳಲ್ಲಿ ಕಾಣಿಸಿಕೊಳ್ಳುವ ಸೊರಗು ರೋಗವನ್ನು ಪರಿಸರ ಸ್ನೇಹಿಯಾಗಿ ಮತ್ತು ಪರಿಣಾಮಕಾರಿಯಾಗಿ ನಿಯಂತ್ರಿಸಲು ಟ್ರೈಕೋಡರ್ಮಾ ಬಳಕೆ ಅತ್ಯವಶ್ಯಕ. ಟ್ರೇ ಮಾಡುವಾಗ ಕೋಕೋಪಿಟ್ ಜತೆ ಬೆಳೆಸಿದ ಟ್ರೈಕೋಡರ್ಮಾ ಮಿಶ್ರಣದಲ್ಲಿ ತಂಬಾಕು ಸಸಿ ಬೆಳೆಸಿದರೆ ಸೊರಗು ರೋಗವನ್ನು ಟ್ರೇ ಮತ್ತು ಜಮಿನಿನಲ್ಲಿ ಹತೋಟಿಗೆ ತರಬಹುದು.

    ಒಂದು ಸಿಂಗಲ್ ಬ್ಯಾರಲ್‌ಗೆ ನೆರಳಿನಲ್ಲಿ 3 ಕೆಜಿಯಷ್ಟು ಟ್ರೈಕೋಡರ್ಮಾ, 1 ಕೆಜಿಯಷ್ಟು ಬೇವಿನ ಹಿಂಡಿ ಮತ್ತು 50ರಿಂದ 60 ಕೆಜಿಯಷ್ಟು ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ನೀರನ್ನು ಹಾಕಬೇಕು. ಆದರೆ, ನೀರು ಹೊರಕ್ಕೆ ಹರಿಯಬಾರದು, ಹಾಗೆಯೇ ತೇವಾಂಶವನ್ನು ನಿಯಂತ್ರಣ ಮಾಡಬೇಕು. ನಂತರ ಗೋಣಿಚೀಲ ಮುಚ್ಚಿ ಪ್ರತಿ ದಿನ ನೀರನ್ನು ಹಾಕಿ ತೇವಾಂಶ ಸರಿಯಾಗಿರುವಂತೆ ನೋಡಿಕೊಳ್ಳಬೇಕು. 8ರಿಂದ 10 ದಿನಗಳ ನಂತರ ಬಿಳಿಯ ಬಣ್ಣದ ಪರದೆಯ ಶಿಲೀಂಧ್ರದ ಬೆಳವಣಿಗೆ ಕಾಣುತ್ತದೆ. ಹೀಗೆ ಬೆಳವಣಿಗೆಯಾದ ಟ್ರೈಕೋಡರ್ಮಾವನ್ನು ಒಂದು ಚೀಲ ಕೋಕೋಪಿಟ್‌ಗೆ ಒಂದು ಬಾಣಲಿಯಷ್ಟು ಬೆರೆಸಿ ಟ್ರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಸೊರಗು ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸುವ ಅವಶ್ಯಕತೆ ಇರುವುದಿಲ್ಲ. ಇದರಿಂದ ರೋಗದ ನಿಯಂತ್ರಣ ಮತ್ತು ಹಣದ ಉಳಿತಾಯಕ್ಕೆ ನೆರವಾಗಲಿದೆ. ಮುಖ್ಯವಾಗಿ ಟ್ರೇ ಮಾಡುವ 10ರಿಂದ 12 ದಿನಗಳ ಮುಂಚೆಯೇ ಟ್ರೈಕೋಡರ್ಮಾದ ಬೆಳವಣಿಗೆಯ ಕಾರ್ಯವನ್ನು ಪ್ರಾರಂಭಿಸಬೇಕು. ಟ್ರೈಕೋಡರ್ಮಾ 6 ತಿಂಗಳಿಗಿಂತ ಹಳೆಯದಾಗಿರಬಾರದು. ಆದ್ದರಿಂದ ತೆಗೆದುಕೊಳ್ಳುವಾಗ ಉತ್ಪಾದನಾ ದಿನಾಂಕವನ್ನು ಪರಿಶೀಲಿಸಿಕೊಳ್ಳಬೇಕು. ಟ್ರೈಕೋಡರ್ಮಾ ಬೆಳವಣಿಗೆಯಾದ ನಂತರ ಗೊಬ್ಬರದ ರಾಶಿಯನ್ನು ಗುದ್ದಲಿಯಿಂದ ಮಿಶ್ರಣ ಮಾಡಿಕೊಳ್ಳಬೇಕು ಎನ್ನುತ್ತಾರೆ ತಂಬಾಕು ಮಾರುಕಟ್ಟೆ ಅಧಿಕಾರಿಗಳು.

    ಜಮೀನಿನಲ್ಲಿ ಸೊರಗು ರೋಗ, ಕಪ್ಪು ಕಾಂಡ ರೋಗ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಸಸಿ ಮಡಿಗಳಿಗೆ ಜಮೀನಿಗೆ ನಾಟಿ ಮಾಡುವ ಮೂರ್ನಾಲ್ಕು ದಿನ ಮುಂಚಿತವಾಗಿ 20 ಗ್ರಾಂ ರಿಡೋಮಿಲ್ ಗೋಲ್ಡ್ , 10 ಗ್ರಾಂ ಗ್ಲೋಇಟ್ ಮತ್ತು 100 ಗ್ರಾಂ ಪೊಟಾಶಿಯಂ ನೈಟ್ರೇಟ್ 15 ಲೀಟರ್ ಸ್ಪ್ರೇ ಕ್ಯಾನಿಗೆ ಹಾಕಿ ಟ್ರೇ ಸಸಿಗಳಿಗೆ ಸಿಂಪಡಿಸಿದ ನಂತರ ಜಮೀನಿಗೆ ನಾಟಿ ಮಾಡುವುದು ಸೂಕ್ತ. ಈಗಾಗಲೇ ಜಮೀನಿಗೆ ನಾಟಿ ಮಾಡಿದ್ದರೆ, ನಾಟಿ ಮಾಡಿದ 10 ರಿಂದ 12 ದಿನಗಳ ನಂತರ ಸೊರಗಕ್ಕೆ ವೆಲ್ಟ್ ಮತ್ತು ಕಪ್ಪು ಕಾಂಡದ ರೋಗ ನಿಯಂತ್ರಣಕ್ಕೆ ರಿಡಾಮಿಲ್ 200 ಗ್ರಾಂ ಮತ್ತು ಗ್ಲೋಇಟ್ 100 ಎಂಎಲ್ ಜತೆಗೆ 1 ಕೆಜಿ ಪೋಟ್ಯಾಷಿಯಂ ನೈಟ್ರೇಟ್ ಅನ್ನು 200 ಲೀಟರ್ ನೀರಿನ ಡ್ರಮ್‌ಗೆ ಸೇರಿಸಿ ಒಂದು ಟೀ ಲೋಟದಷ್ಟನ್ನು 80 ರಿಂದ 100 ಎಂಎಲ್ ಔಷಧವನ್ನು ಗಿಡದ ಬುಡಕ್ಕೆ ಸ್ಪ್ರೇ ಕ್ಯಾನ್‌ನ ಹೂವು ಬಿಚ್ಚಿ ಬೇರುಗಳು ತೋಯುವಂತೆ ಔಷಧವನ್ನು ನೀಡಬೇಕು. ಇದರಿಂದ ತಂಬಾಕು ಗಿಡಗಳು ರೋಗದಿಂದ ಮುಕ್ತಿ ಕಾಣಲಿವೆ. ಬೆಳೆಗಾರರು ಈ ವಿಧಾನಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು ಎನ್ನುತ್ತಾರೆ ಮಾರುಕಟ್ಟೆ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts