ನವದೆಹಲಿ: ವಾರಾಣಸಿಯ ಮಹಿಳಾ ಕರಕುಶಲಕರ್ಮಿಗಳು ರಕ್ಷಾಬಂಧನ ಹಬ್ಬಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಸ್ತವ ಗಡಿರೇಖೆ ಬಳಿಯ ಗಲ್ವಾನ್ ಕಣಿವೆಯಲ್ಲಿನ ಯೋಧರಿಗಾಗಿ ಮರದ ರಾಖಿಗಳನ್ನು ಸಿದ್ಧಪಡಿಸಿ ರವಾನಿಸಿದ್ದಾರೆ. ವಾರಾಣಸಿಯನ್ನು ಪ್ರತಿನಿಧಿಸುವ ಪ್ರಧಾನಿ ಮೋದಿ ಅವರ ಸಂಸತ್ ಸದಸ್ಯರ ಕಚೇರಿ ಮೂಲಕ ಈ ರಾಖಿಗಳು ರವಾನೆಗೊಂಡಿವೆ.
ಶಾಲಿನಿ, ವಂದನಾ, ರೀಟಾ, ಪುಷ್ಪಾ, ಸೀತಾ ಎಂಬ ಮಹಿಳಾ ಕರಕುಶಲಕರ್ಮಿಗಳಲ್ಲದೆ ವೀರೇಂದ್ರ, ರಾಜ್ಕುಮಾರ್ ಮತ್ತು ರಾಮೇಶ್ವರ್ ಸಿಂಗ್ ಎಂಬ ಕರಕುಲಕರ್ಮಿಗಳ ಗುಂಪು ಈ ರಾಖಿಗಳನ್ನು ತಯಾರಿಸಿದೆ. ವಾರಾಣಸಿಯಲ್ಲಿರುವ ನರೇಂದ್ರ ಮೋದಿ ಅವರ ಸಂಸತ್ ಸದಸ್ಯರ ಕಚೇರಿಗೆ ಈ ಗುಂಪು ತಲುಪಿಸಿದ ಮರದ ರಾಖಿಗಳನ್ನು ಕಚೇರಿಯ ಉಸ್ತುವಾರಿ ಶಿವ್ ಶರಣ್ ಪಾಠಕ್ ಪಡೆದುಕೊಂಡು ಮಂಗಳವಾರವೇ ಅವನ್ನು ಪ್ರಧಾನಿ ಮೋದಿ ಅವರಿಗೆ ರವಾನಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಜಿಯಾಗ್ರಫಿಕಲ್ ಇಂಡಿಕೇಷನ್ (ಜಿಐ) ತಜ್ಞ ಮತ್ತು ಪದ್ಮಶ್ರೀ ರಜನೀಕಾಂತ್ ಅವರು ಮರದ ರಾಖಿಗಳನ್ನು ವಿನ್ಯಾಸಗೊಳಿಸಿ, ಅವುಗಳನ್ನು ತಯಾರಿಸಲು ಕರಕುಶಲಕರ್ಮಿಗಳ ಗುಂಪಿಗೆ ಸಹಕರಿಸಿದ್ದಾರೆ. ರಾಖಿಗಳ ಜತೆಗೆ ಪ್ರಧಾನಿ ಮೋದಿ ಅವರಿಗೆ ಪತ್ರವನ್ನು ರವಾನಿಸಿರುವ ಈ ತಂಡ, ರಕ್ಷಾಬಂಧನದ ಹಬ್ಬದ ದಿನ ಮರದ ಒಂದು ರಾಖಿಯನ್ನು ತಮ್ಮ ಕೈಗೆ ಕಟ್ಟಿಕೊಳ್ಳುವುದಲ್ಲದೆ, ಉಳಿದ ರಾಖಿಗಳನ್ನು ಗಲ್ವಾನ್ ಕಣಿವೆಯಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ರವಾನಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಜತೆ ಸೂರ್ಯವಂಶಿ ಚಿತ್ರದಲ್ಲಿ ನಟಿಸಿದ ಕಲಾವಿದ ಇದೀಗ ತರಕಾರಿ ವ್ಯಾಪಾರಿ!
ನಿಮ್ಮ ಆಶೀರ್ವಾದಗಳೊಂದಿಗೆ ಮತ್ತು ಆತ್ಮನಿರ್ಭರ ಭಾರತದಿಂದ ಸ್ಫೂರ್ತಿಗೊಂಡು ಮೊದಲ ಬಾರಿಗೆ ಕಾಶಿಯ ಜಿಐ ನೋಂದಾಯಿತ ಕರಕುಶಲ ವುಡನ್ ಲ್ಯಾಕೀರ್ವೇರ್ ಆ್ಯಂಟ್ ಟಾಯ್ಸ್ ಮೂಲಕ ರಾಜ್ಯ ಪ್ರಶಸ್ತಿ ವಿಜೇತ ಕರಕುಶಲಕರ್ಮಿ ರಾಮೇಶ್ವರ್ ಸಿಂಗ್ ಸಹಕಾರದಲ್ಲಿ ಮರದ ರಾಖಿಗಳನ್ನು ತಯಾರಿಸಿದ್ದೇವೆ. ರಕ್ಷಾಬಂಧನದ ಹಬ್ಬದ ಸಂದರ್ಭದಲ್ಲಿ ಗಲ್ವಾನ್ ಕಣಿವೆಯಲ್ಲಿ ದೇಶದ ಗಡಿಕಾಯುತ್ತಿರುವ ಧೀರ ಯೋಧರಿಗಾಗಿ ಇವನ್ನು ರವಾನಿಸುತ್ತಿದ್ದೇವೆ ಎಂದು ಕರಕುಶಲಕರ್ಮಿಗಳು ಪತ್ರದಲ್ಲಿ ಬರೆದಿದ್ದಾರೆ.
ವಾರಣಾಸಿಯ ಜಿಐ ಕರಕುಶಲದಡಿ ಕರಕುಶಲಕರ್ಮಿಗಳು 50 ಸಾವಿರ ಮರದ ರಾಖಿಗಳನ್ನು ತಯಾರಿಸಿದ್ದಾರೆ. ಇವುಗಳನ್ನು ವಿತರಿಸುವ ಮೂಲಕ ನೂರಾರು ಕರಕುಶಲಕರ್ಮಿಗಳಿಗೆ ಉದ್ಯೋಗವನ್ನೂ ನೀಡಿದ್ದಾರೆ. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಅವರ ಈ ಕಾರ್ಯ ಶ್ಲಾಘನೀಯವಾಗಿದೆ.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಕರೊನಾ ವರದಿ ನೆಗೆಟಿವ್; ಆಸ್ಪತ್ರೆಯಿಂದ ಡಿಸ್ಚಾರ್ಜ್