ಬೆಂಗಳೂರು: ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡಿನ ಕುರಿತು ಕೇರಳದ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ.
ಇದನ್ನೂ ಓದಿ: ರಿಪಬ್ಲಿಕ್ ಸ್ಟುಡಿಯೋದಲ್ಲಿ ‘ವಿಜಯಾನಂದ’ ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರದಲ್ಲಿರುವ ‘ವರಾಹ ರೂಪಂ’ ಹಾಡನ್ನು ‘ನವರಸಂ’ ಎಂಬ ಮಲಯಾಳಂ ಹಾಡಿನಿಂದ ಯಥಾವತ್ತಾಗಿ ಎರವಲು ಪಡೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಹಾಡನ್ನು ಮಲಯಾಳಂನ ಜನಪ್ರಿಯ ಬ್ರಾಂಡ್ ಥಾಯ್ಕುಡಂ ಬ್ರಿಡ್ಜ್ ರೂಪಿಸಿದ್ದು, ಚಿತ್ರತಂಡದವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿತ್ತು. ಹಾಡನ್ನು ಬಳಿಸಿದ್ದಕ್ಕೆ ಕ್ರೆಡಿಟ್ ಕೊಡಬೇಕು, ಇಲ್ಲ ಹಾಡನ್ನು ಬಳಸವುದಕ್ಕೆ ಅನುಮತಿ ನೀಡಬಾರದು ಎಂದು ಥಾಯ್ಕುಡಂ ಬ್ರಿಡ್ಜ್, ಕೋರ್ಟ್ಗೆ ಮನವಿ ಮಾಡಿತ್ತು.
ಅರ್ಜಿ ವಿಚಾರಣೆ ನಡೆಸಿದ ಕೇರಳದ ಕೋರ್ಟ್ ‘ವರಾಹ ರೂಪಂ …’ ಹಾಡಿನ ಮೇಲೆ ನಿರ್ಬಂಧ ಹೇರಿತ್ತು. ‘ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್ಫಾರ್ಮ್ಗಳಲ್ಲಿ ‘ಕಾಂತಾರ’ ಚಿತ್ರದ ‘ವರಾಹ ರೂಪಂ …’ ಹಾಡನ್ನು ಒಪ್ಪಿಗೆ ಇಲ್ಲದೆ ಬಳಸಬಾರದು’ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ ಚಿತ್ರತಂಡವು, ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್ನ ಹೊಂಬಾಳೆ ಫಿಲಂಸ್ನ ಚಾನಲ್ ಸೇರಿದಂತೆ ಮ್ಯೂಸಿಕ್ ಆ್ಯಪ್ಗಳಾದ ಸಾವನ್ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್ ಮಾಡಿದೆ.
ಆದರೆ, ‘ವರಾಹ ರೂಪಂ’ ಮತ್ತು ‘ನವರಸಂ’ ಒಂದೇ ತರಹ ಇದ್ದರೂ, ಒಂದೇ ರಾಗ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ತಾತ್ಕಾಲಿಕವಾಗಿ ತಡೆಯಾಜ್ಞೆಯನ್ನ ತೆರವು ಮಾಡಲು ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ‘ಕಾಂತಾರ’ ಚಿತ್ರತಂಡಕ್ಕೆ ಗೆಲುವು ಸಿಕ್ಕಂತಾಗಿತ್ತು. ಆ ನಂತರ ತಡೆಯಾಜ್ಞೆ ತೆರವಾಗಿ, ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ತತಕ್ಷಣಕ್ಕೆ ಬರುವಂತೆ ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ ‘ವರಾಹ ರೂಪಂ’ ಹಾಡು ಪುನಃ ಸಿಗಲಿದೆ.
ಇದನ್ನೂ ಓದಿ: ಐದು ವರ್ಷಗಳ ನಂತರ ವಾಪಸ್ಸಾದ ವಡಿವೇಲು; ‘ನಾಯಿ ಶೇಖರ್ ರಿಟರ್ನ್ಸ್’ ಚಿತ್ರದಲ್ಲಿ ನಟನೆ
‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್ ಸಂಸ್ಥೆಯಡಿ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಿಷಭ್ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಅವರ ಛಾಯಾಗ್ರಹಣವಿದೆ. ‘ಕಾಂತಾರಾ’ ಚಿತ್ರವು 50 ದಿನಗಳನ್ನು ಪೂರೈಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ಸುದ್ದಿ ಪಕ್ಕಾ … ಪುಷ್ಠಿ ನೀಡಿದ ಹೊಸ ಪೋಸ್ಟ್!