ಶ್ರೀರಂಗಪಟ್ಟಣ: ಕಾಡುಗಳ ಬೆಳವಣಿಗೆಗೆ ಮಳೆ ಎಷ್ಟು ಮುಖ್ಯವೋ, ಭೂಮಿಯ ಸಮತೋಲನಕ್ಕೆ ವನ್ಯಜೀವಿಗಳ ಉಳಿವು ಅಷ್ಟೇ ಮುಖ್ಯ ಎಂದು ತಹಸೀಲ್ದಾರ್ ಶ್ವೇತಾ ಎನ್.ರವೀಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಕೈಗಾರಿಕಾ ಮತ್ತು ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ 2022ನೇ ಸಾಲಿನ ವನ್ಯಜೀವಿ ಸಪ್ತಾಹ ಆಚರಣೆಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ಇಂದು ಮನುಷ್ಯನ ಆಸೆಗೆ ಕಾಡು ನಾಶವಾಗುತ್ತಿದೆ. ಜೀವ ಸಂಪತ್ತುಗಳು ಕಣ್ಮರೆಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದ ದಿನಗಳು ಮಾರಕವಾಗಿರಲಿವೆ. ಹೀಗಾಗಿ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ವನ್ಯಜೀವಿ ಸಂಪತ್ತು ಉಳಿವಿಗೆ ಕೈಜೋಡಿಸಬೇಕು ಎಂದರು.
ಆರ್ಎಫ್ಒ ಅನಿತಾ ಮಾತನಾಡಿದರು. ಪ್ರಮುಖ ರಸ್ತೆಗಳಲ್ಲಿ ಜಾಥಾ ಸಂಚರಿಸಿತು. ಅರಣ್ಯ ಇಲಾಖೆಯ ಉಪ ವಲಯಾಧಿಕಾರಿ ಶಿವು, ಅರಣ್ಯ ರಕ್ಷಕರಾದ ದರ್ಶನ್, ರವಿ, ಅರಣ್ಯ ವೀಕ್ಷಕರಾದ ರೇವಣ್ಣ , ಬಾಬು, ಕಾಂತ , ಐಟಿಐ ಕಾಲೇಜು ಸಿಬ್ಬಂದಿ ಪಿ.ಶ್ರೀನಿವಾಸ್, ಚಂದ್ರಹಾಸ , ರಾಜೇಶ್ವರಿ ಇತರರಿದ್ದರು.