ಮದ್ದೂರು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾರ್ಥಕ ಜೀವನ ಕಟ್ಟಿಕೊಂಡರೆ ಅದಕ್ಕಿಂತ ತೃಪ್ತಿ ಶಿಕ್ಷಕರಿಗೆ ಮತ್ತೊಂದಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಶಿವಬೋರಯ್ಯ ಹೇಳಿದರು.
ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ ಗ್ರಾಮದ ಬಿ.ಎಚ್.ಮಂಗೇಗೌಡ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಇತ್ತೀಚೆಗೆ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾಭ್ಯಾಸದ ಸಮಯದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಹಿರಿಯ ವಿದ್ಯಾರ್ಥಿಗಳು ನಿರೂಪಿಸಿದ್ದಾರೆ ಎಂದರು.
ಜನ್ಮ ಕೊಟ್ಟವರು, ವಿದ್ಯೆ ಕಲಿಸಿದವರು, ಬದುಕು ರೂಪಿಸಿದವರನ್ನು ಜೀವನದಲ್ಲಿ ಮರೆಯಬಾರದು. ಹತ್ತಿದ ಏಣಿ, ನಡೆದು ಬಂದ ದಾರಿಯನ್ನು ಮರೆಯಬಾರದು. ಆಗ ಮಾತ್ರ ಬದುಕು ಸುಂದರವಾಗಲು ಸಾಧ್ಯ ಎಂದರು.
ಉಪನ್ಯಾಸಕರು ಮತ್ತು ಪ್ರಾಧ್ಯಾಪಕರನ್ನು ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು. ಹಿರಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಬಿ.ಎಚ್.ಮಂಗೇಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪಾಜಪ್ಪ, ನಿವೃತ್ತ ಪ್ರಾಂಶುಪಾಲ ಶಿವಬೋರಯ್ಯ, ಪ್ರಾಧ್ಯಾಪಕರಾದ ಕೃಷ್ಣ, ನಾಗರಾಜು, ಶಿವರಾಜು, ರಮೇಶ್, ನಾಗೇಂದ್ರ, ಹಿರಿಯ ವಿದ್ಯಾರ್ಥಿಗಳಾದ ಇಂದುಶೇಖರ್, ದಿಲೀಪ್, ದೀಪಕ್ ಕುಮಾರ್, ಪೂರ್ಣಿಮಾ, ಜಿ.ಎಚ್. ರಾಜೇಶ್ವರಿ, ನೇತ್ರಾ, ಪದ್ಮಾ, ಭವಿತಾ, ಲೀಲಾವತಿ, ಸುಧಾಕರ, ರಾಧಿಕಾ ಪ್ರಸಾದ್, ಶಶಿಕಲಾ, ಸಿಂಧೂರಿ ಸೇರಿದಂತೆ ಇತರರಿದ್ದರು.