ಲಖನೌ: ಕಳೆದ ವರ್ಷ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯ ವೇಳೆ ಹಿಂಸಾಚಾರ ನಡೆದಿದ್ದು, ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿತ್ತು. ಇದೀಗ ಜಿಲ್ಲಾಡಳಿತ ಆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ಆಸ್ತಿಗಳನ್ನು ಜಪ್ತಿ ಮಾಡಲಾರಂಭಿಸಿದ್ದಾರೆ.
ಆಸ್ತಿ ಜಪ್ತಿ ಮಾಡುವುದರ ಭಾಗವಾಗಿ ಜಿಲ್ಲಾಡಳಿತ ಲಖನೌನ ಹಸನ್ಗಂಜ್ ಪ್ರದೇಶದಲ್ಲಿದ್ದ ಸಿದ್ಧ ಉಡುಪುಗಳ ಮಳಿಗೆ ಮತ್ತು ಸಣ್ಣ ಅಂಗಡಿಯೊಂದನ್ನು ಜಪ್ತಿ ಮಾಡಿದ್ದಾರೆ. ಆಸ್ತಿಪಾಸ್ತಿ ನಷ್ಟವಾದ ಬಗ್ಗೆ ದಾಖಲಾದ ಎಫ್ಐಆರ್ಗಳನ್ನು ಆಧರಿಸಿ, ಪ್ರತಿಭಟನಾಕಾರರ ಆಸ್ತಿಗಳನ್ನು ಜಪ್ತಿ ಮಾಡಲಾಗುತ್ತಿದೆ ಎನ್ನಲಾಗಿದೆ.
4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಫ್ಐಆರ್ ಪ್ರಕಾರ ಹಾನಿಗೊಳಗಾದ ಸಾರ್ವಜನಿಕ ಆಸ್ತಿಗಳ ವಿವರಗಳನ್ನು ಆಧರಿಸಿ ನಷ್ಟವನ್ನು ಭರಿಸಿಕೊಡುವಂತೆ ಸೂಚಿಸಿ 54 ಜನರಿಗೆ ನೋಟಿಸ್ ನೀಡಲಾಗಿತ್ತು. ಇದರ ಭಾಗವಾಗಿ ಎರಡು ಅಂಗಡಿಗಳನ್ನು ಜಪ್ತಿ ಮಾಡಲಾಗಿದೆ. ಸಿದ್ಧ ಉಡುಪುಗಳ ಮಳಿಗೆ ಧರ್ಮವೀರ್ ಸಿಂಗ್ ಎಂಬುವರಿಗೆ ಸೇರಿದ್ದರೆ, ಸಣ್ಣ ಅಂಗಡಿ ಮಹೇನೂರ್ ಚೌಧರಿ ಎಂಬುವರಿಗೆ ಸೇರಿದ್ದಾಗಿದೆ. ಆಸ್ತಿ ಜಪ್ತಿ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಸದಾರ್ ತಹಸೀಲ್ದಾರ್ ಶಂಭು ಶರಣ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಅಂತೂ ಕರೊನಿಲ್ ಕಿಟ್ ಮಾರಾಟಕ್ಕೆ ಅನುಮತಿ ನೀಡಿದ ಆಯುಷ್ ಇಲಾಖೆ…ಆದ್ರೆ ಒಂದು ಷರತ್ತು ಅನ್ವಯ !
ಉತ್ತರ ಪ್ರದೇಶ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ವಸೂಲಿ ಸುಗ್ರೀವಾಜ್ಞೆ 2020ರ ಪ್ರಕಾರ ಪ್ರತಿಭಟನೆ ವೇಳೆ ಆಸ್ತಿಪಾಸ್ತಿಗೆ ಆದ ನಷ್ಟವನ್ನು ಮರುಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶ್ವಭೂಷಣ್ ಮಿಶ್ರಾ ತಿಳಿಸಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ಡಿಸೆಂಬರ್ 19 ಮತ್ತು 20ರಂದು ಲಖನೌನಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದವು. ಈ ಸಂದರ್ಭದಲ್ಲಿ ವಿವಿಧ ಸುದ್ದಿವಾಹಿನಿಗಳ ಒಬಿ ವ್ಯಾನ್ಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದವು. ಬಳಿಕ ಸಮೀಕ್ಷೆ ನಡೆಸಿದ್ದ ಜಿಲ್ಲಾಡಳಿತ 1.55 ಕೋಟಿ ರೂಪಾಯಿ ನಷ್ಟ ಭರಿಸಿಕೊಡುವಂತೆ ಸೂಚಿಸಿ 50 ಜನರಿಗೆ ನೋಟಿಸ್ ರವಾನಿಸಿತ್ತು.
ಖಾದ್ರಾ ಪ್ರದೇಶದಲ್ಲಿ ಒಟ್ಟು 21.76 ಲಕ್ಷ ರೂ. ಆಸ್ತಿಪಾಸ್ತಿ ಹಾನಿಯಾಗಿದ್ದು, 13 ಜನರಿಗೆ ಇದನ್ನು ಭರಿಸಿಕೊಡುವಂತೆ ಸೂಚಿಸಲಾಗಿತ್ತು. ಪರಿವರ್ತನ್ ಚೌಕ್ನಲ್ಲಿ ಆಗಿದ್ದ 69.65 ಲಕ್ಷ ರೂ. ಆಸ್ತಿ ನಷ್ಟವನ್ನು ಭರಿಸಿಕೊಡಲು 24 ಜನರಿಗೆ, ಹಳೇ ನಗರ ವ್ಯಾಪ್ತಿಯಲ್ಲಿ ಆಗಿದ್ದ 47.85 ಲಕ್ಷ ರೂ. ನಷ್ಟವನ್ನು ಭರಿಸಿಕೊಡಲು 10 ಜನರಿಗೆ ಹಾಗೂ ಕೈಸರ್ಬಾಗ್ನಲ್ಲಿನ 1.75 ಲಕ್ಷ ರೂ. ನಷ್ಟ ಭರಿಸಿಕೊಡಲು ಆರು ಜನರಿಗೆ ಸೂಚಿಸಲಾಗಿತ್ತು.
ರೇಪ್ ಮಾಡಿ, ಬಸಿರು ಮಾಡಿದ ಪೊಲೀಸಪ್ಪ, ದಯವಿಟ್ಟು ಕ್ಷಮಿಸಿ ಬಿಡಮ್ಮಾ…!