ಬೆಂಗಳೂರು: ಹಲವು ವರ್ಷಗಳಿಂದ ಚಿತ್ರನಿರ್ದೇಶನದಿಂದ ದೂರವೇ ಇದ್ದ ಜನಪ್ರಿಯ ಸಂಗೀತ ನಿರ್ದೇಶಕ ವಿ. ಮನೋಹರ್, ಬಹಳ ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ್ದಾರೆ. ‘ದರ್ಬಾರ್’ ಎಂಬ ಹೊಸ ಚಿತ್ರಕ್ಕೆ ಅವರು ಆಕ್ಷನ್-ಕಟ್ ಹೇಳಿದ್ದು, ಈ ಚಿತ್ರ ಇದೀಗ ಬಿಡುಗಡೆಗೆ ಸಜ್ಜಾಗಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಮೌಲ್ಯ, ಶಿಸ್ತು ಇಲ್ಲ … ಕಾಜಲ್ ಅಗರ್ವಾಲ್ ಅಭಿಪ್ರಾಯ
‘ದರ್ಬಾರ್’ ಚಿತ್ರವನ್ನು ವಿ. ಮನೋಹರ್ ನಿರ್ದೇಶಿಸಿದ್ದಾರಾದರೂ, ಚಿತ್ರಕ್ಕೆ ಕಥೆ ಬರೆದಿರುವವರು ಸತೀಶ್. ಈ ಚಿತ್ರವನ್ನು ನಿರ್ಮಿಸುವುದರ ಜತೆಗೆ ಅದರಲ್ಲಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದ ಕುರಿತು ಮಾತನಾಡುವ ವಿ. ಮನೋಹರ್, ‘೨೩ ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಕಾರಣ ಸತೀಶ್. ಚಿತ್ರರಂಗಕ್ಕೂ ಬರೋಕೂ ಮುನ್ನ ನಾನು ಕೆಲ ದಿನಪತ್ರಿಕೆಗಳಿಗೆ ಕಾರ್ಟೂನ್ ಬರೆಯುತ್ತಿದ್ದೆ. ಆಗಿಂದಲೇ ನಾನು ರಾಜಕೀಯದ ಬಗ್ಗೆ ತಿಳಿದುಕೊಂಡಿದ್ದೆ. ಇದೇ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಅಂದುಕೊಡಿದ್ದೆ. ಅಷ್ಟರಲ್ಲಿ ಒಮ್ಮೆ ಸತೀಶ್ ಸಿಕ್ಕರು. ಅವರು ಈ ಹಿಂದೆ ‘ದಿಲ್ದಾರ್’ ಎಂಬ ಚಿತ್ರ ಮಾಡಿದ್ದರು. ಅವರೊಂದು ಕಥೆ ಹೇಳಿದರು. ಅದರಲ್ಲೂ ರಾಜಕೀಯ ಇತ್ತು. ತುಂಬಾ ಚೆನ್ನಾಗಿ ಕಥೆ ಮಾಡಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಕಥೆ ಇದು. ಚಿತ್ರವನ್ನು ಶುರು ಮಾಡುವ ವೇಳೆಗೆ ಕೋವಿಡ್ ಬಂತು. ಎರಡನೇ ಅಲೆಯ ನಂತರ ಚಿತ್ರವನ್ನು ಚಿತ್ರ ಮುಗಿಯಿತು’ ಎಂದು ಮಾಹಿತಿ ನೀಡುತ್ತಾರೆ.
ಹಳ್ಳಿಯೊಂದರಲ್ಲಿ ನಡೆಯುವ ರಾಜಕೀಯ, ಅಧಿಕಾರಕ್ಕಾಗಿ ಅಲ್ಲಿನ ಮುಖಂಡರು ನಡೆಸುವ ಲಾಭಿ ಇದನ್ನೆಲ್ಲ ದರ್ಬಾರ್ ಚಿತ್ರದಲ್ಲಿ ಹೇಳಲಾಗಿದೆಯಂತೆ. ಈ ಕುರಿತು ಮಾತನಾಡುವ ಚಿತ್ರಕ್ಕೆ ಕಥೆಯನ್ನೂ ಬರೆದಿರುವ ಸತೀಶ್, ‘ನಾವು ಹಾಕುವ ಮತ ಸರಿಯಾಗಿದೆಯೇ, ಸೂಕ್ತ ವ್ಯಕ್ತಿಗೆ ನಾವು ಹಾಕ್ತಿದ್ದೇವಾ ಎಂಬ ಚಿಂತನೆಗೆ ಹಚ್ಚುವ ಕೆಲಸ ಈ ಚಿತ್ರ ಮಾಡುತ್ತದೆ. ವಿ.ಮನೋಹರ್ ಅಂಥವರೊಂದಿಗೆ ಕೆಲಸ ಮಾಡಿದ್ದು ಅದೃಷ್ಟ. ನಾನು ಹೇಳಿದ್ದನ್ನು ಅವರು ಬರೆಯುತ್ತಿದ್ದುದು ನೋಡಿ ನನಗೆ ಮುಜುಗರವಾಗುತ್ತಿತ್ತು. ಅವರ ಒತ್ತಾಯಕ್ಕೆ ಮಣಿದು ನಾನು ಹೀರೋ ಆಗಿ ನಟಿಸಿದ್ದೇನೆ’ ಎನ್ನುತ್ತಾರೆ.
ಇದನ್ನೂ ಓದಿ: ಮೊಬೈಲ್ನಿಂದಾಗುವ ದುಷ್ಪರಿಣಾಮಗಳ ಕುರಿತು ಹೇಮಂತ್ ಹೆಗ್ಡೆ ಹೊಸ ಸಿನಿಮಾ …
‘ದರ್ಬಾರ್’ನಲ್ಲಿ ಸತೀಶ್ಗೆ ನಾಯಕಿಯಾಗಿ ಜಾಹ್ನವಿ ನಟಿಸಿದ್ದು, ಮಿಕ್ಕಂತೆ ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್, ಸಾಧು ಕೋಕಿಲ, ನವೀನ್ ಡಿ, ಪಡೀಲ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ವಿ. ಮನೋಹರ್ ಅವರ ಸಂಗೀತ ಸಂಯೋಜಿಸಿದ್ದು, ಚಿತ್ರದಲ್ಲಿ ಮೂರು ಹಾಡುಗಳು ಇವೆಯಂತೆ. ಶೀರ್ಷಿಕೆ ಗೀತೆಯನ್ನು ಚಂದನ್ ಶೆಟ್ಟಿ ಹಾಡಿದರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರಂತೆ. ಇನ್ನು, ಡ್ಯುಯೆಟ್ ಹಾಡೊಂದಕ್ಕೆ ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
25ನೇ ಸಿನಿಮಾ ರಿಲೀಸ್ ಶುಭ ಸಂದರ್ಭದಲ್ಲಿ 1 ಕೋಟಿ ರೂ. ಬೆಲೆಬಾಳುವ ಕಾರಿಗೆ ಒಡೆಯನಾದ ಡಾಲಿ!