ನವದೆಹಲಿ: ಮಹಾಮಾರಿ ಕರೊನಾ ವೈರಸ್ ಸರಪಳಿಯನ್ನು ಮುರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್ಡೌನ್ ಅನ್ನು ಗಂಭೀರವಾಗಿ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಭಾನುವಾರ ಸಲಹೆ ನೀಡಿದೆ.
ಕರೊನಾ ಎರಡನೇ ಅಲೆಯನ್ನು ತಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಬಳಿಕ ದೇಶದ ಉನ್ನತ ನ್ಯಾಯಾಲಯ ಈ ಆದೇಶವನ್ನು ಮಾಡಿದೆ.
ದೇಶದಲ್ಲಿ ಕರೊನಾ ಪ್ರಕರಣಗಳ ಏರಿಕೆ ಮುಂದುವರಿದಿದ್ದು, ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳನ್ನು ದಾಖಲೆ ರೂಪದಲ್ಲಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುತ್ತೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅವರು ತೆಗೆದುಕೊಳ್ಳಲು ಯೋಜಿಸುವ ಕ್ರಮಗಳನ್ನು ಸಹ ದಾಖಲಿಸಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಾಮೂಹಿಕ ಸಭೆ ಮತ್ತು ಕರೊನಾ ವೇಗವಾಗಿ ಹರಡಲು ಕಾರಣವಾಗುವ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಸಂಪೂರ್ಣ ಬ್ಯಾನ್ ಮಾಡಿ. ಸಾರ್ವಜನಿಕ ಹಿತಾಸಕ್ತಿಯಿಂದ ಕರೊನಾ ಎರಡನೇ ಅಲೆಗೆ ಕಡಿವಾಣ ಹಾಕಲು ಲಾಕ್ಡೌನ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಲು ಇದೇ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇವೆಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಬಡ ಸಮುದಾಯಗಳ ಮೇಲೆ ಲಾಕ್ಡೌನ್ನ ಸಾಮಾಜಿಕ ಹಾಗೂ ಆರ್ಥಿಕ ಪ್ರಭಾವದ ಬಗ್ಗೆ ನಾವು ನಿರ್ದಿಷ್ಟವಾಗಿ ತಿಳಿದಿದ್ದೇವೆ. ಲಾಕ್ಡೌನ್ ಹೇರುವ ಮುನ್ನ ಈ ಸಮುದಾಯಗಳ ಅಗತ್ಯತೆಗಳನ್ನು ಪೂರೈಸಲು ಮೊದಲೇ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಭಾರತದಲ್ಲಿ ಭಾನುವಾರ 3.92 ಲಕ್ಷ ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅದೇ ಸಮಯದಲ್ಲಿ ವೈರಸ್ ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 3,689 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಪ್ರಕರಣಗಳಲ್ಲಿನ ಈ ತೀಕ್ಷ್ಣವಾದ ಉಲ್ಬಣವು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಒತ್ತಡವನ್ನು ಬೀರುತ್ತಿದೆ. ಇದರ ಪರಿಣಾಮವಾಗಿ ಆಸ್ಪತ್ರೆಯ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕ ಸಂಬಂಧಿತ ಉಪಕರಣಗಳ ಕೊರತೆ ಉಂಟಾಗಿದೆ. (ಏಜೆನ್ಸೀಸ್)
ಲಸಿಕೆಗೆ ಹೆದರಿ ಪೋಡು ಬಿಟ್ಟು ಕಾಡಿಗೆ ಗಿರಿಜನರ ಓಟ!; ತಪ್ಪು ತಿಳಿವಳಿಕೆಯಿಂದ ಇಂಜೆಕ್ಷನ್ ಪಡೆಯಲು ಹಿಂದೇಟು..