ಕಾನ್ಪುರ: 8 ಪೊಲೀಸರ ಹತ್ಯೆಯ ಪ್ರಮುಖ ಆರೋಪಿ ಗ್ಯಾಂಗ್ಸ್ಟರ್ ವಿಕಾಸ್ ದುಬೆ ನಾಪತ್ತೆಯಾಗಿದ್ದು, ಅವನ ಮನೆಯನ್ನು ನಿನ್ನೆಯಷ್ಟೇ ಕಾನ್ಪುರ ಜಿಲ್ಲಾಡಳಿತ ನೆಲಸಮ ಮಾಡಿದೆ.
ಇಂದು ಮುಂಜಾನೆ 4.40ರ ಹೊತ್ತಿಗೆ ಕಲ್ಯಾಣಪುರದಲ್ಲಿ ದುಬೆಯ ಸಹಚರ ದಯಾ ಶಂಕರ್ ಅಗ್ನಿಹೋತ್ರಿ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಈಗಾಗಲೇ ವಿಕಾಸ್ ದುಬೆ ಬಂಧನದ ಮಾಹಿತಿಯನ್ನು ಆತನಿಗೆ ಪೊಲೀಸರೇ ನೀಡಿದ್ದಾರೆ ಎಂಬ ಸುಳಿವು ಸಿಕ್ಕಿತ್ತು. ಅದರ ಅನ್ವಯ ಚೌಬೆಪುರ ಠಾಣಾಧಿಕಾರಿ ವಿನಯ್ ತಿವಾರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಇದೀಗ ಪೊಲೀಸರ ಅನುಮಾನ ನಿಜವಾಗಿದೆ. ಪೊಲೀಸರು ವಿಕಾಸ್ ದುಬೆಯನ್ನು ಬಂಧಿಸಲು ಬರುತ್ತಿರುವ ವಿಷಯವನ್ನು ಪೊಲೀಸರೇ ದೂರವಾಣಿ ಮೂಲಕ ಆತನಿಗೆ ತಿಳಿಸಿದ್ದರು. ಹಾಗಾಗಿ ನಾವೂ ಕೂಡ ಪೊಲೀಸರೊಂದಿಗೆ ಹೋರಾಟ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೆವು ಎಂದು ದಯಾಶಂಕರ್ ಅಗ್ನಿಹೋತ್ರಿ ತಿಳಿಸಿದ್ದಾನೆ. ಇದನ್ನೂ ಓದಿ:ರಕ್ಷಣಾ ಪಡೆಗಳ ದಾಳಿಗೆ ನಾಲ್ವರು ಮಾವೋವಾದಿಗಳು ಉಡೀಸ್…; ಓರ್ವ ಮಹಿಳಾ ನಕ್ಸಲ್ ಕೂಡ ಬಲಿ
ಪೊಲೀಸ್ ಸಿಬ್ಬಂದಿಯಲ್ಲೇ ಕೆಲವರು ವಿಕಾಸ್ ದುಬೆ ಹಿಂಬಾಲಕರು ಇದ್ದಾರೆ. ಅವರೇ ಎಲ್ಲ ರಹಸ್ಯವನ್ನೂ ತಿಳಿಸುತ್ತಿದ್ದರು. ಅಂದು ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಆಗಮಿಸುವ ವಿಚಾರವನ್ನು ಚೌಬೆಪುರ ಪೊಲೀಸ್ ಸ್ಟೇಶನ್ನಿಂದಲೇ ಕರೆ ಮಾಡಿ ತಿಳಿಸಿದ್ದರು ಎಂದಿದ್ದಾನೆ.
ವಿಕಾಸ್ ದುಬೆಗೆ ಮೊದಲೇ ವಿಷಯ ಗೊತ್ತಾಗಿದ್ದರಿಂದ ಕೂಡಲೇ ತನ್ನ ಹಿಂಬಾಲಕರನ್ನು ಒಟ್ಟುಗೂಡಿಸಿ, ಅಗತ್ಯ ಮಾರಕಾಸ್ತ್ರಗಳನ್ನೂ ಸಿದ್ಧಗೊಳಿಸಲು ಸಾಕಷ್ಟು ಸಮಯ ಸಿಕ್ಕಿತು ಎಂದು ಅಗ್ನಿಹೋತ್ರಿ ಹೇಳಿದ್ದಾನೆ.
ಇಂದು ಮುಂಜಾನೆ ಅಗ್ನಿಹೋತ್ರಿಯನ್ನು ಪೊಲೀಸರು ಹಿಡಿಯುವ ಸಂದರ್ಭದಲ್ಲಿ ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದ್ದ. ಆಗ ಪೊಲೀಸರು ಅವನ ಕಾಲಿಗೆ ಗುಂಡು ಹೊಡೆದು, ನಂತರ ಬಂಧಿಸಿದ್ದಾರೆ. ಆತನ ಬಳಿಯಿದ್ದ ಮಾರಕಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಭೀತಿ ಹುಟ್ಟಿಸಿದ ಜಲ್ಲಿ ಕ್ರಷರ್; ಗ್ರಾಮಗಳಲ್ಲಿ ಆವರಿಸಿದ ಧೂಳು; ಬಿರುಕು ಬಿಟ್ಟ ಮನೆಗಳು
ಪೊಲೀಸರ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಇಬ್ಬರನ್ನು ಈಗಾಗಲೇ ಹತ್ಯೆ ಮಾಡಲಾಗಿದೆ. ಪ್ರಮುಖ ಆರೋಪಿ ವಿಕಾಸ್ ದುಬೆ ದೇಶ ಬಿಟ್ಟು ಓಡಿಹೋಗಿದ್ದಾನಾ ಎಂಬ ಅನುಮಾನವೂ ಕಾಡುತ್ತಿದೆ.
ವಿಕಾಸ್ ದುಬೆ ಬಂಧನಕ್ಕೆ ತೆರಳಿದ್ದಾಗ ಪ್ರಾಣ ಕಳೆದುಕೊಂಡ ಪೊಲೀಸರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. (ಏಜೆನ್ಸೀಸ್)
ಕರೊನಾ ವಿರುದ್ಧ ಹೋರಾಡುತ್ತಿರುವ ಪತಿಗಾಗಿ ಮಿಡಿಯಿತು ಪೊಲೀಸ್ ಪತ್ನಿಯ ಮನಸ್ಸು: ನಡದೇ ಸಾಗಿದಳು!