ನವದೆಹಲಿ: ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹನ್ನೊಂದರ ಬಳಗದಲ್ಲಿ ತನಗೆ ಅವಕಾಶ ನೀಡದಿದ್ದಕ್ಕೆ ನಾಯಕ ರೋಹಿತ್ ಶರ್ಮ ಮೇಲೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಎಸ್. ಬದ್ರಿನಾಥ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಅಶ್ವಿನ್, ಆಸ್ಟ್ರೇಲಿಯಾದ ಫೈನಲ್ ಪಂದ್ಯಕ್ಕೆ ರೋಹಿತ್ ಶರ್ಮ ಅವರ ಮನಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಆಟಗಾರರ ಸಂಯೋಜನೆಯ ಬಗ್ಗೆ ರೋಹಿತ್ ನೂರು ಬಾರಿ ಯೋಚಿಸುತ್ತಿದ್ದರು. ಆದರೆ, ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅದೇ ಹನ್ನೊಂದರ ಬಳಗವನ್ನು ರೋಹಿತ್ ಉಳಿಸಿಕೊಂಡರು. ಆ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಇದನ್ನೇ ಮಾಡುತ್ತಿದ್ದರು ಎಂದರು.
ಅಂದಹಾಗೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಭಾರತದ ಮೊದಲ ಲೀಗ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಸೇರಿದ್ದ ಅಶ್ವಿನ್, 34 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಆ ಬಳಿಕ ಅಶ್ವಿನ್ರನ್ನು ಬೆಂಚ್ ಕಾಯಿಸಲಾಯಿತು. ಫೈನಲ್ನಲ್ಲೂ ಅವಕಾಶ ನೀಡಲಿಲ್ಲ. ಏಕೆಂದರೆ, ಭಾರತ ಫೈನಲ್ಗೂ ಮುಂಚೆ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಅದೇ ತಂಡವನ್ನು ಉಳಿಸಿಕೊಳ್ಳಲು ರೋಹಿತ್ ನಿರ್ಧರಿಸಿದರು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ರೋಹಿತ್ ಶರ್ಮ ಅವರ ಚಿಂತನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಫೈನಲ್ನಲ್ಲಿ ಆಡುವುದು ಒಂದು ದೊಡ್ಡ ಅವಕಾಶ. ಅದಕ್ಕಾಗಿ ನಾನು 3 ದಿನಗಳ ಕಾಲ ಭರ್ಜರಿ ತಯಾರಿ ನಡೆಸಿದ್ದೆ. ಆದರೂ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನನ್ನು ಸಾಕಷ್ಟು ಮಂದಿ ಪ್ರಶ್ನೆ ಮಾಡಿದರು. ವಾಟ್ಸ್ಆ್ಯಪ್ನಲ್ಲಿ ಸಾಕಷ್ಟು ಮೆಸೇಜ್ಗಳನ್ನು ನಾನು ಓದಿದ್ದೇನೆ. ಇದರಿಂದ ನಾನು ನನ್ನ ಫೋನ್ ಅನ್ನೇ ಸ್ವಿಚ್ ಆಫ್ ಮಾಡಿದ್ದೆ. ನಿಜ ಹೇಳಬೇಕೆಂದರೆ, ಒಂದು ಅವಕಾಶಕ್ಕಾಗಿ ನಾನು ನನ್ನನ್ನು ಚೆನ್ನಾಗಿ ತಯಾರಿ ನಡೆಸಿದ್ದೆ ಮತ್ತು ಅದೇ ಸಮಯದಲ್ಲಿ, ಅವಕಾಶ ಸಿಗದಿದ್ದರೂ ನಾನು ತಂಡವನ್ನು ಹುರಿದುಂಬಿಸಲು ಸಿದ್ಧನಾಗಿದ್ದೆ ಎಂದು ಅಶ್ವಿನ್ ತಿಳಿಸಿದರು.
ವಿಶ್ವಕಪ್ ಸೋಲು
ನ. 19ರಂದು ಗುಜರಾತಿನ ಅಹಮಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್ 120 ಎಸೆತ 15 ಬೌಂಡರಿ, 4ಸಿಕ್ಸರ್) , ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಆಸೀಸ್ ಪಡೆ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಜಯಿಸಿ ಕ್ರಿಕೆಟ್ ಜಗತ್ತಿನ ಅಧಿಪತಿ ಎನಿಸಿಕೊಂಡಿದೆ. (ಏಜೆನ್ಸೀಸ್)
IPL 2024| ಗುಜರಾತ್ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್! ರೋಹಿತ್-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ
ಇಂಗ್ಲೆಂಡ್ ಎದುರು ಭಾರತ ಎ ಮಹಿಳಾ ತಂಡಕ್ಕೆ ರೋಚಕ ಗೆಲುವು ತಂದ ಆರ್ಸಿಬಿ ಆಲ್ರೌಂಡರ್