ಹಾಸನ: ತಾಲೂಕಿನ ಕಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮನಹಳ್ಳಿಯಲ್ಲಿ ಹಸಿರು ಭೂಮಿ ಪ್ರತಿಷ್ಠಾನ ವತಿಯಿಂದ ಭಾನುವಾರ ಕಲ್ಯಾಣಿ ಪುನಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಲ್ಯಾಣಿಯ ಸುತ್ತಲೂ ಬೆಳೆದಿದ್ದ ಗಿಡಗಂಟಿ ತೆರವುಗೊಳಿಸಿ ಒಳಗೆ ಬಿದ್ದಿದ್ದ ಕಲ್ಲುಗಳನ್ನು ತೆರವುಗೊಳಿಸಲಾಯಿತು.
ಎಚ್ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಮಾತನಾಡಿ, ದಶಕಗಳಿಂದ ಪಾಳು ಬಿದ್ದಿದ್ದ ಕಲ್ಯಾಣಿಯನ್ನು ಹಸಿರುಭೂಮಿ ಪ್ರತಿಷ್ಠಾನದವರ ಪ್ರೇರಣೆಯಿಂದ ಪುನಶ್ಚೇತನಗೊಳಿಸಲಾಗಿದೆ. ನಮ್ಮ ಶ್ರಮಕ್ಕೆ ನೀರು ಉಕ್ಕಿದ್ದು ಸಂತಸ ತಂದಿದೆ ಎಂದರು.
ಹಣ ಗಳಿಸುವುದು ದೊಡ್ಡ ವಿಷಯವಲ್ಲ, ಜನರಿಗೆ ಒಳಿತು ಮಾಡುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಅಂತಹ ಕೆಲಸವನ್ನು ಹಸಿರು ಭೂಮಿ ಪ್ರತಿಷ್ಠಾನ ಮಾಡುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು.
ಲೇಖಕಿ ರೂಪಾ ಹಾಸನ ಮಾತನಾಡಿ, ಪ್ರತಿ ಗ್ರಾಮವೂ ಕನಿಷ್ಠ ನೀರು ಹಾಗೂ ಜಾನುವಾರುಗಳ ಮೇವಿನ ಸ್ವಾವಲಂಬಿಯಾಗಬೇಕು. ಅದನ್ನು ಹಣ ನೀಡಿ ಗ್ರಾಮಸ್ಥರು ಕೊಂಡುಕೊಳ್ಳುವ ಪರಿಸ್ಥಿತಿಯಿಂದ ಮುಕ್ತಗೊಳಿಸುವ ಸಲುವಾಗಿ ಜಿಲ್ಲೆಯ ಪ್ರತಿ ಹಳ್ಳಿಯ ಒಂದಾದರೂ ಜಲಮೂಲವನ್ನು ಹೂಳೆತ್ತಿ ಪುನಶ್ಚೇಚೇತನಗೊಳಿಸಲು ಜನಶಕ್ತಿ ಹಾಗೂ ಸರ್ಕಾರಿ ಶಕ್ತಿಯನ್ನು ಒಗ್ಗೂಡಿಸಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಪ್ರಗತಿಪರ ಚಿಂತಕ ಆರ್.ಪಿ.ವೆಂಕಟೇಶಮೂರ್ತಿ, ವೆಂಕಟೇಗೌಡ, ಚಿನ್ನೇನಹಳ್ಳಿ ಸ್ವಾಮಿ, ಡಾ.ಮಂಜುನಾಥ್, ಗಿರಿಜಾ, ಗ್ರಾಪಂ ಸದಸ್ಯರಾದ ನಾಗೇಂದ್ರ, ಲಲಿತ್ ಕುಮಾರ್, ಗೌರಮ್ಮ ಅರಸಯ್ಯ, ಗೋವಿಂದ ಸ್ವಾಮಿ ಇತರರಿದ್ದರು.