ಉಳ್ಳಾಲ: ಮಂಗಳವಾರದ ರ್ಯಾಂಡಮ್ ಪರೀಕ್ಷೆ ವರದಿ ಗುರುವಾರ ಬಂದಿದ್ದು, 27 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಬುಧವಾರ ನಡೆಸಲಾದ ಪರೀಕ್ಷೆಯ ವರದಿ ಶುಕ್ರವಾರ ಬಂದಿದ್ದು ಮತ್ತೆ 28 ಮಂದಿಯಲ್ಲಿ ಸೋಂಕು ಕಂಡು ಬಂದಿದೆ.
ಇದೇ ವೇಳೆ ಉಳ್ಳಾಲ ನಗರಸಭೆಗೂ ವೈರಸ್ ವಕ್ಕರಿಸಿದ್ದು, ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಪಹರೇದಾರ ಹಾಗೂ ಮೂವರು ಚಾಲಕರಲ್ಲಿ ಸೋಂಕು ಪತ್ತೆಯಾಗಿದೆ ಎಂಬ ಮಾಹಿತಿ ಇದೆ. ನಗರಸಭೆ ಕಚೇರಿ ಸೀಲ್ಡೌನ್ಗೆ ಸಿದ್ಧತೆ ನಡೆಸಲಾಗಿದೆ. ಉಳ್ಳಾಲ ನಿವಾಸಿ ಸಿಸಿಬಿ ಸಿಬ್ಬಂದಿಯಲ್ಲೂ ಸೋಂಕು ದೃಢಪಟ್ಟಿದೆ.
ಹರೇಕಳ 10 ದಿನ ಲಾಕ್ಡೌನ್: ಹರೇಕಳ ಗ್ರಾಮದ ಐವರಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜುಲೈ 15ರವರೆಗೆ ಗ್ರಾಮವನ್ನು ಸಂಪೂರ್ಣ ಲಾಕ್ಡೌನ್ ಮಾಡಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ. ಬಸ್ ಸಹಿತ ಎಲ್ಲ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಗ್ರಾಮದಿಂದ ಹೊರಗೆ ಹೋಗಬೇಕಿದ್ದವರು ತಪಾಸಣೆ ನಡೆಸಿ, ಸೂಕ್ತ ಕಾರಣ ನೀಡಬೇಕು ಎಂದು ಸೂಚಿಸಲಾಗಿದೆ.
ಆಂಬುಲೆನ್ಸ್ಗೆ 12 ಗಂಟೆ ಕಾದ ಸೋಂಕಿತ
ಹರೇಕಳ ಗ್ರಾಮದಲ್ಲಿ ಕರೊನಾ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ರಾತ್ರಿಯಿಡೀ ಆಂಬುಲೆನ್ಸ್ಗೆ ಕಾಯಬೇಕಾಯಿತು. ಗುರುವಾರ ಸಾಯಂಕಾಲ ಪಂಚಾಯಿತಿ ಸಮೀಪದ ಮನೆಯ 28 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿತ್ತು. ಆತನನ್ನು ಆಸ್ಪತ್ರೆಗೆ ಸೇರಿಸಲು ಗ್ರಾಮಸ್ಥರು ಸಾಯಂಕಾಲ 108 ಆಂಬುಲೆನ್ಸ್ಗೆ ಕರೆ ಮಾಡಿದ್ದರು. ರಾತ್ರಿಯಿಡೀ ಕಾದರೂ ಆಂಬುಲೆನ್ಸ್ ಬಂದಿಲ್ಲ. ಶುಕ್ರವಾರ ಬೆಳಗ್ಗೆ ಆಂಬುಲೆನ್ಸ್ ಬಂದಿದ್ದು, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಎರಡೇ ಆಂಬುಲೆನ್ಸ್ಗಳು ಇದ್ದು ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ.