ಪಡುಬಿದ್ರಿ: ಹಸಿರು ವಲಯವಾಗಿ ಉಡುಪಿ ಜಿಲ್ಲೆ ಘೋಷಣೆಯಾಗಿರುವ ಪರಿಣಾಮ ಅನ್ಯ ಜಿಲ್ಲೆಯಿಂದ ಪ್ರವೇಶಿಸುವ ಜನರನ್ನು ತಪಾಸಣೆಗೊಳಪಡಿಸಿ ಕೈಗಳಿಗೆ ಸೀಲ್ ಹಾಕಿ ಕ್ವಾರೆಂಟೈನ್ಗೆ ಒಳಪಡಿಸುವ ಪ್ರಕ್ರಿಯೆ ಹೆಜಮಾಡಿ ಗಡಿಯಲ್ಲಿ ಭಾನುವಾರದಿಂದ ಆರಂಭಿಸಲಾಗಿದೆ.
ಕರೊನಾ ಹರಡದಂತೆ ಉಡುಪಿ ಜಿಲ್ಲೆಯ ಗಡಿಗಳಲ್ಲಿ ಸೀಲ್ಡೌನ್ ಮಾಡಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, ಅನ್ಯ ಜಿಲ್ಲೆಯ ಜನ ಒಳ ಪ್ರವೇಶಿಸುವುದಾದರೆ ತಮ್ಮ ಸಂಪೂರ್ಣ ಮಾಹಿತಿ ನೀಡಿದ ನಂತರ ಗಡಿ ಸಿಬ್ಬಂದಿ ಮೊಹರು ಹಾಕಿ ಹೋಂ ಕ್ವಾರಂಟೈನ್ಗೊಳಪಡಿಸುತ್ತಾರೆ.
ಅಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿ ಜಿಲ್ಲೆಗೆ ಆಗಮಿಸಿದವರ ಪ್ರದೇಶದ ಆರೋಗ್ಯ ಕೇಂದ್ರಗಳಿಗೆ ನೀಡಲಾಗುತ್ತದೆ. ಆರೋಗ್ಯ ಇಲಾಖೆ ಮೂಲಕ ಅವರ ಮೇಲೆ ನಿಗಾವಿರಿಸಲಾಗುತ್ತಿದೆ.
ಹೆಜಮಾಡಿ ತಪಾಸಣಾ ಕೇಂದ್ರದಲ್ಲಿ ಭಾನುವಾರ 90 ಜನರ ಕೈಗಳಿಗೆ ಮೊಹರು ಹಾಕಿ ಕ್ವಾರಂಟೈನ್ಗೊಳಪಡಿಸಲಾಗಿದೆ. ಗಡಿ ತಪಾಸಣಾ ವೇಳೆ ಪಾಸ್ ರಹಿತವಾಗಿ ವಾಹನಗಳಲ್ಲಿ ಜಿಲ್ಲೆ ಪ್ರವೇಶಿಸಲು ಮುಂದಾದ ಜನರಿಗೆ ಸೀಲ್ ಹಾಕುವ ಬಗ್ಗೆ ಪೊಲೀಸರು ವಿವರಿಸಿದಾಗ ಭಯದಿಂದ ವಾಹನ ಸಹಿತವಾಗಿ ವಾಪಸಾದ ಘಟನೆಯೂ ನಡೆಯಿತು.