ನಿಪ್ಪಾಣಿ: ತಾಲೂಕಿನಲ್ಲಿ ಬುಧವಾರ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಸಮೀಪದ ಅಂಬಲಜರಿ- ಪಟ್ಟಣಕುಡಿ ಮಾರ್ಗ ಮಧ್ಯೆ ಅರ್ಧ ಎಕರೆ ಪ್ರದೇಶದಲ್ಲಿದ್ದ ಕೋಳಿ ಾರ್ಮ್ ನೆಲಸಮವಾಗಿದ್ದು, ಸುಮಾರು 3 ಸಾವಿರ ಕೋಳಿ ಮೃತಪಟ್ಟಿವೆ.
ನಿಪ್ಪಾಣಿ ನಗರದ ಮಹಾದೇವ ಗಲ್ಲಿಯ ನಿವಾಸಿ ರಮೇಶ ಚಿದಾನಂದ ರಾಮಲಿಂಗೆ ಎಂಬುವರಿಗೆ ಕೋಳಿ ಫಾರ್ಮ್ ಸೇರಿದ್ದು, 12 ಸಾವಿರ ಕೋಳಿಗಳಿದ್ದವು. ಶೆಡ್, ಔಷಧ ಮತ್ತು ಆಹಾರ ಪದಾರ್ಥಗಳು ಸಂಪೂರ್ಣ ನಾಶವಾಗಿದೆ.
ನಿಪ್ಪಾಣಿ ತಾಲೂಕಿನಾದ್ಯಂತ ಬುಧವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಗುಡುಗು ಸಹಿತ ಸುರಿದ ಭಾರಿ ಮಳೆ, ಗಾಳಿಯಿಂದಾಗಿ ಹಲವು ಮನೆ, ಗುಡಿಸಲು ಮತ್ತು ಶಾಲೆಗಳ ಛಾವಣಿ ಹಾರಿ ಹೋಗಿವೆ. ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಪಟ್ಟಣಕುಡಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿ ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿಪ್ಪಾಣಿ ನಗರಸಭೆ ಎದುರಿಗೆ ಈಚೆಗೆ ಕರೊನಾ ವೈರಸ್ ತಡೆಗಟ್ಟಲು ಸ್ಥಾಪಿಸಿದ್ದ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗ ಘಟಕವೂ ನೆಲಕ್ಕುರುಳಿದೆ. ಸ್ಥಳಕ್ಕೆ ಖಡಕಲಾಟ ಪೊಲೀಸ್ ಠಾಣೆಯ ಎಎಸ್ಐ ಎನ್.ಎಚ್. ಪೂಜಾರಿ, ಹವಾಲ್ದಾರ್ ಎಚ್.ಸಿ. ವಾಳ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.