More

    ಬೆಂಗಳೂರು ನಗರದಲ್ಲಿ ಎರಡು ಕಡೆ ಪ್ರತ್ಯೇಕ ಅಪಘಾತ


    ಬೆಂಗಳೂರು: ಭಾನುವಾರ ನಗರದಲ್ಲಿ ಎರಡು ಕಡೆ ಪ್ರತ್ಯೇಕ ಅಪಘಾತ ಸಂಭವಿಸಿ ಓರ್ವ ಗಾಯಗೊಂಡಿದ್ದಾನೆ. ವಾರಾಂತ್ಯದ ಪಾರ್ಟಿಯಲ್ಲಿ ಮದ್ಯ ಸೇವಿಸಿ, ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಆಡುಗೋಡಿಯ ಎನ್‌ಜಿವಿ ಒಳಾಂಗಣ ಕ್ರೀಡಾಂಗಣ ಜಂಕ್ಷನ್ ಸಮೀಪದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಟೆಕ್ಕಿಯೊಬ್ಬ ಗಾಯಗೊಂಡಿದ್ದಾನೆ.


    ಕಾರು ಚಾಲಕ ಪಶ್ಚಿಮ ಬಂಗಾಳ ಮೂಲದ ಬಿಟಿಎಂ ಲೇಔಟ್‌ನ ನಿವಾಸಿ ಸಮೀರ್ (೩೩) ವಿರುದ್ಧ ಆಡುಗೊಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


    ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಮೀರ್ ವಾರಾಂತ್ಯದ ಹಿನ್ನೆಲೆಯಲ್ಲಿ ತನ್ನ ಪತ್ನಿ ಮರ್ಲಿನ್ ಹಾಗೂ ಸ್ನೇಹಿತೆಯೊಬ್ಬರ ಜತೆಗೆ ಭಾನುವಾರ ರಾತ್ರಿ ಕೋರಮಂಗಲದ ಪಬ್‌ವೊಂದಕ್ಕೆ ಕಾರಿನಲ್ಲಿ ಹೋಗಿದ್ದ. ಪಬ್‌ನಲ್ಲಿ ಮೂವರೂ ಕಂಠಪೂರ್ತಿ ಮದ್ಯಪಾನ ಮಾಡಿ ತಡರಾತ್ರಿ ೧.೩೦ಕ್ಕೆ ಕೋರಮಂಗಲ ಫೋರಂ ಮಾಲ್ ಕಡೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಿಟಿಎಂ ಲೇಔಟ್ ಕಡೆಗೆ ಬರುತ್ತಿದ್ದರು. ಮಾರ್ಗಮಧ್ಯೆ ಎನ್‌ಜಿವಿ ಒಳಾಂಗಣ ಕ್ರೀಡಾಂಗಣ ಜಂಕ್ಷನ್‌ನಲ್ಲಿ ಎಡತಿರುವು ಪಡೆಯುವಾಗ ಮದ್ಯದ ಅಮಲಿನಲ್ಲಿ ಸಮೀರ್ ನಿಯಂತ್ರಣ ತಪ್ಪಿ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡು ಸಮೀರ್ ತಲೆಗೆ ಗಾಯವಾಗಿ ರಕ್ತಸ್ರಾವ ಉಂಟಾಗಿತ್ತು. ಸ್ಥಳೀಯರು ಈ ಬಗ್ಗೆ ಆಡೋಗೋಡಿ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡ ಸಮೀರ್‌ನನ್ನು ಆಟೋದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ಆತನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕಾರು ಜಪ್ತಿ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.


    ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಕ್ಕೆ ಆಕ್ಷೇಪ:
    ರಸ್ತೆ ಅಪಘಾತ ಸಂಭವಿಸಿದಾದ ನೆರೆದಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲು ಮುಂದಾದ ವೇಳೆ ಸಮೀರ್ ಪತ್ನಿ ಮರ್ಲಿನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕಿದ್ದರು. ಪೊಲೀಸರು ಬಂದ ಬಳಿಕ ನೆರೆದಿದ್ದ ಸಾರ್ವಜನಿಕರನ್ನು ಕಳುಹಿಸಿ, ಮರ್ಲಿನ್‌ಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಡಿಕ್ಕಿ ವೇಳೆ ಏರ್ ಬ್ಯಾಗ್ ಓಪನ್ ಆಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತವಾಗಿಲ್ಲ.

    ನೆಲಕ್ಕೆ ಉರುಳಿದ ಮರ:
    ಮತ್ತೊಂದೆಡೆ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಮರವೊಂದು ನೆಲಕ್ಕರುಳಿದ ಪ್ರಕರಣ ಆರ್.ಆರ್ ನಗರದಲ್ಲಿ ನಡೆದಿದೆ.
    ಆರ್.ಆರ್.ನಗರ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ೧೧.೩೦ ಸುಮಾರಿಗೆ ಈ ಘಟನೆ ನಡೆದಿದ್ದು, ಕ್ರೆಟಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅತೀ ವೇಗದಿಂದ ಬಂದ ಕ್ರೆಟಾ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ. ಮರ ಇಲ್ಲದೆ ಹೋಗಿದ್ದರೆ ಕಾರು ಎರಡು ಅಂಗಡಿಗೆ ನುಗ್ಗುತ್ತಿತ್ತು ಎಂದು ತಿಳಿದು ಬಂದಿದೆ. ಚಾಲಕ ಮದ್ಯ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದ ನಂತರ ಚಾಲಕ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಕಾರು ತೆಗೆದುಕೊಂಡು ವಿಚಾರಣೆಗೆ ಹಾಜರಾಗುವಂತೆ ಚಾಲಕನಿಗೆ ಸೂಚಿಸಲಾಗಿದೆ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts