ಕೆಜಿಎಫ್ ಬೆಮೆಲ್ ಕಾರ್ಖಾನೆಯಿಂದ ಅಂಬೇಡ್ಕರ್ ಶಾಲೆವರೆಗಿನ ರಸ್ತೆ ದುರಸ್ತಿ ಕಾರ್ಯ ಸ್ಥಗಿತ
ಕೆಜಿಎಫ್: ಸರ್ಕಾರ ಸಾರ್ವಜನಿಕರ ಹಿತರಕ್ಷಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರೆ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಇದರಿಂದ ವಾಹನ ಸವಾರರು ಪ್ರತಿನಿತ್ಯ ಪರದಾಡುವಂತಾಗಿದೆ.
ಕಳೆದ ಆರು ತಿಂಗಳ ಹಿಂದೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಆರಂಭವಾದ ನಗರದ ಹೊರವಲಯದ ಬೆಮಲ್ ಕಾರ್ಖಾನೆಯ ಆಲದಮರದಿಂದ ಅಂಬೇಡ್ಕರ್ ಶಾಲೆಯವರೆಗಿನ ಸುಮಾರು 3 ಕಿ.ಮೀ. ಉದ್ದದ ದ್ವಿಪಥ ರಸ್ತೆ ಕಾಮಗಾರಿಯು ಅರ್ಧಕ್ಕೆ ನಿಂತಿದೆ. ಇದು ದ್ವಿಪಥ ರಸ್ತೆಯಾಗಿರುವ ಕಾರಣ ಎರಡೂ ಕಡೆಗಳಲ್ಲಿ ಡಾಂಬರು ಅಳವಡಿಸಬೇಕಾಗಿರುವುದರಿಂದ ಒಟ್ಟು 6 ಕಿಮೀ ಉದ್ದವಾಗುತ್ತದೆ.
ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮೂರು ತಿಂಗಳ ಮುನ್ನವೇ ರಸ್ತೆಗೆ ಡಾಂಬರು ಹಾಕಲು ಲೋಕೋಪಯೋಗಿ ಇಲಾಖೆ ವತಿಯಿಂದ ಅಧಿಕೃತವಾಗಿ ಕಾರ್ಯಾದೇಶ ನೀಡಿ ಕಾಮಗಾರಿ ಪ್ರಾರಂಭಿಸಲಾಗಿದ್ದರೂ, ಕೇವಲ ಒಂದು ಬದಿಯಲ್ಲಿ ಮಾತ್ರ ಡಾಂಬರು ಹಾಕಲಾಗಿದ್ದು, ಮತ್ತೊಂದು ಬದಿಯಲ್ಲಿ ಡಾಂಬರು ಅಳವಡಿಸದಿರುವುದರಿಂದ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಬೈಕ್ ಮತ್ತು ನ ವಾಹನಗಳ ಸವಾರರು ಗುಂಡಿಗಳು ಬಿದ್ದು ಹಾಳಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ.
ಬೆಮೆಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬೆಮೆಲ್ ಪೊಲೀಸ್ ಠಾಣೆ ಮುಂಭಾಗ, ರೈಲ್ವೇ ಮೇಲ್ಸೇತುವೆ, ಬೆಮೆಲ್ ಮೈನ್ ಗೇಟ್ ಮುಂಭಾಗ ಸೇರಿ ಅಂಬೇಡ್ಕರ್ ಶಾಲೆಯವರೆಗೆ ಬಹುತೇಕ ರಸ್ತೆಯು ಕಿತ್ತುಬಂದಿರುವುದರಿಂದ ಬೃಹತ್ ಗಾತ್ರದ ವಾಹನಗಳು ಮುಂದೆ ಹೋದರೆ ಅದರ ಹಿಂದೆ ಬರುವ ಸವಾರರು ಸಂಪೂರ್ಣವಾಗಿ ಧೂಳಿನಲ್ಲಿ ಮಿಂದೆದ್ದಂತಾಗುತ್ತದೆ.
ಬೃಹತ್ ಗಾತ್ರದ ವಾಹನಗಳು ಸಂಚರಿಸಿದರೆ ರಸ್ತೆ ಸಂಪೂರ್ಣವಾಗಿ ಧೂಳುಮಯವಾಗುವುದರಿಂದ ಹಿಂದೆ ಬರುವ ವಾಹನ ಸವಾರರಿಗೆ ರಸ್ತೆಯು ಕಾಣದಂತಾಗುವುದರಿಂದ ಗುಂಡಿಗಳ ಆಳ ತಿಳಿಯದೇ ದ್ವಿಚಕ್ರ ವಾಹನ ಸವಾರರು ಹಲವು ಬಾರಿ ಕೆಳಗೆ ಬಿದ್ದು ಕೈ, ಕಾಲುಗಳನ್ನು ಮುರಿದುಕೊಂಡಿರುವ ಟನೆಗಳು ಸಾಕಷ್ಟಿವೆ ಎಂದು ಸಾರ್ವಜನಿಕರು ಮತ್ತು ಸವಾರರ ದೂರು.
ಜನಪ್ರತಿನಿಧಿಗಳು ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರಿಗೆ ನಿರ್ದೇಶನ ನೀಡಿ ಆದಷ್ಟು ಬೇಗನೇ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸಲು ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. | ಸತ್ಯಪ್ರಕಾಶ್, ದ್ವಿಚಕ್ರ ವಾಹನ ಸವಾರ