ಕೋಲಾರ: ಬೆಮೆಲ್ನಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಕನ್ನಡ ಪರ ಸಂಟನೆಗಳು ಮತ್ತು ಬೆಮೆಲ್ ಆಪರೇರ್ಟಸ್ ಸಂದ ಸದಸ್ಯರು ಶಾಸಕ ರೂಪಕಲಾ ಅವರಿಗೆ ಇತ್ತೀಚಿಗೆ ಮನವಿ ಸಲ್ಲಿಸಿದರು.
ಕನ್ನಡ ಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷ ಬಾ.ಹಾ. ಶೇಖರಪ್ಪ ಮಾತನಾಡಿ, ಬೆಮಲ್ನಲ್ಲಿ ಸ್ಥಳಿಯರ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ. ಸ್ಥಳಿಯರಿಗೆ ಕಾಯಂ ಉದ್ಯೋಗ ನೀಡದೆ ಅದೇ ಉತ್ತರ ಭಾರತದವರನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದು ಸರ್ಕಾರದ ಕನ್ನಡ ನೀತಿಗೆ ವಿರುದ್ಧವಾಗಿದೆ ಎಂದು ದೂರಿದರು.
ಬಿಜಿಎಂಎಲ್ ಕಾರ್ಮಿಕರಿಗೆ ಪರ್ಯಾಯವಾಗಿ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ಬೆಮಲ್ಗೆ 1870 ಎಕರೆ ಜಾಗ ನೀಡಲಾಗಿತ್ತು. ಬೆಮಲ್ ಸ್ಥಾಪನೆಯಾದಾಗ ಎಲ್ಲ ಜಿಲ್ಲೆಗಳಿಗೂ ಹೋಗಿ ನೇಮಕಾತಿ ಮಾಡಿಕೊಳ್ಳಲಾಯಿತು. ಸ್ಥಳಿಯರಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಯಿತು ಎಂದರು.
ಈಗ ಬೆಮಲ್ 5000 ಕೋಟಿ ಉತ್ಪಾದನಾ ಗುರಿ ಹೊಂದುವಷ್ಟು ಬೆಳವಣಿಗೆಯಾಗಿದೆ. ರೈಲ್ವೆ, ಡೋಜರ್ ಮತ್ತು ರಕ್ಷಣಾ ವಲಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ತಯಾರು ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡಿದೆ ಎಂದರು.
ಅಪರೇಟರ್ಗಳಾಗಿ ಸೇವೆ ಕೆಲಸ ಹೊರ ರಾಜ್ಯದವರಿಗೆ ಅವಕಾಶ ಮಾಡುತ್ತಿದ್ದಾರೆ. ಅವರ ಸೇವೆಗೆ ತಕ್ಕಂತೆ ಸ್ಥಳಿಯರಿಗೆ ಅವಕಾಶ ಸಂಬಳ ಹಾಗೂ ಸೌಲಭ್ಯಗಳನ್ನು ದೊರೆಯದೆ ಇರುವುದು ಡಾ.ಸರೋಜಿನಿ ಮಹಿಷಿ ವರದಿಗೆ ವ್ಯತಿರಿಕ್ತವಾಗಿದೆ ಎಂದು ಆರೋಪಿಸಿದರು.
ಬೆಮಲ್ ನೀಡುತ್ತಿರುವ 17,000 ಸಂಬಳದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ನಿವೃತ್ತಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಆ ಸ್ಥಾನ ತುಂಬಲು ಕಾಂಟ್ರಾಕ್ಟ್ ಅಪರೇಟರ್ ಮೂಲಕ ಕಡಿಮೆ ಸಂಬಳದಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಬೆಮಲ್ನಲ್ಲಿ ಇಷ್ಟು ದಿನ ಇದ್ದ ದಕ್ಷಿಣ ಭಾರತೀಯ ತಿನಿಸು ಜತೆಗೆ ಉತ್ತರ ಭಾರತೀಯ ಊಟ ಈಗ ಸರಬರಾಜು ಮಾಡಲು ಆಡಳಿತ ವರ್ಗ ಸೂಚಿಸಿದೆ. ಉನ್ನತ ಸ್ಥಾನದಲ್ಲಿರುವ ಇಬ್ಬರು ಉತ್ತರ ಭಾರತ ಮೂಲದ ಅಧಿಕಾರಿಗಳು ನೇಮಕಾತಿಯಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲಿ ತಾವು ಧ್ವನಿ ಎತ್ತುವ ಮೂಲಕ ಸ್ಥಳಿಯರಿಗೆ ಅವಕಾಶ ಕಲ್ಪಿಸಲು ಕ್ರಮವಹಿಸಬೇಕು ಎಂದು ಕೋರಿದರು.
ಕನ್ನಡ ಶಕ್ತಿ ಕೇಂದ್ರದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿ.ಜೆ.ಗೋಣಿ, ನಗರಸಭೆ ಸದಸ್ಯ ಮಾಣಿಕ್ಕಂ, ಕಾಂಟ್ರಾಕ್ಟ್ ಅಪರೇಟರ್ ಸಂಘಟನೆ ಅಧ್ಯಕ್ಷ ರಾಜಶೇಖರ್, ಪದಾಧಿಕಾರಿಗಳಾದ ಗಣೇಶ್, ಕಣ್ಣನ್, ಸೋಮು, ಅಗಸ್ಟಿಯನ್, ಕಾಂತರೂಬನ್ ಹಾಜರಿದ್ದರು.