ಕೋಲಾರ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲೂ ವಿಶ್ವಕ್ಕೆ ಚಿನ್ನ ಕೊಟ್ಟ ಕೋಲಾರ ಜಿಲ್ಲೆಯ ಸಂಸ್ಥೆ ಮುಖ್ಯ ಪಾತ್ರವಹಿಸಿದೆ.
ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ್ದು ಮೈಸೂರಿನ ಶಿಲ್ಪಿ. ಆದರೆ ಆ ಕಲ್ಲಿನ ಗುಣಮಟ್ಟ ಅಂತಿಮಗೊಳಿಸಿ ನಿರ್ಮಾಣದ ಉಸ್ತುವಾರಿ ವಹಿಸಿದ್ದು ಜಿಲ್ಲೆಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು. ಹೌದು, ಕೆಜಿಎಫ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕಲ್ ಸಂಸ್ಥೆಯ ವಿಭಾಗೀಯ ಕಚೇರಿಯ ಪ್ರಧಾನ ವಿಜ್ಞಾನಿ ರಾಜನ್ ಬಾಬು ನೇತೃತ್ವದ ತಂಡ ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸುವ ಮೂಲಕ ಮುಖ್ಯ ಪಾತ್ರವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲ, ವಿಜ್ಞಾನಿ ಡಾ.ರಾಜನ್ ಬಾಬು ರಾಮಮಂದಿರ ನಿರ್ಮಾಣದ ಆರಂಭದಿಂದಲೂ ಪ್ರತಿ ಹಂತದಲ್ಲೂ ಭಾಗಿಯಾಗಿದ್ದಾರೆ. ನಗರದಲ್ಲಿರುವ ಕೆಜಿಎಫ್ ఎంఐఆరోఎం ಪ್ರಯೋಗಾಲಯದಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಬಳಸುವ ಕಲ್ಲಿನ ಗುಣಮಟ್ಟ ಪರೀಕ್ಷೆ ಮಾತ್ರವಲ್ಲದೆ ಮಂದಿರಕ್ಕೆ ಬಳಸಿದ ಸಂಪೂರ್ಣ ವಸ್ತುಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ.
ಮಂದಿರ ನಿರ್ಮಾಣದ ಮೂರು ಹಂತಗಳಿಗೆ ಬೇಕಾದ ವಿವಿಧ ರಾಜ್ಯಗಳ ಸಾದರಳ್ಳಿ, ಮಾರ್ಬಲ್, ಗ್ರಾನೈಟ್ ಸೇರಿದಂತೆ 26 ವಿವಿಧ ಬಗೆಯ ಕಲ್ಲುಗಳಲ್ಲಿ 16 ಕಲ್ಲುಗಳನ್ನು ಹಾಗೂ ಕರ್ನಾಟಕ, ತೆಲಂಗಾಣ, ಆಂಧ್ರ, ರಾಜಸ್ಥಾನ ರಾಜ್ಯಗಳಿಂದ ತರಿಸಲಾದ ಕಲ್ಲುಗಳನ್ನು ಪರೀಕ್ಷಿಸಿ ಮಂದಿರ ನಿರ್ಮಾಣಕ್ಕೆ ಬಳಸಲಾಗಿದೆ.
ಬಸವಣ್ಣನವರ ಅನುಭವ ಮಂಟಪದ ನಿರ್ಮಾಣ ಕಾರ್ಯಕ್ಕೂ ಇದೇ ಸಂಸ್ಥೆಯ ವಿಜ್ಞಾನಿಗಳು ಕೊಡುಗೆ ನೀಡಿದ್ದಾರೆ.
ರಾಮಜನ್ಮ ಸ್ಥಳ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿರುವುದು ಹೊಸ ಅನುಭವ ತಂದಿದೆ. ಉಸ್ತುವಾರಿಗೆ ರಾಮ ಜನ್ಮ ಭೂಮಿ ಟ್ರಸ್ಟ್ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ. ರಾಮನ ಸೇವೆ ಮಾಡಿದ ಭಾಗ್ಯ ನಮ್ಮದಾಗಿದೆ. |
ಕೇವಲ ಕಲ್ಲನ್ನು ಮಾತ್ರ ಬಳಕೆ ಮಾಡಲಾಗಿದೆ. ಬೇರೆ ಯಾವುದೇ ವಸ್ತುವನ್ನು ಬಳಕೆ ಮಾಡಿಲ್ಲ. ಕಲ್ಲಿನಲ್ಲಿ ಇಂಟರ್ ಲಾಕಿಂಗ್ ಸಿಸ್ಟಂ ಬಳಸಿ ನಿರ್ಮಾಣ ಮಾಡಲಾಗಿದೆ. ಸಿಡಿಲು, ಗುಡುಗು, ಬಿಸಿಲು, ಮಳೆ, ಭೂಕಂಪ ಆದರೂ ಏನೂ ಆಗದ ರೀತಿ ನಿರ್ಮಾಣ ಮಾಡಲಾಗಿದೆ.
ಕಳೆದ ಮೂರು ವರ್ಷಗಳಿಂದ ದೇವಾಲಯ ನಿರ್ಮಾಣ ಕಾರ್ಯದಲ್ಲಿ ಕೆಜಿಎಫ್ ವಿಜ್ಞಾನಿಗಳ ತಂಡ ಕೈಜೋಡಿಸಿದೆ. ರಾಮ ಮಂದಿರಕ್ಕೆ ಬಳಸಿದ ಪ್ರತಿ ಕಲ್ಲಿನ ಮೇಲೆ ಅವರ ಗುಣಮಟ್ಟದ ಮುದ್ರೆ ಇದೆ. ಮೂರು ರೀತಿಯ ಕಲ್ಲುಗಳನ್ನು ಅಳವಡಿಕೆ ಮಾಡಲಾಗಿದೆ. ಸ್ಟೀಲ್, ಸಿಮೆಂಟ್ ಬಳಸಿಲ್ಲ. ಖುದ್ದು ರಾಮಮಂದಿರದ ಕಾಮಗಾರಿಯಲ್ಲಿ ಭಾಗಿಯಾಗಿರುವ ನಮ್ಮ ಕಾರ್ಯಕ್ಕೆ ಕೇಂದ್ರದ ಗಣಿ ಮತ್ತೂ ಭೂ ವಿಜ್ಞಾನ ಇಲಾಖೆ ಕೂಡ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಡಾ.ರಾಜನ್ ಬಾಬು ತಿಳಿಸಿದರು.