ವಿರಾಜಪೇಟೆ : ವಿರಾಜಪೇಟೆ ಆರ್ಜಿ ಮುಖ್ಯ ರಸ್ತೆಯಲ್ಲಿ ಗುರುವಾರ ಕಾರು ಮತ್ತು ಬೈಕ್ಗಳ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರು ಗಂಭೀರ ಗಾಯಗೊಂಡಿದ್ದಾರೆ.
ಕೇರಳ ರಾಜ್ಯದ ಕಣ್ಣೂರಿನ ನಿವಾಸಿಗಳಾದ ಮೊಹಮ್ಮದ್ ರಿಯಾಜ್ (30) ಮತ್ತು ಇರಿಟಿ ನಿವಾಸಿ ಶಾನೀಫ್(23) ಗಾಯಗೊಂಡವರು. ಬೈಕ್ ಸವಾರರಿಬ್ಬರು ದ್ವಿಚಕ್ರ ವಾಹನದಲ್ಲಿ ಕುಶಾಲನಗರಕ್ಕೆ ತೆರಳಿ ಕೇರಳಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಕುಶಾಲನಗರದ ನಿವಾಸಿಯೊಬ್ಬರು ಕುಟುಂಬ ಸಮೇತ ಕೇರಳದಿಂದ ವಾಪಸಾಗುತ್ತಿದ್ದರು. ಈ ವೇಳೆ ವಿರಾಜಪೇಟೆ ನಗರದ ಹೊರವಲಯ ಆರ್ಜಿ ಮುಖ್ಯ ರಸ್ತೆ ಬಳಿ ಬೈಕ್ ಹಾಗೂ ಕಾರು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸಂಪೂರ್ಣ ಜಖಂಗೊಂಡು ಇಬ್ಬರೂ ಸವಾರರಿಗೂ ಗಂಭೀರ ಗಾಯಗಳಾಗಿವೆ. ಕೂಡಲೇ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಮತ್ತು ಕೇರಳದ ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.