ಹಳೆಯಂಗಡಿ: ಇಲ್ಲಿನ ಸಸಿಹಿತ್ಲು ಮುಂಡಾ ಬೀಚ್ನಲ್ಲಿ ಪ್ರವಾಸಿಗರಾಗಿ ಬಂದಿದ್ದ 9 ಮಂದಿಯ ತಂಡ ಸಮುದ್ರಕ್ಕಿಳಿದು ಅಲೆಯ ಸೆಳೆತಕ್ಕೆ ಸಿಲುಕಿದ ಘಟನೆ ಭಾನುವಾರ ಸಾಯಂಕಾಲ ನಡೆದಿದ್ದು, ಇಬ್ಬರು ನೀರುಪಾಲಾಗಿ ಮೃತಪಟ್ಟಿದ್ದಾರೆ. 7 ಮಂದಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಸಾಣೂರು ಮೂಲದ ಸುಂದರ(35) ಮತ್ತು ತೋಕೂರಿನ ದಾಮೋದರ(55) ಮೃತಪಟ್ಟವರು. ಇವರ ಸಹಿತ 11 ಮಂದಿ ಹಳೆಯಂಗಡಿ ಬಳಿಯ ತೋಕೂರು ವೆಂಕಪ್ಪ ಶೆಟ್ಟಿ ಎಂಬುವರ ಮನೆಗೆ ಶುಭಕಾರ್ಯ ನಿಮಿತ್ತ ಶುಕ್ರವಾರ ಬಂದಿದ್ದು, ಭಾನುವಾರ ಸಾಯಂಕಾಲ ಸಸಿಹಿತ್ಲು ಬೀಚ್ಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
9 ಮಂದಿ ನೀರಿಗಿಳಿದು ಆಟವಾಡುತ್ತಿದ್ದ ಸಂದರ್ಭ ಮಹಿಳೆಯೊಬ್ಬರು ನೀರಿನ ಸೆಳೆತಕ್ಕೊಳಗಾಗಿ ಮುಳುಗುತ್ತಿದ್ದಾಗ ಉಳಿದವರು ರಕ್ಷಿಸಲು ತೆರಳಿದ್ದಾರೆ. ತಕ್ಷಣ ಸ್ಥಳೀಯ ಮೀನುಗಾರರು ಮಹಿಳೆ ಸಹಿತ ಏಳು ಮಂದಿಯನ್ನು ರಕ್ಷಿಸಿದ್ದಾರೆ. ಸುಂದರ ಹಾಗೂ ದಾಮೋದರ ಅಲೆಯ ಹೊಡೆತಕ್ಕೆ ಸಿಲುಕಿ ಮುಳುಗಿದ ಕಾರಣ ರಕ್ಷಿಸಲು ಅಸಾಧ್ಯವಾಯಿತು ಎಂದು ಮೀನುಗಾರರು ಮಾಹಿತಿ ನೀಡಿದ್ದಾರೆ.
ರಕ್ಷಿಸಲ್ಪಟ್ಟ 7 ಮಂದಿಯಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಮೋದರ ಮೃತದೇಹಕ್ಕೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಕರಾವಳಿ ಕಾವಲು ಪಡೆ ಹಾಗೂ ಮಂತ್ರ ಸರ್ಫ್ಕ್ಲಬ್ ತಂಡ ನೀರುಪಾಲಾದವರನ್ನು ಹುಡುಕಲು ಸಹಕರಿಸಿದ್ದಾರೆ.