ತುಮಕೂರು: ಎನ್ಡಿಪಿಎಸ್ ನ್ಯಾಯಾಲಯದ ಜಡ್ಜ್ ಮತ್ತು ಮೂವರು ಪೊಲೀಸ್ ಅಧಿಕಾರಿಗಳಿಗೆ ಬರೆಯಲಾಗಿದ್ದ ಬಾಂಬ್ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಗಳವಾರ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಿಪಟೂರು ಮೂಲದ ರಾಜಶೇಖರ್ ಹಾಗೂ ಗುಬ್ಬಿ ತಾಲ್ಲೂಕು ಹಾಗಲವಾಡಿ ಮೂಲದ ವೇದಾಂತ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹ ದ್ವೇಷ ಕಾರಣದಿಂದ ಬಾಂಬ್ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.
ರಾಜಶೇಖರ್ ಹಾಗೂ ರಮೇಶ್ ಇಬ್ಬರು ಒಂದೇ ಕುಟುಂಬದಲ್ಲಿ ಮದುವೆಯಾಗಿದ್ದರು. ಅಲ್ಲದೆ, ಇಬ್ಬರ ನಡುವೆ ಆಸ್ತಿ ವಿಚಾರವಾಗಿ ಜಗಳವಿತ್ತು. ಹೀಗಾಗಿ ರಮೇಶ್ನನ್ನು ಸಿಲುಕಿಸಲು ಸಂಚು ರೂಪಿಸಿದ ರಾಜಶೇಖರ್, ವೇದಾಂತ್ ಎಂಬುವನ ಕೈಯಲ್ಲಿ ಬೆದರಿಕೆ ಪತ್ರ ಬರೆಸಿದ್ದಾನೆ. ಬಳಿಕ ಅದನ್ನು ಚೇಳೂರು ಅಂಚೆ ಕಚೇರಿಯಿಂದ ಎನ್ಡಿಪಿಎಸ್ ನ್ಯಾಯಾಲಯದ ಜಡ್ಜ್ ಮತ್ತು ಮೂವರು ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ಪೋಸ್ಟ್ ಮಾಡಿದ್ದಾನೆಂದು ತಿಳಿದುಬಂದಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿಗೆ ಸಂಬಳ ಸಾಕಾಗುತ್ತಿಲ್ಲವಂತೆ! ಇನ್ಫಿ ಅಳಿಯನಿಗೆ ಒಲಿಯಲಿದೆಯೇ ಈ ಪಟ್ಟ?
ಸದ್ಯ ಇಬ್ಬರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇನ್ನೊಂದೆಡೆ ಕೋರ್ಟ್ ಆವರಣದಲ್ಲಿ ಗರುಡ ಪಡೆ ಹಾಗೂ ಬಾಂಬ್ ಸ್ಕ್ವಾಡ್ನಿಂದ ಪರಿಶೀಲನೆ ನಡೆಯುತ್ತಿದೆ. ಒಟ್ಟು ಆರು ಜನರ ತಂಡದಿಂದ ಕೋರ್ಟ್ ಅವರಣದಲ್ಲಿ ಪರಿಶೀಲನೆ ನಡೆಯುತ್ತಿದೆ.
ಮೊದಲು ಹಲಸೂರುಗೇಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಸಿಟಿ ಸಿವಿಲ್ ಕೋರ್ಟ್ಗೆ ಒಂದು ಲೆಟರ್ ಹಾಗೂ ಒಂದು ಕವರ್ ಬಂದಿತ್ತು. ಅದನ್ನು ಓಪನ್ ಮಾಡಿದಾಗ ಡಿಟೋನೇಟರ್ ಹಾಗೂ ವೈರ್ಗಳು ಪತ್ತೆಯಾಗಿತ್ತು. ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದರು.
ಸೋಮವಾರ ಸಂಜೆ ಬೆದರಿಕೆ ಪತ್ರ ಬಂದಿದೆ. ತುಮಕೂರಿನ ಗುಬ್ಬಿ ತಾಲೂಕಿನಿಂದ ಪತ್ರ ಪೋಸ್ಟ್ ಆಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಡ್ರಗ್ಸ್ ನಟಿಯರ ಕೇಸು ಮಾತ್ರವಲ್ಲದೇ, ರಾಜಕೀಯ ತಿರುವು ಪಡೆದುಕೊಂಡು, ಹಲವಾರು ಕಾಂಗ್ರೆಸ್ ನಾಯಕರಿಗೆ ಮುಳುವಾಗಿರುವ ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ ಪ್ರಕರಣದಿಂದ ಹಿಂದೆ ಸರಿಯುವಂತೆಯೂ ಪತ್ರದಲ್ಲಿ ಉಲ್ಲೇಖವಿತ್ತು.
ಪತ್ರದಲ್ಲಿ ಕವರ್ ಒಳಗೆ ಬಾಂಬ್ ಇಟ್ಟಿದ್ದೇವೆ ಎಂದೂ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಶ್ವಾನದಳ ಮತ್ತು ಬಾಂಬ್ ಡಿಟೆಕ್ಟಿವ್ ತಂಡ ಪರಿಶೀಲನೆ ನಡೆಸಿದಾಗ ಕವರ್ನಲ್ಲಿ ಡಿಟೋನೇಟರ್ ಪತ್ತೆಯಾಗಿದೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದೇ ರೀತಿ, ಡಿಸಿಪಿ ರವಿಕುಮಾರ್ ಅವರ ಹೆಸರಿಗೆ ಇನ್ನೊಂದು ಪತ್ರ ಬಂದಿದೆ. ಅದರಲ್ಲಿ ಕೂಡ ರಾಗಿಣಿ ಸಂಜನಾಗೆ ಜಾಮೀನು ಸಿಗದೇ ಹೋದರೆ ಕಮಿಷನರ್ ಕಚೇರಿ ಸ್ಫೋಟಿಸುತ್ತೇವೆ ಎಂದು ಪತ್ರ ಬರೆಯಲಾಗಿತ್ತು ಎನ್ನಲಾಗಿದೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುಮ್ಮನಿರಬೇಕು. ಇಲ್ಲದಿದ್ದರೆ ಕಮಿಷನರ್ ಕಚೇರಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು.
ನಟಿಯರನ್ನು ಬಿಡುಗಡೆ ಮಾಡದಿದ್ರೆ ಬಾಂಬ್ ಬ್ಲಾಸ್ಟ್: ಉಗ್ರ ಸಂಘಟನೆ ಹೆಸರಲ್ಲಿ ಪತ್ರ!