ಚಂಡೀಗಡ: ಹರಿಯಾಣದ ಫರೀದಾಬಾದ್ ಮೂಲದ ವಿಶೇಷಚೇತನ ವಿಶಾಲ್ ಜೀವನದಲ್ಲಿ ಎರಡನೇ ಬಾರಿ ದುರದೃಷ್ಟ ಬಾಗಿಲು ತಟ್ಟಿದೆ. ಚಿಕ್ಕವಯಸ್ಸಿನಲ್ಲಿ ಹೆತ್ತ ಅಪ್ಪಅಮ್ಮನನ್ನು ಕಳೆದುಕೊಂಡು ಅನಾಥನಾಗಿದ್ದ ಆತನನ್ನು ದತ್ತು ಪಡೆದುಕೊಂಡಿದ್ದ ದಂಪತಿಯನ್ನು ಇದೀಗ ಕರೊನಾ ಬಲಿ ತೆಗೆದುಕೊಂಡಿದೆ. ಮಾನಸಿಕ ಬೆಳವಣಿಗೆಯಲ್ಲಿ ಕೊರತೆ ಹೊಂದಿರುವ ಜೊತೆಗೆ ಅಂಧನೂ ಆಗಿರುವ 16 ವರ್ಷದ ಈ ಬಾಲಕ ಮತ್ತೆ ವಿಧಿಯಾಟಕ್ಕೆ ತುತ್ತಾಗಿದ್ದಾನೆ.
ಫರೀದಾಬಾದ್ ನಿವಾಸಿಗಳಾದ ಜೈಪಾಲ್ ಮತ್ತು ಜಗವಂತಿ ದಂಪತಿ, ಸ್ವಂತ ಮಕ್ಕಳಿಲ್ಲದೆ, ವಿಶಾಲ್ನನ್ನು ಅನಾಥಾಲಯದಿಂದ ದತ್ತು ಪಡೆದಿದ್ದರು. ಆದರೆ, ಮೇ 14 ರಂದು ಜೈಪಾಲ್ ಕರೊನಾದಿಂದ ಮೃತಪಟ್ಟರೆ, ಮತ್ತೊಂದು ವಾರದೊಳಗೆ, ಮೇ 21 ರಂದು ಜಗವಂತಿ ಕೂಡ ಮೃತಪಟ್ಟರು. ಹೀಗಾಗಿ ವಿಶಾಲ್ ಮತ್ತೊಮ್ಮೆ ಅನಾಥನಾದ. ಈಗ ಚಂಡೀಗಡದ ಬಳಿ ಇರುವ ದೀಪ್ ಆಶ್ರಮ್ ಬಾಲಗೃಹದಲ್ಲಿದ್ದಾನೆ.
ಇದನ್ನೂ ಓದಿ : ಕರೊನಾ : ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಅಧಿಕ
ಈ ಬಾರಿ ವಿಶಾಲ್ನನ್ನು ಹರಿಯಾಣ ಸರ್ಕಾರವೇ ದತ್ತು ಪಡೆದಿದೆ. ಮೇ 30 ರಂದು ದೀಪ್ ಆಶ್ರಮಕ್ಕೆ ಭೇಟಿ ನೀಡಿದ ಹರಿಯಾಣ ಸಿಎಂ ಮನೋಹರ್ಲಾಲ್ ಖತ್ತರ್, ವಿಶಾಲ್ನನ್ನು ರಾಜ್ಯ ಸರ್ಕಾರ ದತ್ತುಪಡೆದು, ಅವನ ಎಲ್ಲಾ ಖರ್ಚುವೆಚ್ಚಗಳನ್ನು ವಹಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ.
“ಇಂದು(ಮೇ30) ಬಿಜೆಪಿಯ ಸೇವಾ ದಿನವೂ ಆಗಿದ್ದು, ವಿಕಲತೆಗಳನ್ನು ಹೊಂದಿರುವ ಬಾಲಕ ವಿಶಾಲ್ ಪಾಲಕರನ್ನು ಕಳೆದುಕೊಂಡ ಬಗ್ಗೆ ಪಕ್ಷದ ಕಾರ್ಯಕರ್ತರು ತಿಳಿಸಿದರು. ಈ ರೀತಿ ಅನಾಥರಾಗಿರುವ ಮಕ್ಕಳ ಪಾಲನೆಯಲ್ಲಿ ತೊಡಗಿರುವ ದೀಪ್ ಆಶ್ರಮ್ ಮತ್ತು ಇತರ ಸಂಸ್ಥೆಗಳಿಗೆ ಯಾವುದೇ ಕುಂದುಕೊರತೆ ಉಂಟಾಗದಂತೆ ರಾಜ್ಯ ಸರ್ಕಾರ ಸಹಾಯ ಒದಗಿಸಲಿದೆ” ಎಂದು ಸಿಎಂ ಖತ್ತರ್ ಹೇಳಿದ್ದಾರೆ. (ಏಜೆನ್ಸೀಸ್)
ಸ್ಟಾಫ್ ನರ್ಸ್ಗಳಿಗೆ ಹೆಚ್ಚುವರಿ 8,000 ರೂ. ಕೋವಿಡ್ ಭತ್ಯೆ : ಸಿಎಂ