ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಕೊನೆಗೊಂಡಿಲ್ಲ. ಸಚಿವರು ಪ್ರತಿಭಟನಾಕಾರರನ್ನು ಮಾತುಕತೆಗೆ ಮಾಧ್ಯಮಗಳ ಮೂಲಕ ಕರೆಯುತ್ತಲೇ ಇದ್ದಾರೆ. ಇದರ ನಡುವೆ ಸಾರಿಗೆ ನೌಕರರು ಸರ್ಕಾರದ ಮಾತಿಗೆ ಬಗ್ಗದಿದ್ದರೆ ಖಾಸಗಿ ಬಸ್ ರಸ್ತೆಗಿಳಿಸಲು ರಾಜ್ಯ ಸರ್ಕಾರ ಮೆಗಾ ಪ್ಲಾನ್ ಮಾಡಿದೆ.
ಹಾವು ಸಾಯ್ತಿಲ್ಲ..ಕೋಲು ಮುರಿಯುತ್ತಿಲ್ಲ..ಹಾಗಾಗಿದೆ ಸಾರಿಗೆ ನೌಕರರ ಪ್ರತಿಭಟನೆ ಮತ್ತು ಸರ್ಕಾರದ ನಿಲುವು. ಸಚಿವರು ಮಾತುಕತೆಗೆ ಆಹ್ವಾನಿಸಿದ್ರೂ ಕೂಡ ಮುಷ್ಕರ ನಡೆಸುತ್ತಿರುವ ಪ್ರಮುಖರು ಬರಲಿಲ್ಲ. ಇದು ಸರ್ಕಾರದ ಚಿಂತೆಗೆ ಕಾರಣವಾಗಿದ್ದು ಇದಕ್ಕಾಗಿ ಸಚಿವ ಸವದಿ ಮೆಗಾ ಪ್ಲಾನ್ ಮಾಡಿದ್ದಾರೆ.
ಮುಷ್ಕರ ಕೈಬಿಡದಿದ್ದರೆ ಖಾಸಗಿ ವಾಹನ ಓಡಿಸಲು ಪ್ಲಾನ್
ಖಾಸಗಿ ಬಸ್ಗಳನ್ನು ಓಡಿಸಲು ಚಿಂತನೆ ಮಾಡಿರುವ ಸರ್ಕಾರ, ಚರ್ಚೆಗಾಗಿ ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಬಿಗಿ ಬಂದೋಬಸ್ತ್ ನೊಂದಿಗೆ ಖಾಸಗಿ ವಾಹನ ಓಡಿಸಲು ಚಿಂತನೆ ಮಾಡಿದ್ದಾರೆ.
ಜಿಲ್ಲೆಯಿಂದ ತಾಲೂಕು, ಗ್ರಾಮಗಳಿಗೆ ಪ್ರತ್ಯೇಕ ವ್ಯವಸ್ಥೆ
ಖಾಸಗಿ ಬಸ್ಗಳ ಲಭ್ಯತೆಯ ಆಧಾರದ ಮೇಲೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. ಈ ಪ್ರಕಾರ ರಾಜ್ಯದಿಂದ ಜಿಲ್ಲಾ ಕೇಂದ್ರಗಳಿಗೆ ಬಸ್, ಅಲ್ಲಿಂದ ತಾಲೂಕು ಕೇಂದ್ರ ಮತ್ತು ಗ್ರಾಮ ಗ್ರಾಮಗಳ ಓಡಾಟಕ್ಕೂ ವ್ಯವಸ್ಥೆ ಕಲ್ಪಿಸಲು ಯೋಚಿಸಿದ್ದಾರೆ. ಬೆಂಗಳೂರಿಗೂ ಕೂಡ ಪ್ರತ್ಯೇಕ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಕಾರು, ಜೀಪ್ ಮುಂತಾದ ಖಾಸಗಿ ವಾಹನ ಬಳಸಿಕೊಳ್ಳುವ ಬಗ್ಗೆಯೂ ಚರ್ಚೆ ನಡೆದಿದೆ.