ಬೆಂಗಳೂರು: ದೇಶ ದ್ರೋಹದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ಇಬ್ಬರು ಯುವತಿಯರು ಇಂದು ಜೈಲಿನಲ್ಲಿ ಉಪಾಹಾರ ಸೇವಿಸಿದ್ದಾರೆ.
ಎರಡು ದಿನಗಳ ಹಿಂದೆ ಜೈಲು ಆಹಾರ ಸೇವನೆ ನಿರಾಕರಿಸಿದ್ದ ಅಮೂಲ್ಯ ಹಾಗೂ ಆರುದ್ರಾ ಇಂದು ಪಲಾವ್ ಸೇವಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯ ಹಾಗೂ ಟೌನ್ ಹಾಲ್ನಲ್ಲಿ ಕಾಶ್ಮೀರ ಸ್ವಾತಂತ್ರ್ಯದ ಬ್ಯಾನರ್ ಹಿಡಿದಿದ್ದ ಆರುದ್ರಾರನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಟ್ಟಿದ್ದಾರೆ. ಇಬ್ಬರು ಜೈಲಿನ ಒಂದೆ ಕೊಠಡಿಯಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ.
ತಲೆ ನೋವು ಮಾತ್ರೆ ಸೇವಿಸಿದ ಆರುದ್ರಾ: ತೀವ್ರ ತಲೆನೋವಿನಿಂದ ಬಳಲುತ್ತಿರುವ ಆರೋಪಿ ಆರುದ್ರಾ, ಜೈಲು ಅಧಿಕಾರಿಗಳಿಗೆ ಮಾತ್ರೆ ಒದಗಿಸುವಂತೆ ಕೋರಿದರು. ಕೂಡಲೇ ಜೈಲು ಅಧಿಕಾರಿಗಳು ಆರುದ್ರಾ ತಂದೆಗೆ ಕರೆ ಮಾಡಿ ಮಾತ್ರೆ ಬಗ್ಗೆ ಮಾಹಿತಿ ಕೋರಿದ್ದರು. ಶನಿವಾರ ರಾತ್ರಿ ಆರುದ್ರಾ ತಂದೆ ಪರಪ್ಪನ ಅಗ್ರಹಾರಕ್ಕೆ ತೆರಳಿ ಅಧಿಕಾರಿಗಳಿಗೆ ಮಾತ್ರೆ ನೀಡಿದ್ದರು. ಅಧಿಕಾರಿಗಳಿಂದ ಮಾತ್ರೆ ಪಡೆದ ಆರುದ್ರಾ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ. (ದಿಗ್ವಿಜಯ ನ್ಯೂಸ್)