ಚಿತ್ರದುರ್ಗ: ಅವ್ಯವಸ್ಥೆ ಆಗರವಾಗಿರುವ ನಗರದ ಸಂಚಾರ ವ್ಯವಸ್ಥೆ ಸುಗಮಕ್ಕಾಗಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ 10 ದಿನಗಳಿಂದ ಬಿಡಿ ರಸ್ತೆಯಲ್ಲಿ ನಡೆಸಿರುವ ಈ ಕಾರ್ಯಾಚರಣೆಯನ್ನು ಶನಿವಾರ ಮೆದೇಹಳ್ಳಿ ರಸ್ತೆಗೆ ವಿಸ್ತರಿಸಿದ್ದಾರೆ. ಬೆಳಗ್ಗೆ 7.30 ರಿಂದ 11.30 ರವರೆಗೆ ನಡೆದ ಕಾರ್ಯಾಚರಣೆಯಲ್ಲಿ 25ಕ್ಕೂ ಹೆಚ್ಚು ಪೊಲೀಸರು,ಮೆದೇಹಳ್ಳಿ ರಸ್ತೆ ಅಂಗಡಿ ಮುಂಗಟ್ಟು,ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆ ಅತಿಕ್ರಮಿಸದಂತೆ ಎಚ್ಚರಿಕೆ ನೀಡಿದರು.
ಅಂಗಡಿ,ಹೋಟೆಲ್ ಮತ್ತಿತರ ವಾಣಿಜ್ಯಮಳಿಗೆಗಳ ಮಾಲೀಕರು ರಸ್ತೆಯಲ್ಲಿಟ್ಟಿದ್ದ ಬೋರ್ಡ್ಗಳನ್ನು ತೆರವುಗೊಳಿಸಿದರು. ವಾಹನ ಸಂಚಾರ,ಪಾದಚಾರಿಗಳಿಗೆ ಅಡ್ಡಿಯಾಗುತ್ತಿದ್ದ ವಸ್ತುಗಳನ್ನೂ ತೆರವುಗೊಳಿಸಿದ್ದಲ್ಲದೆ,ಇನ್ನು ಮುಂದೆ ಇಟ್ಟರೆ ಮುಟ್ಟುಗೋಲು ಹಾಕಿ ಕೊಳ್ಳಲಾಗುವುದು. ಒಂದೊಂದು ದಿನ,ಈ ರಸ್ತೆಯ ಒಂದು ಬದಿ ವಾಹನಗಳ ಪಾರ್ಕಿಂಗ್ಗೆ ಅವಕಾಶವಿರುತ್ತದೆ. ನಿಯಮ ಉಲ್ಲಂ ಘಿಸುವ,ಮನಸೋ ಇಚ್ಛೆ ರಸ್ತೆ ಅತಿಕ್ರಮಿಸುವ ವರ್ತಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಬಿಡಿ ರಸ್ತೆಯ ಪ್ರವಾಸಿ ಮಂದಿರದಿಂದ,ಹೊಳಲ್ಕೆರೆ ರಸ್ತೆ ಸಂಗೋಳ್ಳಿ ರಾಯಣ್ಣ ವೃತ್ತದವರೆಗೆ ಈಗಾಗಲೇ ನಡೆದಿರುವ ಕಾರ್ಯಾಚರಣೆ ವೇಳೆ,ಕಾರು,ದ್ವಿಚಕ್ರ ವಾಹನ ಗಳನ್ನು ನಿಗದಿತ ಸ್ಥಳಗಳಲ್ಲೇ ನಿಲ್ಲಿಸಬೇಕೆಂದು ವಾಹನ ಸವಾರರಿಗೆ ತಿಳಿಸಲಾಗಿದೆ. ಇವುಗಳ ಪಾರ್ಕಿಂಗ್ಗಾಗಿ ಗುರುತಿಸಿದ್ದ ಸ್ಥಳಗಳಿಗೆ ಹಿಂದೆಯೇ ಡಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಲಕ್ಷ್ಮೀಬಜಾರ್,ವಾಸವಿ ಮಹಲ್,ಸಂತೆಹೊಂಡ,ಗುಜರಿ ರಸ್ತೆಗಳ ಸಹಿತ ನಗರದ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿಯೂ ಈ ಕಾರ್ಯಾ ಚರಣೆ ನಡೆಯಲಿದೆ. ಮೇದೆಹಳ್ಳಿ ರಸ್ತೆಯಲ್ಲಿ ಇನ್ನೂ 10 ದಿನಗಳ ಕಾಲ ಪೊಲೀಸರನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗುವುದು ಎಂ ದು ಸಂಚಾರಿ ಠಾಣೆ ಪಿಎಸ್ಐ ರಾಜು ತಿಳಿಸಿದರು. ಪಿಎಸ್ಐ ರಘುನಾಥ್ ಮತ್ತವರ ಸಿಬ್ಬಂದಿ ಇದ್ದರು.
ಟ್ರಾಫಿಕ್ ಸಿಗ್ನಲ್
ವಿವಿಧ ವೃತ್ತಗಳಲ್ಲಿದ್ದ ಟ್ರಾಫಿಕ್ಸಿಗ್ನಲ್ಗಳನ್ನು ತೆಗೆದುಹಾಕಲಾಗಿದೆ. ಹಲವು ಕಡೆಗಳಲ್ಲಿದ್ದ ಸಿಸಿ ಕ್ಯಾಮರಾಗಳೂ ಈಗ ಇಲ್ಲವಾಗಿವೆ. ನ ಗರದ ಡಿವೈಎಸ್ಪಿ ಕಚೇರಿಯಲ್ಲಿದ್ದ ಟ್ರಾಫಿಕ್ ಮ್ಯಾನೇಜ್ ಸಿಸ್ಟಮ್ ಕೂಡ ಈಗ ಇಲ್ಲವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಮಾಲೀಕರಿಗೆ ಸ್ವಯಂ ಚಾಲಿತವಾಗಿ ನೋಟಿಸ್ ಕಳಿಸುವ ಈ ವ್ಯವಸ್ಥೆ ಸ್ಥಗಿತಗೊಂಡು ಎರಡೂವರೆ ವರ್ಷಗಳಾಗಿದೆ. ಬಿಡಿ ರಸ್ತೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ(ಎಸ್ಬಿಎಂ)ಹಾಗೂ ಗಾಂಧಿ ಸರ್ಕಲ್ ಬಳಿ ಸ್ವಯಂ ಚಾಲಿತ ಟ್ರಾಫಿಕ್ ಸಿಗ್ನಲ್ಗಳನ್ನು ಸದ್ಯದಲ್ಲೇ ಅಳವಡಿಸಲಾಗುತ್ತಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
—-