ಮೈಸೂರು: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ಪೊಲೀಸರ ಮೇಲಿನ ಹಲ್ಲೆ ವಿಡಿಯೋ ತುಂಬಾ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ಆಗುತ್ತಿದೆ. ದಂಡ ವಸೂಲಿ ವೇಳೆ ಬೈಕ್ ಸವಾರ ಮೃತಪಟ್ಟಿದ್ದಕ್ಕೆ ಸ್ಥಳೀಯರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಪೆಟ್ಟು ತಿಂದ ಪೊಲೀಸರಿಗೆ ಇಲಾಖೆಯು ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಪೊಲೀಸರ ದಂಡ ವಸೂಲಿ ದೌರ್ಜನ್ಯವೇ ಅಪಘಾತಕ್ಕೆ ಕಾರಣ ಎಂಬ ಆರೋಪವಿದೆ. ಇದೇ ಕಾರಣಕ್ಕೆ ಸ್ಥಳೀಯರು ಸ್ಥಳಿಸಿದ್ದಾರೆನ್ನಲಾಗಿದೆ. ಆದರೆ, ಬೈಕ್ ಸವಾರ ಸಾವಿಗೆ ಪೊಲೀಸರು ಕಾರಣವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜಾಲತಾಣದಲ್ಲಿಯೂ ಪರ-ವಿರೋಧ ಚರ್ಚೆ ಜೋರಾಗಿಯೇ ಇದೆ. ಇದರ ನಡುವೆಯೇ ಪ್ರಶಂಸನಾ ಪತ್ರ ನೀಡಿರುವುದು ಅಚ್ಚರಿಯಾದರೂ ಸತ್ಯವಾಗಿದೆ.
ಇದನ್ನೂ ಓದಿರಿ: ಪಬ್ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದ ಕಾಮುಕ: ಕೃತ್ಯಕ್ಕೂ ಮುನ್ನ ಈತನ ಸಂಚು ಭಯಾನಕ!
ಮೈಸೂರು ಪೊಲೀಸ್ ಆಯುಕ್ತರು ಪೆಟ್ಟು ತಿಂದ ಪೊಲೀಸರಿಗೆ ಇಂದು ಪ್ರಶಂಸನಾ ಪತ್ರ ವಿತರಣೆ ಮಾಡಿದರು. ಅಪಘಾತ ಸಮಯದಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಕ್ಕೆ ಈ ಗೌರವ ನೀಡಲಾಗಿದೆ. ಅಪಘಾತದ ಬೆನ್ನಲ್ಲೇ ಸ್ಥಳಕ್ಕೆ 112 ತುರ್ತು ವಾಹನ ಬಂದಿತ್ತು. ತುರ್ತು ಸ್ಪಂದನ ವಾಹನ ಸಿಬ್ಬಂದಿ ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲದೆ, ಶೀಘ್ರದಲ್ಲೇ ಮೃತನ ದೇಹವನ್ನು ಶವಾಗಾರಕ್ಕೆ ತಲುಪಿಸಿದ್ದರು. ಅಪಘಾತಗೊಂಡಿದ್ದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಗೌರವ ಪುರಸ್ಕೃತರು ಈ ಕೆಳಕಂಡಂತಿದ್ದಾರೆ.
1. ಸ್ವಾಮಿನಾಯಕ, ಎ.ಎಸ್.ಐ, ವಿ.ವಿ.ಪುರಂ ಸಂಚಾರ ಠಾಣೆ
2. ಮಾದೇಗೌಡ, ಎ.ಎಸ್.ಐ. ವಿ.ವಿ.ಪುರಂ ಸಂಚಾರ ಠಾಣೆ
3. ಲೋಕೇಶ್. ಎ.ಎಂ. ಸಿ.ಹೆಚ್.ಸಿ. 416, ವಿ.ವಿ.ಪುರಂ ಸಂಚಾರ ಠಾಣೆ
4. ಶಿವನಾಗ, ಸಿ.ಪಿ.ಸಿ. 948, ವಿ.ವಿ.ಪುರಂ ಸಂಚಾರ ಠಾಣೆ
5. ರಮೇಶ್, ಸಿ.ಪಿ.ಸಿ. 602, ವಿ.ವಿ.ಪುರಂ ಸಂಚಾರ ಠಾಣೆ
6. ಗಣೇಶ್, ಹೆಚ್.ಆರ್., ಸಿ.ಹೆಚ್.ಸಿ. 603, ವಿಜಯನಗರ ಠಾಣೆ
7. ಭಾಸ್ಕರ್, ಎ..ಪಿ.ಸಿ 133, ಸಂಜೀವಿನಿ ತುರ್ತು ಚಿಕಿತ್ಸಾ ವಾಹನ ಚಾಲಕ
8. ಪಿ. ಮಂಜು, ಎ.ಪಿ.ಸಿ. 123, 112 ವಾಹನ ಚಾಲಕ
ಘಟನೆ ಹಿನ್ನೆಲೆ ಏನು?
ಮೈಸೂರಿನ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಎಚ್.ಡಿ. ಕೋಟೆ ತಾಲೂಕಿನ ಕನ್ನೇನಹಳ್ಳಿ ನಿವಾಸಿ ಸಿವಿಲ್ ಇಂಜಿನಿಯರ್ ದೇವರಾಜು (46) ಮೃತಪಟ್ಟವರು. ರಿಂಗ್ ರಸ್ತೆಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಡ್ಡಗಟ್ಟಿದಾಗ ದೇವರಾಜು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಅದೇ ಸಮಯಕ್ಕೆ ಬರುತ್ತಿದ್ದ ವ್ಯಾನ್ವೊಂದು ಅವರಿಗೆ ಹಿಂದುಗಡೆಯಿಂದ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಪೊಲೀಸರಿಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಪೊಲೀಸರ ಗರುಡ ವಾಹನವನ್ನೂ ಉರುಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಉದ್ರಿಕ್ತ ಸಾರ್ವಜನಿಕರಿಂದ ಮೂವರು ಪೊಲೀಸರ ಮೇಲೆ ಹಲ್ಲೆ ನಡೆದಿದ್ದು, ಪೊಲೀಸ್ ವಾಹನ ಸಂಪೂರ್ಣ ಜಖಂಗೊಂಡಿತ್ತು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿರಿ: ಒಂದಲ್ಲ, ಎರಡಲ್ಲ 40 ಹಾವುಗಳು…ಸಾಲದಕ್ಕೆ 2 ಚೇಳುಗಳು! ಇದು ಅಂಗನವಾಡಿಯಲ್ಲ ಹಾವಿನ ಮನೆ
ಟಾಲಿವುಡ್ನಲ್ಲಿ ಕನ್ನಡತಿಯ ಸಂಚಲನ!; ರಶ್ಮಿಕಾಗೆ ಪೈಪೋಟಿ ಕೊಡಲಿದ್ದಾರೆಯೇ ಕೃತಿ ಶೆಟ್ಟಿ?