ಹೈದರಾಬಾದ್: ಸುರಕ್ಷಿತ ವಾತಾವರಣ ಇರಬೇಕಾದ ಅಂಗನವಾಡಿಯಲ್ಲೇ ಪ್ರಾಣ ತೆಗೆಯುವ ಅಪಾಯಕಾರಿ ಜೀವಿಗಳನ್ನು ಕಂಡಾಗ ಮಕ್ಕಳ ಪಾಲಕರು ಕಂಗಾಲಾಗುವುದಂತು ಖಂಡಿತ. ಇಂಥದ್ದೇ ಒಂದು ಘಟನೆ ತೆಲಂಗಾಣದ ಮೆಹಬೂಬಬಾದ್ ಜಿಲ್ಲೆಯಲ್ಲಿ ಕಂಡುಬಂದಿದೆ.
ಒಂದಲ್ಲ, ಎರಡಲ್ಲ ಬರೋಬ್ಬರಿ 40 ಹಾವುಗಳು ಅಂಗನವಾಡಿ ಕೇಂದ್ರದ ಒಳಗೆ ಪತ್ತೆಯಾಗಿವೆ. ಇದರೊಂದಿಗೆ ಎರಡು ವಿಷಕಾರಿ ಚೇಳು ಸಹ ಪತ್ತೆಯಾಗಿರುವುದು ಮಕ್ಕಳ ಜೀವಕ್ಕೀರುವ ಬೆಲೆ ಇಷ್ಟೇನಾ? ಎಂಬಂತಿದೆ. ಆಡಳಿತ ವರ್ಗದ ದುರಾವಸ್ಥೆಗೂ ಇದು ಕನ್ನಡಿಯಂತಿದೆ.
ಅಂದಹಾಗೆ ಇಂದು ಕಂಡುಬಂದಿದ್ದು, ಮೆಹಬೂಬಬಾದ್ ಜಿಲ್ಲೆಯ ನೆಲ್ಲಿಕುಡುರು ಮಂಡಲದ ಕೋಟಪಲ್ಲಿಯ ಅಂಗನವಾಡಿ ಕೇಂದ್ರದಲ್ಲಿ. ಸಾಮಾನ್ಯವಾಗಿ ಒಂದು ವಿಷಕಾರಿ ಹಾವು ನೋಡಿದರೆ ನಮ್ಮ ಎದೆಯಲ್ಲಿ ನಡುಕು ಉಂಟಾಗುತ್ತದೆ. ಅಂತಹುದರಲ್ಲಿ 40 ಹಾವು ಎರಡು ಚೇಳು ಒಟ್ಟಿಗೆ ಕಾಣಿಸಿಕೊಂಡರೆ ಏನಾಗಬೇಡ.
ಆರಂಭದಲ್ಲಿ ಕೇವಲ ಒಂದು ಹಾವಿನ ಮರಿಯನ್ನು ನೋಡುವ ಅಂಗನವಾಡಿ ಶಿಕ್ಷಕಿ ಶ್ರೀಜ್ಯೋತಿ ಆಚೆ ಓಡಿ ಬಂದು ಬಾಗಿಲು ಬಂದ್ ಮಾಡುತ್ತಾರೆ. ಬಳಿಕ ಗ್ರಾಮಸ್ಥರನ್ನು ಕರೆಯುತ್ತಾರೆ. ಸ್ಥಳಕ್ಕೆ ಆಗಮಿಸುವ ಗ್ರಾಮಸ್ಥರು ಹಾವು ಅಡಗಿದ್ದ ಕಲ್ಲನ್ನು ತೆಗೆದಾಗ ಎಲ್ಲರು ಬೆಚ್ಚಿ ಬೀಳುತ್ತಾರೆ. ಏಕೆಂದರೆ ಅಲ್ಲಿ ಬರೋಬ್ಬರಿ 40 ಹಾವಿನ ಮರಿಗಳು ಮತ್ತು ಎರಡು ಚೇಳುಗಳು ಇರುತ್ತವೆ. ಅದೃಷ್ಟವಶಾತ್ ಈ ವೇಳೆ ಅಂಗನವಾಡಿಯಲ್ಲಿ ಮಕ್ಕಳಿರಲಿಲ್ಲ.
ಹಳೆಯ ಕಟ್ಟಡವಾದ್ದರಿಂದ ಹಾವು ಚೇಳುಗಳು ಸುಲಭವಾಗಿ ಒಳಗೆ ಬರುತ್ತವೆ. ಹೀಗಾಗಿ ತಕ್ಷಣ ಕಟ್ಟಡವನ್ನು ದುರಸ್ಥಿಗೊಳಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ, ಅಂಗನವಾಡಿ ಕೇಂದ್ರಕ್ಕೆ ವಿಷಕಾರಿ ಹಾವುಗಳು ಬರುತ್ತಿರುವ ಸುದ್ದಿಯನ್ನು ಕೇಳಿ ಹಾಗೂ ಕಣ್ಣಾರೆ ಕಂಡ ಮಕ್ಕಳ ಪಾಲಕರಲ್ಲಿ ಭಯ ಆವರಿಸಿದ್ದು, ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿರಿ: ಕರೊನಾನಿಯಮ ಉಲ್ಲಂಘನೆಗೆ ದಂಡಾಸ್ತ್ರ: ಅಂಗಡಿಮಾಲೀಕರಿಗೆ 5 ಸಾವಿರ ರೂ. ದಂಡ
ಇನ್ನು ಅಂಗನವಾಡಿ ಮತ್ತು ಶಾಲೆಗಳಲ್ಲಿ ಹಾವು ಕಡಿದು ಮಕ್ಕಳು ಮೃತಪಟ್ಟ ಉದಾಹರಣೆಗಳು ಸಹ ನಮ್ಮ ಕಣ್ಣ ಮುಂದಿವೆ. ಹೀಗಾಗಿ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಕಲಿಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕೇ ಹೊರತು. ಭಯದ ವಾತಾವರಣವಲ್ಲ. (ಏಜೆನ್ಸೀಸ್)
ಸಿನಿಮಾ ನಿರ್ಮಾಪಕ ಶಂಕರೇಗೌಡ ಬಂಧನ; ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪ್ರೊಡ್ಯೂಸರ್
ಮೆಣಸಿನಕಾಯಿ ತುಂಬಿದ್ದ ಲಾರಿಗೆ ಬೆಂಕಿ; ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ