ತಿರುಮಲ: ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿದ್ದ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯ ಇದಾಗಲೇ ತೆರೆಯಲಾಗಿದ್ದು, ಭಕ್ತರಿಗೆ ದರ್ಕಶನದ ಅವಕಾಶ ಕಲ್ಪಿಸಲಾಗಿದೆ.
ಆನ್ಲೈನ್ ಮೂಲಕ ಟಿಕೆಟ್ ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದಾಗಲೇ ಭಕ್ತಾದಿಗಳು ವೆಂಕಟೇಶ್ವರನ ದರ್ಶನಕ್ಕೆ ಸಾಲುಗಟ್ಟಿ ಬರುತ್ತಿದ್ದಾರೆ.
ಆದರೆ ಇಲ್ಲಿಯವರೆಗೆ ದಿನಕ್ಕೆ ಕೇವಲ ಆರು ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಟಿಟಿಡಿ (ತಿರುಪತಿ ತಿರುಮಲ ಟ್ರಸ್ಟ್) ಆನ್ಲೈನ್ ಟಿಕೆಟ್ ಮೂಲಕ ಟಿಕೆಟ್ ಬುಕ್ ಮಾಡುವವರು ಆರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅವರು ಇನ್ನೊಂದು ದಿನದವರೆಗೆ ಕಾಯಲೇಬೇಕಾದ ಅನಿವಾರ್ಯತೆ ಇತ್ತು.
ಇದನ್ನೂ ಓದಿ: ಅಂಬರೀಶ್ ಸ್ಮಾರಕ ನಿರ್ಮಾಣ ಎಲ್ಲಿ? ಎಷ್ಟು ವೆಚ್ಚದಲ್ಲಿ ಆಗಲಿದೆ ಗೊತ್ತಾ?
ಇದೀಗ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರುವುದನ್ನು ಗಮನಿಸಿರುವ ಟಿಟಿಡಿ ಆನ್ಲೈನ್ ಟಿಕೆಟ್ ಕೋಟಾದ ಪ್ರಮಾಣವನ್ನು ಹೆಚ್ಚಿಸಿದೆ. 6 ಸಾವಿರ ಭಕ್ತರಿಗೆ ದರ್ಶನಕ್ಕೆ ಆನ್ಲೈನ್ ಟಿಕೆಟ್ ಬದಲು ಇದೀಗ 9 ಸಾವಿರ ಭಕ್ತರಿಗೆ ಟಿಕೆಟ್ ನೀಡಲು ಯೋಜನೆ ರೂಪಿಸಲಾಗಿದೆ. ಜುಲೈ 1ರಿಂದ ಪ್ರತಿದಿನ 9 ಸಾವಿರ ಭಕ್ತರಿಗೆ ಅವಕಾಶ ಸಿಗಲಿದೆ.
ತಿರುಪತಿ ತಿರುಮಲ ದೇವಸ್ಥಾನ ಇನ್ನು ಮುಂದೆ 300 ರೂ.ಗಳ ಆನ್ಲೈನ್ ಟಿಕೆಟ್ ನೀಡಲಿದೆ. ಪ್ರತಿದಿನ 9 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದರ ಜತೆಗೆ ಪ್ರತಿದಿನ ಮೂರು ಸಾವಿರ ಸರ್ವದರ್ಶನ ಟಿಕೆಟ್ಗಳನ್ನು ನೀಡಲಾಗುತ್ತದೆ. ಒಂದು ದಿನ ಮುಂಚಿತವಾಗಿ ಈ ಟಿಕೆಟ್ ತೆಗದುಕೊಳ್ಳಬೇಕಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.
10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ಇಲ್ಲ ಎಂದೂ ಮಂಡಳಿ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)