ಬೆಳಗಾವಿ: ಬೆಳಗಾವಿ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡುವುದು ದಿ.ಸುರೇಶ ಅಂಗಡಿ ಅವರ ಕನಸಾಗಿತ್ತು. ಅವರ ಕನಸು ಈಡೇರಿಸಲು ಅಧಿಕಾರಿಗಳು ಸಹಕಾರ ನೀಡಬೇಕು ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಸೋಮವಾರ ನಗರದ ರೈಲ್ವೆ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೆಳಗಾವಿ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಒಟ್ಟು 190.02 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಹೊಸ ರೈಲ್ವೆ ನಿಲ್ದಾಣದ ಕಟ್ಟಡಕ್ಕೆ 44.9 ಕೋಟಿ ರೂ., ಕೋಚಿಂಗ್ ಡಿಪೋ ಮತ್ತು ಸೇವಾ ಕಟ್ಟಡಕ್ಕೆ 46.67 ಕೋಟಿ ರೂ., ವಿದ್ಯುತ್, ಸಿಗ್ನಲಿಂಗ್ ಮತ್ತು ಟೆಲಿಕಾಂ ಸಂಬಂಧಿತ ಕೆಲಸಗಳಿಗೆ 79.76 ಕೋಟಿ ರೂ., ಎರಡನೇ ಪ್ರವೇಶ ಕಟ್ಟಡಕ್ಕೆ 18.69 ಕೋಟಿ ರೂ. ಬಳಕೆ ಮಾಡಲಾಗುತ್ತಿದೆ. ಒಪ್ಪಂದದ ಪ್ರಕಾರ ಮಾರ್ಚ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಯುಗಾದಿ ವೇಳೆಗೆ ಕಟ್ಟಡ ಲೋಕಾರ್ಪಣೆ ಮಾಡಲು ಅಧಿಕಾರಿಗಳು ಅನುವು ಮಾಡಿಕೊಡಬೇಕು ಎಂದರು. ಬೆಳಗಾವಿ ರೈಲ್ವೆ ವಿಭಾಗದ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ, ಸ್ಟೇಷನ್ ಮಾಸ್ಟರ್ ಎಸ್.ಗಿರೀಶ, ವಾಸ್ತು ಶಿಲ್ಪಿ ಅಭಿಯಂತ ಬಕುಲ್ ಜೋಶಿ, ಎಡಿಇ ಎನ್.ಹಸನುದ್ದಿನ್ ಇತರರು ಇದ್ದರು.